ರಾಮನಗರ: ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲೆಂದು ಅವರೊಬ್ಬ ಅಪ್ಪಟ ಅಭಿಮಾನಿ ಕಳೆದ ಮೂರು ವರ್ಷಗಳಿಂದ ಕ್ಷೌರವನ್ನೇ ಮಾಡಿಸದೇ ವಿಶಿಷ್ಟ ಹರಕೆ ಹೊತ್ತಿದ್ದಾರೆ. ಈ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈಶ್ವರಪ್ಪ ಎಂಬ ಈ ಅಭಿಮಾನಿ, ತಮ್ಮ ನೆಚ್ಚಿನ ನಾಯಕ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಆಶಯದಿಂದ 3 ವರ್ಷಗಳ ಹಿಂದೆ ಒಂದು ಶಪಥ ಮಾಡಿಕೊಂಡಿದ್ದರು. “ಡಿಕೆಶಿ ಸಿಎಂ ಆಗುವವರೆಗೂ ನಾನು ತಲೆಗೂದಲು ಮತ್ತು ಗಡ್ಡವನ್ನು ಕತ್ತರಿಸುವುದಿಲ್ಲ” ಎಂದು ನಿರ್ಧರಿಸಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.
ಆಸ್ತಿ, ಹಣ ಅಥವಾ ವೈಯಕ್ತಿಕ ಲಾಭಕ್ಕಿಂತಲೂ ತಮ್ಮ ನಾಯಕನ ರಾಜಕೀಯ ಬೆಳವಣಿಗೆಯನ್ನೇ ಜೀವನದ ಗುರಿಯಾಗಿಸಿಕೊಂಡಿರುವ ಈಶ್ವರಪ್ಪ, ಈ ಅವಧಿಯಲ್ಲಿ ತಮ್ಮ ರೂಪವನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ದಟ್ಟವಾದ ಗಡ್ಡ ಮತ್ತು ಬೆಳೆದ ಕೂದಲಿನಿಂದ ಅವರು ಈಗ ಗ್ರಾಮದಲ್ಲಿ ವಿಭಿನ್ನವಾಗಿ ಕಾಣುತ್ತಿದ್ದಾರೆ
ಇವರ ಅಭಿಮಾನ ಕೇವಲ ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿರಲಿಲ್ಲ. ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ತೆರಳಿದ್ದ ಅವರು, ಪವಿತ್ರ ಕುಂಭಮೇಳದ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಫೋಟೋ ಹಿಡಿದು ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ್ದರು. “ಕರ್ನಾಟಕಕ್ಕೆ ಶೀಘ್ರದಲ್ಲೇ ಉತ್ತಮ ನಾಯಕತ್ವ ದೊರಕಲಿ” ಎಂದು ಅವರು ದೇವರಿಗೆ ಬೇಡಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಮೂರು ವರ್ಷಗಳ ಕಾಲ ಅವರು ತಮ್ಮ ಹರಕೆಯನ್ನು ನಿಷ್ಠೆಯಿಂದ ಪಾಲಿಸಿದ್ದು, ಗ್ರಾಮದಲ್ಲಿ ಹಲವರಿಗೆ ಆಶ್ಚರ್ಯ ಮತ್ತು ಗೌರವ ಎರಡನ್ನೂ ಹುಟ್ಟಿಸಿದೆ. ಕೆಲವರು ಇದನ್ನು ಅತಿಯಾದ ಅಭಿಮಾನ ಎಂದು ಹೇಳಿದರೆ, ಮತ್ತೂ ಕೆಲವರು ಇದನ್ನು ರಾಜಕೀಯ ನಂಬಿಕೆಯ ಸಂಕೇತವಾಗಿ ನೋಡುತ್ತಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಬಲವಾಗಿ ಕೇಳಿಬರುತ್ತಿರುವ ಹಿನ್ನೆಲೆ, ಹಲವು ಕಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಜನರು ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ.





