ಶಿವಮೊಗ್ಗ | ಭದ್ರಾವತಿ: ಭದ್ರಾವತಿ ತಾಲೂಕಿನ ಅರಳೀಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು- ವಾಂತಿ ಕಾಣಿಸಿಕೊಂಡಿದೆ. ಮಧ್ಯಾಹ್ನದ ಊಟದ ಬಳಿಕ 10ಕ್ಕೂ ಹೆಚ್ಚು ಮಕ್ಕಳು ವಾಂತಿ ಹಾಗೂ ಹೊಟ್ಟೆನೋವಿನಿಂದ ಅಸ್ವಸ್ಥರಾಗಿದ್ದು, ಕೆಲವೇ ಸಮಯದಲ್ಲಿ ಈ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ತಕ್ಷಣವೇ ಶಿಕ್ಷಕರು ಹಾಗೂ ಪೋಷಕರು ಮಕ್ಕಳನ್ನು ಭದ್ರಾವತಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಸ್ವಸ್ಥಗೊಂಡ ಮಕ್ಕಳಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಧ್ಯಾಹ್ನದ ಊಟ ಸೇವಿಸಿದ ಬಳಿಕ ಮಕ್ಕಳಿಗೆ ಸರ್ಕಾರದ ಆದೇಶದಂತೆ ನೀಡಲಾಗುವ ವಿಟಮಿನ್ ಮತ್ತು ಐರನ್ ಟ್ಯಾಬ್ಲೆಟ್ (ಎಫ್ಎಕ್ಸ್ ಟಾನಿಕ್) ವಿತರಿಸಲಾಗಿದೆ. ಈ ಟ್ಯಾಬ್ಲೆಟ್ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಮಕ್ಕಳಿಗೆ ವಾಂತಿ, ಹೊಟ್ಟೆನೋವು, ತಲೆಸುತ್ತು ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ತಕ್ಷಣ ಶಾಲಾ ಆಡಳಿತವು ಎಚ್ಚೆತ್ತುಕೊಂಡು, ಮಕ್ಕಳನ್ನು ಶಾಲೆಯಿಂದ ನೇರವಾಗಿ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದೆ. ಆಸ್ಪತ್ರೆಗೆ ದಾಖಲಾದ ಎಲ್ಲಾ ಮಕ್ಕಳಿಗೂ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ವೈದ್ಯರ ಪ್ರಕಾರ ಮಕ್ಕಳ ಆರೋಗ್ಯದಲ್ಲಿ ಗಂಭೀರ ಅಪಾಯ ಏನೂ ಇಲ್ಲ. ಎಲ್ಲಾ ಮಕ್ಕಳ ಸ್ಥಿತಿ ಸ್ಥಿರವಾಗಿದ್ದು, ಆತಂಕಪಡಬೇಕಾದ ಪರಿಸ್ಥಿತಿ ಇಲ್ಲ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಅರಳೀಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸರ್ಕಾರದ ಆದೇಶದಂತೆ ಮಕ್ಕಳ ರಕ್ತಾಭಿವೃದ್ಧಿ ಹಾಗೂ ಆರೋಗ್ಯ ವೃದ್ಧಿಗಾಗಿ ನಿಯಮಿತವಾಗಿ ವಿಟಮಿನ್ ಮತ್ತು ಐರನ್ ಟ್ಯಾಬ್ಲೆಟ್ ವಿತರಿಸಲಾಗುತ್ತದೆ. ಆದರೆ ಈ ಬಾರಿ ಟ್ಯಾಬ್ಲೆಟ್ ಸೇವಿಸಿದ ಬಳಿಕ ಮಕ್ಕಳಿಗೆ ಏಕಾಏಕಿ ಅಸ್ವಸ್ಥತೆ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸದ್ಯ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಾದ ಎಲ್ಲಾ ಮಕ್ಕಳಿಗೂ ಸಮರ್ಪಕ ಚಿಕಿತ್ಸೆ ಮುಂದುವರಿದಿದ್ದು, ಬಹುತೇಕ ಮಕ್ಕಳನ್ನು ಕೆಲವೇ ಗಂಟೆಗಳಲ್ಲಿ ಡಿಸ್ಚಾರ್ಜ್ ಮಾಡುವ ನಿರೀಕ್ಷೆ ವ್ಯಕ್ತವಾಗಿದೆ.





