ಬೆಂಗಳೂರು: ಪ್ರತಿಷ್ಠಿತ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಜೆ.ಸಿ. ರಾಯ್ ಅವರ ನಿಧನ ಸುದ್ದಿ ಇಡೀ ದಕ್ಷಿಣ ಭಾರತದ ಚಿತ್ರರಂಗ ಮತ್ತು ಕಿರುತೆರೆ ಲೋಕವನ್ನು ಆಘಾತಕ್ಕೀಡು ಮಾಡಿದೆ. ಕೇವಲ ಒಬ್ಬ ಯಶಸ್ವಿ ಉದ್ಯಮಿಯಾಗಿ ಮಾತ್ರವಲ್ಲದೆ, ಕಲೆಯ ಪೋಷಕರಾಗಿ ಅವರು ಹಾಕಿಕೊಟ್ಟ ಹೆಜ್ಜೆಗುರುತುಗಳು ಅಪಾರ. ಐಟಿ ದಾಳಿಗಳ ಒತ್ತಡದ ನಡುವೆ ಅವರು ಆತ್ಮಹತ್ಯೆಗೆ ಶರಣಾಗಿರುವುದು ಕಲಾಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಜೆ.ಸಿ. ರಾಯ್ ಅವರಿಗೆ ಟಿವಿ ಜಗತ್ತಿನೊಂದಿಗೆ ಅವಿನಾಭಾವ ಸಂಬಂಧವಿತ್ತು. ವಿಶೇಷವಾಗಿ ರಿಯಾಲಿಟಿ ಶೋಗಳಿಗೆ ಅವರು ದೊಡ್ಡ ಮಟ್ಟದ ಬೆಂಬಲ ನೀಡುತ್ತಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 11 ರ ವಿಜೇತರಿಗೆ ನೀಡಬೇಕಿದ್ದ 50 ಲಕ್ಷ ರೂಪಾಯಿಗಳ ಬಹುಮಾನದ ಮೊತ್ತವನ್ನು ಇವರೇ ಘೋಷಿಸಿದ್ದರು. ಇದಕ್ಕೂ ಮುನ್ನ ಕಾನ್ಫಿಡೆಂಟ್ ಸ್ಟಾರ್ ಸಿಂಗರ್ ಕಾರ್ಯಕ್ರಮಕ್ಕೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಬಹುಮಾನ ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಸತತ ಎಂಟು ವರ್ಷಗಳ ಕಾಲ ದಕ್ಷಿಣ ಭಾರತದ ಪ್ರತಿಷ್ಠಿತ ಸೈಮಾ (SIIMA) ಪ್ರಶಸ್ತಿಗೆ ಕಾನ್ಫಿಡೆಂಟ್ ಗ್ರೂಪ್ ಮುಖ್ಯ ಪ್ರಾಯೋಜಕತ್ವ ವಹಿಸಿತ್ತು.
‘ರಿಯಾಲಿಟಿ’ ಶೋಗಳನ್ನೇ ಆರಿಸಿಕೊಳ್ಳಲು ಕಾರಣವೇನು ?
ಒಂದು ಸಂದರ್ಶನದಲ್ಲಿ ರಾಯ್ ಅವರು ರಿಯಾಲಿಟಿ ಶೋಗಳ ಬಗ್ಗೆ ತಮಗಿದ್ದ ಪ್ರೀತಿಯನ್ನು ಬಿಚ್ಚಿಟ್ಟಿದ್ದರು. ನನ್ನದು ರಿಯಲ್ ಎಸ್ಟೇಟ್ ಕಂಪನಿ, ಅಂದರೆ ರಿಯಲ್ (ನೈಜ) ಕಂಪನಿ. ಹಾಗಾಗಿ ನಾನು ಸುಳ್ಳು ಕಥೆಗಳಿರುವ ಧಾರಾವಾಹಿಗಳಿಗಿಂತ, ನೈಜ ಪ್ರತಿಭೆಗಳನ್ನು ಹೊರತರುವ ರಿಯಾಲಿಟಿ ಶೋಗಳಿಗೆ ಸ್ಪಾನ್ಸರ್ ಮಾಡುತ್ತೇನೆ. ಇದರಿಂದ ಪ್ರತಿಭಾವಂತರಿಗೆ ಸಹಾಯ ಮಾಡಿದ ತೃಪ್ತಿ ಸಿಗುತ್ತದೆ ಎನ್ನುತ್ತಿದ್ದರು. ತಾವು ಘೋಷಿಸಿದ ಬಹುಮಾನದ ಮೊತ್ತವನ್ನು ಒಂದು ದಿನವೂ ವಿಳಂಬ ಮಾಡದೆ ವಿತರಿಸುತ್ತಿದ್ದ ಅವರ ಪ್ರಾಮಾಣಿಕತೆ ಉದ್ಯಮದಲ್ಲಿ ಮಾದರಿಯಾಗಿತ್ತು.
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಕ್ಯಾಸನೋವ ಸೇರಿದಂತೆ ಸುಮಾರು 12 ಸಿನಿಮಾಗಳನ್ನು ರಾಯ್ ನಿರ್ಮಾಣ ಮಾಡಿದ್ದರು. ಕನ್ನಡ ಚಿತ್ರರಂಗದೊಂದಿಗೆ ಅವರಿಗೆ ನಿಕಟ ಸಂಪರ್ಕವಿತ್ತು. ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ಕುಮಾರ್ ಅವರೊಂದಿಗೆ ಅತ್ಯಂತ ಆಪ್ತ ಸ್ನೇಹ ಹೊಂದಿದ್ದ ರಾಯ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೂ ಹತ್ತಿರದವರಾಗಿದ್ದರು. ಕೇವಲ ಉದ್ಯಮದ ಮಾತುಗಳಿಗಷ್ಟೇ ಸೀಮಿತವಾಗದೆ, ಸಿನಿಸ್ಟಾರ್ಳಿಗೆ ಅತ್ಯಂತ ಅಚ್ಚುಮೆಚಾಗಿದ್ದರು. ಸಾವಿರಾರು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟು, ಅವರ ಬದುಕಿಗೆ ಬೆಳಕಾಗಿದ್ದ ಜೆ.ಸಿ. ರಾಯ್ ಅವರ ಈ ದುರಂತ ಅಂತ್ಯ ಸ್ಯಾಂಡಲ್ವುಡ್ ಮತ್ತು ಮಾಲಿವುಡ್ಗೆ ತುಂಬಲಾರದ ನಷ್ಟವಾಗಿದೆ.





