ಬೆಂಗಳೂರು: ಬೆಂಗಳೂರಿನ ರಸ್ತೆಯೊಂದರಲ್ಲಿ BMTC ಬಸ್ ಚಾಲಕನೊಬ್ಬ ಯುವತಿಯೋರ್ವಳ ಮೇಲೆ ಬಸ್ ಗುದ್ದಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ಬಳಿಕ ಜನರ ಆಕ್ರೋಶಕ್ಕೆ ಒಳಗಾದ ಚಾಲಕನನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು BMTC ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಸಮೀಪ ಮೇ 23, 2025 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಶಾಂತ್ ಎಂಬಾತ ಬಿಎಂಟಿಸಿ ಬಸ್ನ ಚಾಲಕನಾಗಿದ್ದಾನೆ. ಚಂದ್ರಾಲೇಔಟ್ ಡಿಪೋಗೆ ಸೇರಿದ KA57 F2046 ಸಂಖ್ಯೆಯ ಬಸ್ ಜೆ.ಜೆ.ನಗರದಿಂದ ನಾಗವರಕ್ಕೆ ತೆರಳುತ್ತಿತ್ತು. ಈ ವೇಳೆ ರಸ್ತೆಯ ಸಿಗ್ನಲ್ನಲ್ಲಿ ಬಸ್ ಪಕ್ಕದಲ್ಲಿದ್ದ ಕಾರಿನಿಂದ ಯುವತಿಯೊಬ್ಬರು ಇಳಿದು ಚಾಲಕನನ್ನು ಯಾವುದೋ ವಿಚಾರಕ್ಕೆ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯಿಂದ ಕುಪಿತನಾದ ಚಾಲಕ ಯುವತಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ವಾಗ್ವಾದ ತಾರಕಕ್ಕೇರಿದಾಗ ಯುವತಿ ಬಸ್ ಅಡ್ಡಗಟ್ಟಿದ್ದಾಳೆ. ಆದರೆ, ಚಾಲಕ ಬಸ್ನ್ನು ಯುವತಿಯ ಮೇಲೆ ನುಗ್ಗಿಸಲು ಯತ್ನಿಸಿದ್ದಾನೆ. ಅದೃಷ್ಟವಶಾತ್, ಯುವತಿ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಈ ಘಟನೆಯನ್ನು ಕಂಡ ಸ್ಥಳೀಯ ಜನರು ತಕ್ಷಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಲಕನ ಈ ಕೃತ್ಯವನ್ನು ಖಂಡಿಸಿ, ಸಾರ್ವಜನಿಕರು BMTC ವಿರುದ್ಧ ಕಿಡಿಕಾರಿದ್ದಾರೆ. ಘಟನೆಯ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ವ್ಯಕ್ತವಾಗಿದೆ. ಈ ಒತ್ತಡದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲಕನನ್ನು ಅಮಾನತುಗೊಳಿಸುವಂತೆ BMTCಗೆ ಸೂಚನೆ ನೀಡಿದ್ದಾರೆ. ಸಚಿವರ ಸೂಚನೆಯಂತೆ, ಚಾಲಕ ಪ್ರಶಾಂತ್ನನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ.
ಈ ಘಟನೆಗೆ ಕಾರಣವಾದ ವಾಗ್ವಾದದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಯುವತಿ ಯಾವ ವಿಷಯಕ್ಕೆ ಚಾಲಕನನ್ನು ಪ್ರಶ್ನಿಸಿದ್ದರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.