ಧಾರವಾಡ: ಧಾರವಾಡ ನಗರದಲ್ಲಿ ಖಾಸಗಿ ಆಸ್ಪತ್ರೆಯ ಅನೆಸ್ಥೀಷಿಯಾ ತಜ್ಞನ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ನಗರದ ಬಾರಾಕೊಟ್ರಿಯ ರಂಕಾ ಕ್ಯಾಸ್ಟೆಲ್ಲೋ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಖಾಸಗಿ ಆಸ್ಪತ್ರೆಯ ಅನೆಸ್ಥೀಷಿಯಾ ತಜ್ಞ ಡಾ. ಕಿರಣ್ ಹೊನ್ನಣ್ಣ (45) ಅವರನ್ನು ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಲಾಗಿದೆ. ಇದೇ ವೇಳೆ ಅವರ 8 ವರ್ಷದ ಪುತ್ರ ನೇಹಿತ್ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ವೈದ್ಯರ ಪತ್ನಿ ಡಾ. ಪ್ರಿಯಾಂಕಾ ಗದ್ದನಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಪೊಲೀಸರು ಇದುವರೆಗೆ ಅವರನ್ನು ಆರೋಪಿಯೆಂದು ಘೋಷಿಸಿಲ್ಲ. ತನಿಖೆ ಮುಂದುವರಿದಿದ್ದು, ಪ್ರಕರಣದ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ.
ಘಟನೆ ಧಾರವಾಡದ ರಂಕಾ ಕ್ಯಾಸ್ಟೆಲ್ಲೋ ಅಪಾರ್ಟ್ಮೆಂಟ್ನ ಆರನೇ ಮಹಡಿಯಲ್ಲಿರುವ ನಿವಾಸದಲ್ಲಿ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಒಂದು ಕೊಠಡಿಯಲ್ಲಿ ಡಾ. ಕಿರಣ್ ರಕ್ತದ ಮಡುವಿನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮತ್ತೊಂದು ಕೊಠಡಿಯಲ್ಲಿ ಪುತ್ರ ನೇಹಿತ್ ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದನು. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಹೇಳಿರುವ ಪ್ರಕಾರ, ಕೊಲೆ ನಡೆದ ನಿಖರ ಸಮಯ ಇನ್ನೂ ಸ್ಪಷ್ಟವಾಗಿಲ್ಲ. ತನಿಖೆಯ ವೇಳೆ ಕೆಲವು ಮಹತ್ವದ ಮಾಹಿತಿ ಲಭ್ಯವಾಗಿದೆ. ಘಟನೆಯ ಮುನ್ನ ವೈದ್ಯರ ಬಂಧುಗಳು ಹಾಗೂ ಸ್ನೇಹಿತರು ಕರೆ ಮಾಡಿದಾಗ, “ಅವರು ಬ್ಯುಸಿಯಾಗಿದ್ದಾರೆ” ಅಥವಾ “ಆಸ್ಪತ್ರೆಗೆ ಹೋಗಿದ್ದಾರೆ” ಎಂದು ಪತ್ನಿ ಉತ್ತರಿಸಿದ್ದಾಳೆ ಎನ್ನಲಾಗಿದೆ. ನೆರೆಹೊರೆಯವರು ವಿಚಾರಿಸಿದಾಗಲೂ “ಪತಿ ಹೊರಗೆ ಹೋಗಿದ್ದಾರೆ” ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಡಾ. ಕಿರಣ್ ಅವರ ಕುಟುಂಬದವರು ಈ ಪ್ರಕರಣದಲ್ಲಿ ಪತ್ನಿಯ ಪಾತ್ರವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಆ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ.
ಪ್ರಾಥಮಿಕ ತನಿಖೆಯಲ್ಲಿ ಅಪಾರ್ಟ್ಮೆಂಟ್ಗೆ ಹೊರಗಿನಿಂದ ಅಪರಿಚಿತರು ಪ್ರವೇಶಿಸಿರುವ ಸಾಧ್ಯತೆ ಕಡಿಮೆ ಎಂಬ ಮಾಹಿತಿ ಲಭ್ಯವಾಗಿದೆ. ಕಟ್ಟಡದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಘಟನೆಗೆ ಸಂಬಂಧಿಸಿದ ಪ್ರತಿಯೊಂದು ಸುಳಿವನ್ನೂ ಸಂಗ್ರಹಿಸುತ್ತಿದ್ದಾರೆ.
ಇದೇ ವೇಳೆ, ಘಟನೆ ನಡೆದ ಬಳಿಕ ಪತ್ನಿ ಮೊಬೈಲ್ ಬಳಸುತ್ತಾ ಕುಳಿತಿದ್ದಳು ಎಂಬ ಮಾಹಿತಿ ಕೂಡ ತನಿಖೆಯಲ್ಲಿ ಹೊರಬಂದಿದೆ. ಆದರೆ, ಈ ಕುರಿತು ಪೊಲೀಸರು ಇನ್ನೂ ಅಧಿಕೃತವಾಗಿ ಯಾವುದೇ ಅಂತಿಮ ಹೇಳಿಕೆ ನೀಡಿಲ್ಲ. ಸ್ಥಳದಲ್ಲಿ ದೊರೆತ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಗಳು ಹಾಗೂ ಫೋರೆನ್ಸಿಕ್ ವರದಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಡಾ. ಪ್ರಿಯಾಂಕಾ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಂಡಿರುವ ಶಂಕೆಯೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿರವಾದ ಬಳಿಕ ಹೆಚ್ಚಿನ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಡಾ. ಕಿರಣ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅದರ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಹಾಗೂ ಘಟನೆ ನಡೆದ ಕ್ರಮದ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಮಗುವಿನ ಆರೋಗ್ಯ ಸ್ಥಿತಿಯ ಮೇಲೂ ವೈದ್ಯರು ನಿಗಾ ವಹಿಸಿದ್ದಾರೆ.





