ಭಯೋತ್ಪಾದಕ ಸಂಘಟನೆ ಐಸಿಸ್ (ISIS)ಗೆ ಹಣಕಾಸಿನ ನೆರವು ನೀಡಿದ ಆರೋಪ ಹಾಗೂ ಯುವಕರನ್ನು ಕಾನೂನುಬಾಹಿರವಾಗಿ ವಿದೇಶಕ್ಕೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮಂಗಳವಾರ ಬೆಂಗಳೂರಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ್ದ ಎಫ್ಐಆರ್ ಮತ್ತು ಚಾರ್ಜ್ಶೀಟ್ ಆಧರಿಸಿ ಇಡಿ ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣ ದಾಖಲಿಸಿಕೊಂಡು ನಗರದ 8 ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯ ನಡೆಸಿದೆ.
ಇಡಿ ಅಧಿಕಾರಿಗಳು ವಿವಿಧ ಟ್ರಸ್ಟ್ಗಳು, ಶಂಕಿತರ ನಿವಾಸಗಳು ಹಾಗೂ ಸಂಬಂಧಿತ ಕಚೇರಿಗಳಲ್ಲಿ ದಾಖಲೆಗಳು, ಹಣಕಾಸು ವ್ಯವಹಾರಗಳ ವಿವರಗಳು ಮತ್ತು ಡಿಜಿಟಲ್ ಸಾಧನಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಕಾರ್ಯಾಚರಣೆಯಿಂದ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಮಹತ್ವದ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಎನ್ಐಎ ತನಿಖೆಯ ಪ್ರಕಾರ, ಆರೋಪಿಗಳು ಬೆಂಗಳೂರಿನ ಕೆಲ ಮುಸ್ಲಿಂ ಯುವಕರನ್ನು ಐಸಿಸ್ ಸಿದ್ಧಾಂತದತ್ತ ಆಕರ್ಷಿಸುವ ಉದ್ದೇಶದಿಂದ ‘ಇಕ್ರಾ ಕ್ಯಾಂಪ್’ ಹೆಸರಿನಲ್ಲಿ ವ್ಯಕ್ತಿತ್ವ ವಿಕಾಸ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದರು ಎನ್ನಲಾಗಿದೆ. ಈ ಶಿಬಿರಗಳ ಮೂಲಕ ಆಯ್ಕೆಯಾದ ಯುವಕರನ್ನು ನಂತರ ‘ಕುರ್ಆನ್ ಸರ್ಕಲ್’ ಎಂಬ ವಾರಾಂತ್ಯದ ಅಧ್ಯಯನ ಸಭೆಗಳಿಗೆ ಕರೆಸಿ, ಹಂತಹಂತವಾಗಿ ತೀವ್ರವಾದಿ ಸಿದ್ಧಾಂತಗಳತ್ತ ಒಲವು ಮೂಡಿಸುವ ಪ್ರಯತ್ನ ನಡೆದಿತ್ತು ಎಂಬ ಆರೋಪ ಕೇಳಿಬಂದಿದೆ.
ತನಿಖೆಯಲ್ಲಿ ಹೊರಬಿದ್ದ ಮಾಹಿತಿಯಂತೆ, ಆರೋಪಿಗಳು ತಮ್ಮ ವೈಯಕ್ತಿಕ ಉಳಿತಾಯ, ಖಾಸಗಿ ದೇಣಿಗೆಗಳು ಹಾಗೂ ‘ಇಕ್ರಾ ವೆಲ್ಫೇರ್ ಟ್ರಸ್ಟ್’ ಮತ್ತು ‘GFM ಟ್ರಸ್ಟ್’ಗಳ ಮೂಲಕ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದರು. ಸಂಗ್ರಹಿಸಿದ ಹಣವನ್ನು ಯುವಕರ ನೇಮಕಾತಿ, ತರಬೇತಿ ಮತ್ತು ವಿದೇಶ ಪ್ರಯಾಣದ ವೆಚ್ಚಗಳಿಗೆ ಬಳಸಲಾಗುತ್ತಿತ್ತು ಎಂದು ಎನ್ಐಎ ತನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಇದಲ್ಲದೆ, ಬ್ರೇನ್ವಾಶ್ಗೊಳಗಾದ ಕೆಲ ಯುವಕರನ್ನು ಟರ್ಕಿ ಮಾರ್ಗವಾಗಿ ಸಿರಿಯಾಗೆ ಅಕ್ರಮವಾಗಿ ಕಳುಹಿಸಿ, ಅಲ್ಲಿ ಐಸಿಸ್ ಪರವಾಗಿ ಚಟುವಟಿಕೆಗಳಲ್ಲಿ ತೊಡಗಲು ನೆರವು ನೀಡಲಾಗುತ್ತಿತ್ತು ಎಂಬ ಗಂಭೀರ ಆರೋಪವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಭಾರತ ಸರ್ಕಾರದೊಂದಿಗೆ ಮೈತ್ರಿ ಹೊಂದಿರುವ ಸಿರಿಯಾ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಈ ಯುವಕರನ್ನು ಬಳಸುವ ಸಂಚು ರೂಪಿಸಲಾಗಿತ್ತು ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.
ಎನ್ಐಎ ಚಾರ್ಜ್ಶೀಟ್ನಲ್ಲಿ ಮತ್ತೊಂದು ಮಹತ್ವದ ಅಂಶವೂ ಉಲ್ಲೇಖವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (CAA) ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಕೆಲವು ಯುವಕರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ತೀವ್ರವಾದಿ ಚಿಂತನೆಗಳನ್ನು ಹರಡುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಜೊತೆಗೆ ಸುರಕ್ಷಿತ ಸಾಮಾಜಿಕ ಜಾಲತಾಣಗಳು ಮತ್ತು ಎನ್ಕ್ರಿಪ್ಟೆಡ್ ಮೆಸೇಜಿಂಗ್ ವೇದಿಕೆಗಳ ಮೂಲಕ ಐಸಿಸ್ ಸಿದ್ಧಾಂತವನ್ನು ಪ್ರಚಾರ ಮಾಡುವ ಸಂಚು ರೂಪಿಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಪ್ರಸ್ತುತ ಇಡಿ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳು, ಬ್ಯಾಂಕ್ ವ್ಯವಹಾರಗಳ ವಿವರಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳ ಪರಿಶೀಲನೆಯನ್ನು ಮುಂದುವರಿಸಿದ್ದಾರೆ. ಪ್ರಕರಣದ ತನಿಖೆ ಇನ್ನಷ್ಟು ತೀವ್ರಗೊಂಡಿದೆ.




