ಬೆಂಗಳೂರು ನಗರದ ರಾಜಭವನದ ಮುಂದೆ ನಡೆದ ಘಟನೆಯೊಂದು ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ತಮಿಳುನಾಡು ಮೂಲದ ಟೆಕ್ಕಿಯಾಗಿರುವ ಜುಹೈದ್ ಅಹ್ಮದ್ ಎಂಬುವರು ಪತ್ನಿಯ ಕಿರುಕುಳಕ್ಕೆ ಬೇಸತ್ತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಬೆಳಕಿಗೆ ಬಂದಿದೆ.
ಸೂಸೈಡ್ ನೋಟ್ನಲ್ಲಿ, ಪತ್ನಿ ಜವೇರಿಯಾ ಮುಸ್ಕಾನ್ ತನಗೆ ಮಾನಸಿಕ ಹಿಂಸೆ ನೀಡುತ್ತಿರುವ ಕುರಿತು ಜುಹೈದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂದೆ-ತಾಯಿ ಸೇರಿದಂತೆ ತನ್ನ ಕುಟುಂಬದ ಮೇಲೆ ಪತ್ನಿ ಹಾಗೂ ಆಕೆಯ ಸಂಬಂಧಿಕರಿಂದ ಜೀವ ಭಯವಿದೆ ಎಂದು ಅವರು ಹೇಳಿದ್ದಾರೆ. “ನನ್ನ ಮೇಲೆ ಕೊಲೆ ಯತ್ನವಾಗಿದೆ, ನಾನು ಬದುಕಲು ಅರ್ಹನಲ್ಲ. ಸಾಯುವುದು ಏಕೈಕ ಮಾರ್ಗ” ಎಂದು ಡೆತ್ ನೋಟ್ನಲ್ಲಿ ಬರೆದಿದ್ದಾರೆ.
ಜುಹೈದ್ ತಮ್ಮ ಪತ್ನಿ ಯುಟಿಐ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಎಂಬುದನ್ನೂ ಉಲ್ಲೇಖಿಸಿದ್ದಾರೆ. ಪತ್ನಿಯ ಕುಟುಂಬ ಮಣಿಪಾಲ್ ಆಸ್ಪತ್ರೆಗೆ ಮಾತ್ರ ಹೋಗಬೇಕೆಂದು ಒತ್ತಾಯ ಮಾಡುತ್ತಿದ್ದುದರಿಂದ ಆತ ತೊಂದರೆ ಅನುಭವಿಸಿದ್ದಾನೆ. ಅಲ್ಲದೇ, ಪತ್ನಿ ಹಾಗೂ ಆಕೆಯ ಕುಟುಂಬ ಪದೇಪದೇ ವಿಚ್ಛೇದನದ ಬೆದರಿಕೆ ನೀಡುತ್ತಿದ್ದರೆಂದು ಹೇಳಿದ್ದಾರೆ. ಗಂಡ ಸಿಗ್ರೇಟ್ ಹೊಡೆದಿದ್ದ ಆರೋಪ ಮಾಡಿ ವಿಚ್ಛೇದನ ಕೇಳಿದ್ದ ಪತ್ನಿಯೇ, ಗಂಡನ ಮುಂದೆ ಹುಕ್ಕಾ ಹೊಡೆದಿದ್ದಳು ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಪ್ರಕರಣವನ್ನು ವಿಧಾನಸೌಧ ಪೊಲೀಸರು ತನಿಖೆಗೆ ಪಡೆದಿದ್ದಾರೆ.





