ಮಂಗಳೂರು: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ರಮೇಶ್ ರೈ ಅವರ ಮೃತದೇಹ ಇಂದು (ಜೂನ್ 05) ಪಾಣೆಮಂಗಳೂರಿನ ಸೇತುವೆ ಬಳಿಯ ನೀರಿನ ಟ್ಯಾಂಕ್ನಲ್ಲಿ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಯ ಬಿಜೆಪಿ ಸದಸ್ಯರಾಗಿದ್ದರು. ಈ ಘಟನೆಯ ಸುತ್ತಲೂ ಹಲವು ಅನುಮಾನಗಳು ಮೂಡಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟುಮಾಡಿದೆ. ರಮೇಶ್ ರೈ ಅವರ ಸಾವು ಆತ್ಮಹತ್ಯೆಯೇ, ಕೊಲೆಯೇ ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ.
ರಮೇಶ್ ರೈ ಅವರು ಪುತ್ತೂರು ನಗರಸಭೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಪ್ರಮುಖ ಮುಖಂಡರಾಗಿದ್ದರು. ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗಿದ್ದ ಅವರು, ಸ್ಥಳೀಯರಲ್ಲಿ ಗೌರವಕ್ಕೆ ಪಾತ್ರರಾಗಿದ್ದರು. ಆದರೆ, ಕೆಲ ದಿನಗಳ ಹಿಂದೆ ಅವರು ನಾಪತ್ತೆಯಾಗಿದ್ರು. ಈ ಘಟನೆಯಿಂದ ಆತಂಕಗೊಂಡ ಕುಟುಂಬಸ್ಥರು ಮತ್ತು ಸ್ಥಳೀಯರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು. ಈ ಸಂದರ್ಭದಲ್ಲಿ, ಪಾಣೆಮಂಗಳೂರಿನ ಸೇತುವೆ ಬಳಿಯ ರಸ್ತೆಯಲ್ಲಿ ರಮೇಶ್ ರೈ ಅವರ ಮೊಬೈಲ್ ಫೋನ್ ಮತ್ತು ಬೈಕ್ ಪತ್ತೆಯಾಗಿವೆ.
ಇಂದು ಪಾಣೆಮಂಗಳೂರಿನ ಸೇತುವೆಯ ಬಳಿಯ ನೀರಿನ ಟ್ಯಾಂಕ್ನಲ್ಲಿ ರಮೇಶ್ ರೈ ಅವರ ಮೃತದೇಹ ಪತ್ತೆಯಾಯಿತು. ಈ ಸಾವಿನ ಕಾರಣದ ಬಗ್ಗೆ ಹಲವು ಊಹಾಪೋಹಗಳು ಕೇಳಿಬಂದಿವೆ. ಮೃತದೇಹದ ಸ್ಥಿತಿಯನ್ನು ಗಮನಿಸಿದಾಗ, ಇದು ಕೇವಲ ಆಕಸ್ಮಿಕ ಸಾವು ಇರಲಾರದು ಎಂಬ ಅನುಮಾನಗಳು ಮೂಡಿವೆ.