ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆಗೆ ರೆಡಿಯಾಗಿದ್ದಾರೆ. ಈ ಬಾರಿ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ. ಮೀರುವ ಸಾಧ್ಯತೆ ಇದೆ. ಕಳೆದ ಬಾರಿ ಲೋಕಸಭಾ ಚುನಾವಣೆ ಗಮನ ದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಸಿದ್ದರಾಮಯ್ಯ, ಈ ಬಾರಿ ಲೆಕ್ಕಾಚಾರದ ಬಜೆಟ್ ಮಂಡಿಸುವ ಸಾಧ್ಯತೆ ಹೆಚ್ಚು.
ಸಿದ್ದರಾಮಯ್ಯ ಬಜೆಟ್ ಸವಾಲು
ಕಳೆದ ಬಾರಿ 3.71ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ರು. ಆ ಬಜೆಟ್ಟಿನಲ್ಲಿ ರಾಜಸ್ವ ವೆಚ್ಚವೇ 2.90 ಲಕ್ಷ ಕೋಟಿ ದಾಟಿತ್ತು. ಗ್ಯಾರಂಟಿಗಾಗಿ 52 ಸಾವಿರ ಕೋಟಿಗೂ ಹೆಚ್ಚು ವೆಚ್ಚವಾಗಿತ್ತು. ಬಂಡವಾಳ ವೆಚ್ಚ ಕೇವಲ 55 ಸಾವಿರ ಕೋಟಿಗೆ ಇಳಿದಿತ್ತು. ಈ ಬಾರಿ ರಾಜಸ್ವ ವೆಚ್ಚ ದಾಟದಂತೆ ನೋಡಿಕೊಳ್ಳೋದು ಮತ್ತು ಗ್ಯಾರಂಟಿಗಳ ಹೊರೆಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡುವ ಸವಾಲು ಸಿದ್ಧರಾಮಯ್ಯ ಎದುರಿಗೆ ಇದೆ. ಜೊತೆಗೆ ದೊಡ್ಡ ದೊಡ್ಡ ಯೋಜನೆಗಳಿಗೆ ಅನುದಾನದ ಸಾಲುತ್ತಿಲ್ಲ. ಕೇಂದ್ರದಿಂದ ನಿರೀಕ್ಷೆ ಮಾಡಿದಷ್ಟು ಅನುದಾನ ಸಿಗುತ್ತಿಲ್ಲ. ಹೀಗಾಗಿ ಸಿದ್ಧರಾಮಯ್ಯ ಅವರ ಎದುರು ದೊಡ್ಡ ಸವಾಲೇ ಇದೆ. ಇವುಗಳನ್ನೆಲ್ಲ ಸರಿ ಮಾಡೋಕೆ ಆದಾಯದ ಮೂಲಗಳನ್ನು ಹುಡುಕಬೇಕು. ಉಳಿತಾಯದ ದಾರಿಗಳನ್ನೂ ನೋಡಿಕೊಳ್ಳಬೇಕು. ಇವುಗಳಿಗಾಗಿ ಹೊಸ ಯೋಜನೆಗಳ ನಿರೀಕ್ಷೆ ಇದೆ.
ಸಿದ್ಧರಾಮಯ್ಯ ಎದುರು ಒಂದೇ ಮಾರ್ಗ
ಆರ್ಥಿಕ ಶಿಸ್ತಿಗೆ ಹೆಸರಾದ ಸಿದ್ದರಾಮಯ್ಯ ಅವರ ಬಳಿ ಈಗ ಉಳಿದಿರೋದು ಒಂದೇ ಮಾರ್ಗ. ಬಜೆಟ್ ಗಾತ್ರ ಹೆಚ್ಚಿಸುವುದು ಹಾಗೂ ಅದಕ್ಕೆ ಅನುಗುಣವಾಗಿ ಸಾಲ ಪಡೆಯುವ ಪ್ರಮಾಣವನ್ನೂ ಏರಿಕೆ ಮಾಡಿ ಕೊಳ್ಳುವುದು.
ಆ ಮೂಲಕ ವಿತ್ತೀಯ ಕೊರತೆಯನ್ನು ಸರಿದೂಗಿಸೋದುದು. ಏಕೆಂದರೆ ಸಾಲದ ಮಿತಿಯನ್ನು ರಾಜ್ಯ ಜಿಡಿಪಿಯ ಶೇ.3 ಒಳಗೆ ತೋರಿಸೋದು. ಇಂಥಾದ್ದೊಂದು ಸರ್ಕಸ್ ಈ ಬಾರಿ ಅನಿವಾರ್ಯ ಎನ್ನಲಾಗ್ತಿದೆ. ಸುಮಾರು 1 ಲಕ್ಷದ 52 ಸಾವಿರ ಕೋಟಿ ಸಾಲ ಮಾಡುವುದಕ್ಕೆ ಅಂದಾಜಿಸಿದ್ದ ಸಿದ್ದರಾಮಯ್ಯ, ಈ ಬಾರಿ ಇನ್ನೂ ಹೆಚ್ಚಿನ ಅಂದರೆ ಸುಮಾರು 1.25 ಲಕ್ಷ ಕೋಟಿವರೆಗೂ ಸಾಲ ಪಡೆಯಲು ಯೋಜನೆ ರೂಪಿಸಿರುವ ಮಾಹಿತಿ ಇದೆ.
ಹೊಸದಾಗಿ ಮದ್ಯ ದರ ಏರಿಕೆ ಇಲ್ಲ..!
ಕಳೆದ ವರ್ಷದ ಬಜೆಟ್ ಆದಾಗಿನಿಂದ ಮದ್ಯದ ದರ 3 ಬಾರಿ ಏರಿಕೆಯಾಗಿದೆ. ದರ ಏರಿಕೆ ಮಾಡುವುದಕ್ಕೆ ಬಜೆಟ್ ಮಂಡನೆಯನ್ನೇ ಕಾಯಬೇಕಿಲ್ಲ. ಹೀಗಾಗಿ ಹೊಸದಾಗಿ ಮದ್ಯದ ದರವನ್ನಾಗಲೀ, ಇನ್ನಿತರ ನೋಂದಣಿ ಮತ್ತಿತರ ಶುಲ್ಕಗಳನ್ನಾಗಲಿ ಹೆಚ್ಚಿಸುವ ಸಾಧ್ಯತೆ ಇಲ್ಲ. ಈ ಬಾರಿ ವಿವಿಧ ತೆರಿಗೆ ಮೂಲಗಳಿಂದ ಸುಮಾರು 2 ಲಕ್ಷ ಕೋಟಿ ವರೆಗೂ ಸಂಗ್ರಹಿಸುವ ಲೆಕ್ಕಾಚಾರದಲ್ಲಿದ್ದಾರೆ ಸಿದ್ದರಾಮಯ್ಯ. ಅದಕ್ಕಾಗಿ ಕೆಲವು ಸೆಸ್ ಮತ್ತು ಸಣ್ಣಪುಟ್ಟ ತೆರಿಗೆಗಳ ಹೆಚ್ಚಳಕ್ಕೂ ಕೈಹಾಕುವ ಸಂಭವವಿದೆ.
ಇನ್ನು ಆದಾಯ ಮೂಲಕ್ಕಾಗಿ ಬಿಡದಿ , ನೆಲಮಂಗಲ ಬಳಿ ಟೌನ್ ಶಿಪ್ ಯೋಜನೆಗಳ ಮೂಲಕ, ಖಾಸಗಿ ಹೂಡಿಕೆಗೆ ನೀಡಿ ಆದಾಯ ಹೆಚ್ಚಳ ಕೆಲವು ಯೋಜನೆಗಳೂ ಇವೆ ಎನ್ನಲಾಗ್ತಿದೆ. ಇದಕ್ಕಾಗಿ ಪಿಪಿಪಿ ಮಾದರಿಯ ಯೋಜನೆ ಘೋಷಣೆ ಮಾಡುವ ಸಾಧ್ಯತೆಗಳಿವೆ. ಖಾಸಗಿ ಸಾಲದ ಬದಲು ಕೆಲವು ಇಲಾಖೆ, ನಿಗಮಗಳ ನಡುವೆ ಸಾಲ ಕೊಟ್ಟು ತೆಗೆದುಕೊಳ್ಳುವ ವ್ಯವಸ್ಥೆ ಬಗ್ಗೆಯೂ ಸಿದ್ಧರಾಮಯ್ಯ ಅವರಿಗೆ ಸಲಹೆಗಳು ಬಂದಿವೆ.
ರಾಮನಗರ ಜಿಲ್ಲೆ ಹೆಸರು ಬದಲಾವಣೆ..?
ಕೆಲವು ಹೊಸ ಜಿಲ್ಲೆಗಳ ಘೋಷಣೆಯ ಜತೆಗೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸುವ ಸಾಧ್ಯತೆಯೂ ಬಜೆಟ್ಟಿನಲ್ಲಿದೆಯಂತೆ.