ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುಟುಂಬದಲ್ಲಿ ಸಂತಸದ ಕ್ಷಣಗಳು ಮನೆಮಾಡಿವೆ. ಅವರ ಪುತ್ರಿ ಐಶ್ವರ್ಯ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಡಿ.ಕೆ. ಶಿವಕುಮಾರ್ ಅವರು ತಾತನಾದ ಖುಷಿಯಲ್ಲಿದ್ದಾರೆ.
ಈ ಸಂತಸದ ಸಂದರ್ಭದಲ್ಲಿ ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ಅವರ ಶುಭಾಶಯ ಸಂದೇಶ ವಿಶೇಷವಾಗಿ ಗಮನ ಸೆಳೆದಿದೆ. ತೇಜಸ್ವಿ ಸೂರ್ಯ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ, ಡಿ.ಕೆ. ಶಿವಕುಮಾರ್ ಅವರೊಂದಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅನುಭವವನ್ನು ವಿವರಿಸಿದ್ದಾರೆ. ಆ ದಿನದ ಪ್ರಯಾಣದ ವೇಳೆ ಕಾರಿನಲ್ಲಿ ಇದ್ದಾಗಲೇ ಡಿ.ಕೆ. ಶಿವಕುಮಾರ್ ಅವರಿಗೆ ನಿರಂತರವಾಗಿ ಮನೆಯವರಿಂದ ಫೋನ್ ಬರುತ್ತಿದ್ದುದನ್ನು ಗಮನಿಸಿದ್ದಾಗಿ ಅವರು ತಿಳಿಸಿದ್ದಾರೆ.
ವಿಷಯವನ್ನು ಕೇಳಿದಾಗ ಡಿ.ಕೆ. ಶಿವಕುಮಾರ್ ಅವರು “ಇಂದು ನನ್ನ ಮಗಳ ಡೆಲಿವರಿ. ನಾನು ತಾತನಾಗುತ್ತಿದ್ದೇನೆ” ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ ಎಂದು ತೇಜಸ್ವಿ ಸೂರ್ಯ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಅದೇ ದಿನ ಡಿ.ಕೆ. ಶಿವಕುಮಾರ್ ಅವರು ಫ್ಲೈಓವರ್ ಉದ್ಘಾಟನೆ, ಸ್ಕೈವಾಕ್ ಶಂಕುಸ್ಥಾಪನೆ ಸೇರಿದಂತೆ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಕುಟುಂಬದಲ್ಲಿ ಸಂತಸದ ಸುದ್ದಿ ಇದ್ದರೂ, ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅವರು ತೋರಿದ ಬದ್ಧತೆ ಗಮನಾರ್ಹವಾಗಿತ್ತು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇವತ್ತು DCM ಡಿ ಕೆ ಶಿವಕುಮಾರ್ ಅವರ ಜೊತೆ ಬೆಂಗಳೂರು ದಕ್ಷಿಣದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ.
ಕಾರ್ಯಕ್ರಮಗಳ ಮಧ್ಯೆ ಕಾರಿನಲ್ಲಿ ಜೊತೆಗೆ ಪ್ರಯಾಣಿಸುವಾಗ ಅವರಿಗೆ ಮನೆಯಿಂದ ಪದೇ ಪದೇ ಫೋನ್ ಬರುತ್ತಿತ್ತು. ವಿಚಾರಿಸಿದಾಗ, “ಇವತ್ತು ನನ್ನ ಮಗಳ ಡೆಲಿವರಿ. ನಾನು ತಾತ ಆಗುತ್ತಿದ್ದೇನೆ” ಎಂದರು
ಒಂದು ಕಡೆ ಕುಟುಂಬದ ಅತ್ಯಂತ ಸಂತೋಷದ… pic.twitter.com/XQoLKmZVG8
— Tejasvi Surya (@Tejasvi_Surya) May 1, 2026
ಅವರು ತಮ್ಮ ಪೋಸ್ಟ್ನಲ್ಲಿ “The first casualty of public life is personal life” ಎಂಬ ಮಾತನ್ನು ಉಲ್ಲೇಖಿಸಿ, ಸಾರ್ವಜನಿಕ ಜೀವನದಲ್ಲಿ ವೈಯಕ್ತಿಕ ಕ್ಷಣಗಳು ಎಷ್ಟು ಹಿಂದೆ ಸರಿಯುತ್ತವೆ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಪೋಸ್ಟ್ನ ಅಂತ್ಯದಲ್ಲಿ ತೇಜಸ್ವಿ ಸೂರ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ತಾತನಾದ ಶುಭಾಶಯಗಳನ್ನು ತಿಳಿಸಿದ್ದು, ಅವರ ಪುತ್ರಿ ಐಶ್ವರ್ಯ, ನವಜಾತ ಶಿಶು ಹಾಗೂ ಕುಟುಂಬಕ್ಕೆ ಉತ್ತಮ ಆರೋಗ್ಯ, ಆಯುಷ್ಯ ಮತ್ತು ಸಂತೋಷ ಸಿಗಲಿ ಎಂದು ಹಾರೈಸಿದ್ದಾರೆ.





