ಬೆಂಗಳೂರು: ಇತ್ತೀಚೆಗೆ ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ ಎಂಬ ಆತಂಕಕಾರಿ ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ಆಹಾರ ಸುರಕ್ಷತಾ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ, ಬೆಂಗಳೂರಿನಾದ್ಯಂತ ವಿವಿಧ ಪ್ರದೇಶಗಳಿಂದ ಮೊಟ್ಟೆಗಳನ್ನು ಸಂಗ್ರಹಿಸಿ ಪ್ರಯೋಗಾಲಯ (ಲ್ಯಾಬ್) ಪರೀಕ್ಷೆಗೆ ರವಾನಿಸಲಾಗಿದೆ.
ಮೊಟ್ಟೆಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ಸುಮಾರು 200ಕ್ಕೂ ಹೆಚ್ಚು ಪ್ರದೇಶಗಳಿಂದ ಅಂದರೆ, ಸೂಪರ್ ಮಾರ್ಕೆಟ್ಗಳು, ಸ್ಥಳೀಯ ಪೌಲ್ಟ್ರಿ ಅಂಗಡಿಗಳು ಮತ್ತು ವಿವಿಧ ಬ್ರ್ಯಾಂಡ್ಗಳ ಮೊಟ್ಟೆಗಳ ಮಾದರಿಯನ್ನ ಸಂಗ್ರಹಿಸಲಾಗಿದೆ. ಹೀಗೆ ಸಂಗ್ರಹಿಸಿದ ಈ ಮಾದರಿಗಳನ್ನು ಗುಣಮಟ್ಟ ಮತ್ತು ಯಾವುದೇ ಅಪಾಯಕಾರಿ ಅಂಶಗಳಿಗಾಗಿ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ವರದಿಯು ಹೊರಬೀಳಲು 15 ರಿಂದ 20 ದಿನಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ , ಮೊಟ್ಟೆಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗೆ ಕಳುಹಿಸಲಾಗಿದೆ. ಲ್ಯಾಬ್ ವರದಿ ಬಂದ ನಂತರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಲ್ಲಿ ಹರಡಿರುವ ಈ ಆತಂಕದ ಕುರಿತು ಆಹಾರ ತಜ್ಞರೂ ಸಹ ಸ್ಪಷ್ಟನೆ ನೀಡಿದ್ದಾರೆ. ಆಹಾರ ತಜ್ಞರ ಪ್ರಕಾರ, ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತೆ ಅನ್ನೋದು ಸಂಪೂರ್ಣವಾಗಿ ತಪ್ಪು ಮತ್ತು ಇದು ಆಧಾರರಹಿತ ವದಂತಿಯಾಗಿದೆ. ಮೊಟ್ಟೆ ಎನ್ನುವುದು ಅತ್ಯಂತ ಉತ್ತಮವಾದ ಪೌಷ್ಠಿಕಾಂಶದ ಮೂಲವಾಗಿದ್ದು, ಮನುಷ್ಯನ ದೇಹಕ್ಕೆ ಅತ್ಯಗತ್ಯ. ಒಂದು ವೇಳೆ ಯಾವುದೇ ಮೊಟ್ಟೆಯಲ್ಲಿ ಕ್ಯಾನ್ಸರ್ಕಾರಕ ಅಂಶಗಳು ಪತ್ತೆಯಾದರೆ ಮಾತ್ರ ಆ ಮೊಟ್ಟೆಯ ಸೇವನೆ ಅಪಾಯಕಾರಿ. ಎಲ್ಲಾ ಮೊಟ್ಟೆಗಳಲ್ಲೂ ಕ್ಯಾನ್ಸರ್ಕಾರಕ ಅಂಶಗಳು ಇರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ವದಂತಿಯ ಬಗ್ಗೆ ಪೌಲ್ಟ್ರಿ ಉದ್ಯಮವು ಸಹ ತೀವ್ರವಾಗಿ ಪ್ರತಿಕ್ರಿಯಿಸಿದೆ. ಪೌಲ್ಟ್ರಿ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ್ ಅವರು, ಉತ್ತರ ಭಾರತದಲ್ಲಿ ಈ ರೀತಿಯ ವದಂತಿಯನ್ನು ದುರುದ್ದೇಶದಿಂದ ಹಬ್ಬಿಸಲಾಗಿದೆ. ಇದು ಶುದ್ಧ ಸುಳ್ಳು. ಯಾವುದೇ ಅಧಿಕೃತ ಲ್ಯಾಬ್ನಿಂದ ಈ ವದಂತಿಯನ್ನು ಸಾಬೀತುಪಡಿಸಲಾಗಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ವದಂತಿಗಳಿಗೆ ತಲೆಕೆಡಿಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಆಹಾರ ಸುರಕ್ಷತಾ ಇಲಾಖೆಯ ವರದಿ ಬಂದ ನಂತರ ಈ ಕುರಿತು ಅಂತಿಮ ಸ್ಪಷ್ಟನೆ ಸಿಗುವ ಸಾಧ್ಯತೆ ಇದೆ. ಸದ್ಯಕ್ಕೆ, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಮೊಟ್ಟೆ ಸೇವನೆಯನ್ನು ಮುಂದುವರೆಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.





