ಹಾಸನ, ಫೆ. 26: ಸಮಾಜ ಎಷ್ಟೇ ಮುಂದುವರಿದರೂ, ಕೆಲವೆಡೆ ಇನ್ನೂ ಜಾತಿ, ಮೌಢ್ಯ ಮತ್ತು ಜೀತಪದ್ಧತಿಯಂಥ ಸಾಮಾಜಿಕ ನಾಚಿಕೆಗೇಡಿನ ಸಂಗತಿಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ಹಾಸನ ಜಿಲ್ಲೆಯಲ್ಲಿ ನಡೆದ ಜೀತಪದ್ಧತಿ (ಬಾಂಡೆಡ್ ಲೇಬರ್) ಪ್ರಕರಣವೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ಜೀತಪದ್ಧತಿ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಂಯುಕ್ತ ಕಾರ್ಯಾಚರಣೆ ನಡೆಸಿದ್ದಾರೆ. ಈ ದಾಳಿಯಲ್ಲಿ ಒಟ್ಟು 18 ಮಂದಿ ಕಾರ್ಮಿಕರನ್ನು ರಕ್ಷಿಸಿ ಜೀತದಿಂದ ಮುಕ್ತಗೊಳಿಸಲಾಗಿದೆ.
ನಾಗರಾಜ್ ಹಾಗೂ ಮೋಹನೇಶ್ ಎಂಬವರು ಈ ಕಾರ್ಮಿಕರನ್ನು ಅಕ್ರಮವಾಗಿ ಬಂಧಿಸಿ ಒಂದೇ ಶೆಡ್ನಲ್ಲಿ ಇರಿಸಿಕೊಂಡು ಯಾವುದೇ ಸಂಬಳ ನೀಡದೆ ದುಡಿಸಿಕೊಳ್ಳುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೂಲಭೂತ ಸೌಲಭ್ಯಗಳಾದ ಸರಿಯಾದ ವಾಸಸ್ಥಳ, ಶುದ್ಧ ಕುಡಿಯುವ ನೀರು, ಆರೋಗ್ಯ ಸೌಲಭ್ಯಗಳಿಲ್ಲದೇ ಅವರನ್ನು ಅಮಾನವೀಯ ಪರಿಸ್ಥಿತಿಯಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಮಿಕರಲ್ಲಿ ಕೇರಳ, ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದ ಬಂದವರು ಇದ್ದಾರೆ. ಜೊತೆಗೆ ಕರ್ನಾಟಕದ ಹಾವೇರಿ, ವಿಜಯಪುರ, ಗದಗ ಹಾಗೂ ಕಾಸರಗೋಡು ಭಾಗಗಳಿಂದ ಬಂದವರೂ ಈ ಜೀತಪದ್ಧತಿಯಲ್ಲಿ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ರೈಲು ನಿಲ್ದಾಣಗಳ ಬಳಿಯಲ್ಲಿ ಉದ್ಯೋಗದ ಆಮಿಷ ನೀಡಿ ಕರೆತಂದು ಬಳಿಕ ಜೀತಕ್ಕೆ ಒಳಪಡಿಸಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಹಾಸನ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ತಮ್ಮಯ್ಯ ಅವರ ನೇತೃತ್ವದಲ್ಲಿ ನಡೆದ ಈ ರಾತ್ರೋರಾತ್ರಿ ಕಾರ್ಯಾಚರಣೆಯಲ್ಲಿ ಪೊಲೀಸರು ಶೆಡ್ ಮೇಲೆ ದಾಳಿ ನಡೆಸಿ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಿದರು. ಅಕ್ರಮ ಬಂಧನದಿಂದ ಅವರನ್ನು ಬಿಡುಗಡೆ ಮಾಡಿ ತಕ್ಷಣವೇ ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ.
ಈ ಪ್ರಕರಣವು ಜೀತಪದ್ಧತಿ ನಿರ್ಮೂಲನೆಗೆ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಇನ್ನೂ ಕೆಲವು ಕಡೆಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವುದನ್ನು ಬಯಲಿಗೆಳೆದಿದೆ. ಜೀತಪದ್ಧತಿ ನಿರ್ಮೂಲನೆ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿ ನಾಗರಾಜ್ ಮತ್ತು ಮೋಹನೇಶ್ ವಿರುದ್ಧ ತನಿಖೆ ಮುಂದುವರಿದಿದೆ. ಜೀತದಿಂದ ಮುಕ್ತಗೊಳಿಸಲಾದ 18 ಮಂದಿಗೆ ಪುನರ್ವಸತಿ ಹಾಗೂ ಪರಿಹಾರ ಕ್ರಮಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.





