ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಹರಿಯುವ ವಿಚಾರಕ್ಕೆ ಶುರುವಾದ ಕಿಡಿ, ಈಗ ಗುಂಡಿನ ದಾಳಿಯ ಆರೋಪ-ಪ್ರತ್ಯಾರೋಪದ ಹಂತಕ್ಕೆ ತಲುಪಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ಬೆಂಬಲಿಗರ ನಡುವೆ ತೀವ್ರ ಆರೋಪ ಪತ್ಯಾರೋಪಗಳು ಕೇಳಿಬರುತ್ತಿವೆ.
ಏನಿದು ಗನ್ಮ್ಯಾನ್ ವಿವಾದ ?
ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿರುವುದು ಭರತ್ ರೆಡ್ಡಿ ಬೆಂಬಲಿಗರು ಬಿಡುಗಡೆ ಮಾಡಿರುವ ಒಂದು ಫೋಟೋದಿಂದ. ಜನಾರ್ದನ ರೆಡ್ಡಿ ಅವರ ಕಚೇರಿಯ ಮೇಲೆ ಸರ್ಕಾರಿ ಗನ್ಮ್ಯಾನ್ ಒಬ್ಬ ಗನ್ ಹಿಡಿದು ನಿಂತಿರುವ ಫೋಟೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಫೈರಿಂಗ್ ನಡೆದದ್ದು ಕೇವಲ ನಮ್ಮ ಕಡೆಯಿಂದಲ್ಲ, ಜನಾರ್ದನ ರೆಡ್ಡಿ ಕಡೆಯವರಿಂದಲೂ ನಡೆದಿದೆ” ಎಂದು ಭರತ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಈ ಫೋಟೋ ಆಧರಿಸಿ ಸರ್ಕಾರಿ ಗನ್ಮ್ಯಾನ್ನನ್ನು ತಕ್ಷಣ ವಿಚಾರಣೆಗೆ ಒಳಪಡಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ತನಿಖಾ ಕಣದಲ್ಲಿ ಎಫ್ಎಸ್ಎಲ್ ಮತ್ತು ಬಾಂಬ್ ಸ್ಕ್ವಾಡ್
ಘಟನೆ ನಡೆದ ಸ್ಥಳಕ್ಕೆ ಬಳ್ಳಾರಿ ಪೊಲೀಸರು ಭೇಟಿ ನೀಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಜನಾರ್ದನ ರೆಡ್ಡಿ ಬೆಂಬಲಿಗ ನಾಗರಾಜ್ ನೀಡಿದ ಅಟ್ರಾಸಿಟಿ ದೂರಿನ ಅನ್ವಯ ಪೊಲೀಸರು ಈಗಾಗಲೇ ವಿಚಾರಣೆ ನಡೆಸುತ್ತಿದ್ದಾರೆ. ಬ್ಯಾನರ್ ಹರಿದ ಜಾಗ ಹಾಗೂ ಗುಂಡಿನ ದಾಳಿ ನಡೆದಿದೆ ಎನ್ನಲಾದ ಸ್ಥಳಗಳನ್ನು ಎಫ್ಎಸ್ಎಲ್ (FSL) ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳ ಅರೆಜಲ್ಲೆ ಹೊಡೆದು ಪರಿಶೀಲನೆ ನಡೆಸಿದೆ.
ಸಿಸಿಟಿವಿ ಮತ್ತು ಬುಲೆಟ್ ಜಪ್ತಿ
ಜನಾರ್ದನ ರೆಡ್ಡಿ ಅವರು ಪೊಲೀಸರಿಗೆ ಹಸ್ತಾಂತರಿಸಿದ್ದ ಬುಲೆಟ್ ಅನ್ನು ಈಗ ಜಪ್ತಿ ಮಾಡಲಾಗಿದ್ದು, ಅದನ್ನು ಹೆಚ್ಚಿನ ತಾಂತ್ರಿಕ ಪರೀಕ್ಷೆಗೆ ಕಳುಹಿಸಲಾಗಿದೆ. ಕಚೇರಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಅಂದು ಅಸಲಿಗೆ ಏನಾಯಿತು ? ಮೊದಲು ಗುಂಡು ಹಾರಿಸಿದ್ದು ಯಾರು ? ಎಂಬ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚುವುದನ್ನ ಮುಂದುವರೆಸಿದ್ದಾರೆ.
ರಾಜಕೀಯ ಸಂಘರ್ಷ
ಬಳ್ಳಾರಿಯಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಈ ಹೋರಾಟ ಈಗ ಕಾನೂನು ಸುವ್ಯವಸ್ಥೆಯ ಪ್ರಶ್ನೆಯನ್ನು ಹುಟ್ಟುಹಾಕಿದೆ. ಭರತ್ ರೆಡ್ಡಿ ಅವರ ಬಿಡುಗಡೆ ಮಾಡಿರುವ ಈ ಗನ್ಮ್ಯಾಸ್ ಫೋಟೋಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಯಾವ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಸಧ್ಯ ಈ ಕುರಿತು ಹೆಚ್ಚಿನ ತನಿಕೆ ನಡೆಯುತ್ತಿದ್ದು, ಅಧಿಕಾರಿಗಳ ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.





