ಬೀದರ್, ಜೂನ್ 30: ಪತಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೈದಿರುವ ಘಟನೆ ಬೀದರ್ (Bidar) ಜಿಲ್ಲೆಯಲ್ಲಿ ನಡೆದಿದೆ. ಪಕ್ಕದ ಮನೆಯ ಹುಡುಗಿಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಪತಿ, ಇದನ್ನು ಪ್ರಶ್ನಿಸಿದ ಪತ್ನಿಯ ಮೇಲೆ ಕಬ್ಬಿಣದ ರಾಡ್ನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆಯು ಭಾಲ್ಕಿ (Bhalki) ತಾಲೂಕಿನ ಗಾಯಮುಖ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಪತಿಯ ಅನೈತಿಕ ಸಂಬಂಧವೇ ಕೊಲೆಗೆ ಕಾರಣ
ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದ ಸಂಜನಾ (26) ಮೃತ ದುರ್ದೈವಿ ಪತ್ನಿ. ಸಂಜನಾ ಹಾಗೂ ಆರೋಪಿ ಪತಿ ಭಗವತ್ ಜ್ಞಾನೇಶ್ವರ ಅವರು 2 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆರೋಪಿ ಭಗವತ್ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೀದರ್ನ ಶಿವನಗರದಲ್ಲಿ ವಾಸವಾಗಿದ್ದರು. ಆತ ಪಕ್ಕದ ಮನೆಯ ಹುಡುಗಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದನು. ಇದನ್ನು ಸಂಜನಾ ಪ್ರಶ್ನಿಸಿದ್ದಳು. ಇದರಿಂದ ಆಕ್ರೋಶಗೊಂಡ ಭಗವತ್, ಪತ್ನಿಯೊಂದಿಗೆ ಗಲಾಟೆ ಮಾಡಿ, ದೇವರ ದರ್ಶನಕ್ಕೆಂದು ಹೇಳಿ ಕಾರಿನಲ್ಲಿ ಹೊನ್ನಿಕೇರಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದನು.
ಅರಣ್ಯದಲ್ಲಿ ಮಾರಣಾಂತಿಕ ಹಲ್ಲೆ
ಜೂನ್ 25 ರಂದು ರಾತ್ರಿ, ಆರೋಪಿ ಭಗವತ್ ತನ್ನ ಪತ್ನಿ ಸಂಜನಾಳನ್ನು ದೇವರ ದರ್ಶನಕ್ಕೆಂದು ಕರೆದೊಯ್ದಿದ್ದು, ಮೈಲಾರ ಮಲ್ಲಣ್ಣ ಮತ್ತು ಶನಿಮಹಾತ್ಮ ದೇವರ ದರ್ಶನ ಮಾಡಿಸಿದ್ದನು. ನಂತರ ಜಗದೇಶ್ವರಿ ಮಠದ ಬಳಿ ಬರುತ್ತಿದ್ದಂತೆ, ತಗ್ಗು ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ, ಕಬ್ಬಿಣದ ರಾಡ್ನಿಂದ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಭೀಕರವಾಗಿ ಗಾಯಗೊಂಡಿದ್ದ ಸಂಜನಾಳನ್ನು ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಜೂನ್ 30) ಸಾವನ್ನಪ್ಪಿದ್ದಾರೆ.
ಕಳೆದ ವರ್ಷವೂ ವಿಷ ಕೊಡಲು ಯತ್ನಿಸಿದ್ದನಂತೆ ಆರೋಪಿ
ಮೃತಳ ಕುಟುಂಬಸ್ಥರು ನೀಡಿರುವ ದೂರಿನ ಪ್ರಕಾರ, ಕಳೆದ ವರ್ಷ ಜುಲೈನಲ್ಲಿ ಆರೋಪಿ ಭಗವತ್ ಸಂಜನಾಳಿಗೆ ನೀರಿನಲ್ಲಿ ಕೀಟನಾಶಕ ಔಷಧಿಯನ್ನು ಬೆರೆಸಿ ಕೊಟ್ಟಿದ್ದನು. ಅದೃಷ್ಟವಶಾತ್, ಆಗ ಸಂಜನಾ ಬದುಕುಳಿದಿದ್ದಳು.. ಪತಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಹತ್ಯೆ ಎಸಗಲಾಗಿದೆ ಎಂದು ಮೃತಳ ಕುಟುಂಬಸ್ಥರು ಧನ್ನೂರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕುಟುಂಬಸ್ಥರ ಆಕ್ರಂದನ, ಪೊಲೀಸ್ ತನಿಖೆ ಆರಂಭ
ಬ್ರಿಮ್ಸ್ ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.. ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಭಗವತ್ ಜ್ಞಾನೇಶ್ವರನನ್ನು ಬಂಧಿಸಲು ತನಿಖೆಯನ್ನು ಆರಂಭಿಸಿದ್ದಾರೆ. ಘಟನೆಯ ಹಿನ್ನೆಲೆ, ಕೊಲೆಯ ಸ್ಥಳ ಮತ್ತು ಬಳಸಿದ ಆಯುಧಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.





