ಕರ್ನಾಟಕ ವಿಧಾನಮಂಡಳದ ಚಳಿಗಾಲದ ಅಧಿವೇಶನ ಇಂದು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಭರ್ಜರಿಯಾಗಿ ಆರಂಭವಾಯಿತು. ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ಸಂವಿಧಾನದ ಪೀಠಿಕೆ ಓದುವ ಮೂಲಕ ಕಲಾಪ ಉದ್ಘಾಟಿಸಿದರೆ, ರಾಷ್ಟ್ರೀಯ ಗೀತೆಯ ನಂತರ ವಂದೇ ಮಾತರಂ ಗೀತೆಯನ್ನು ಸದನದಲ್ಲಿ ಸಾಮೂಹಿಕವಾಗಿ ಹಾಡಲಾಯಿತು.
ವಿಧಾನ ಪರಿಷತ್ನಲ್ಲೂ ಕಲಾಪ ಆರಂಭವಾಗಿದ್ದು, ಮಾಜಿ ಸಚಿವ ಎಂ.ಟಿ.ಬಿ. ಮೇಟಿ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಹೊಸದಾಗಿ ಆಯ್ಕೆಯಾದ ಪರಿಷತ್ ಸದಸ್ಯರಾದ ಶಿವಕುಮಾರ್, ಆರತಿ ಕೃಷ್ಣ, ಜಕ್ಕಪ್ಪ ಅವರನ್ನು ಆಡಳಿತ ಪಕ್ಷದ ನಾಯಕ ಬೋಸ್ರಾಜ್ ಅವರು ಸದನಕ್ಕೆ ಪರಿಚಯಿಸಿದರು.
ಇಂದಿನಿಂದಲೇ ರಣರಂಗಕ್ಕೆ ಸಿದ್ಧ ಸುವರ್ಣ ಸೌಧ
ಅಧಿವೇಶನದ ಮೊದಲ ದಿನವೇ ರಾಜಕೀಯ ಉದ್ವಿಗ್ನತೆ ಗರಿಷ್ಠ ಮಟ್ಟಕ್ಕೆ ಏರಿದೆ.
- ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸರ್ಕಾರದ ವಿರುದ್ಧ ದಾಳಿ ನಡೆಸಲು ಸಂಪೂರ್ಣ ಸಜ್ಜು
- ನಾಯಕತ್ವ ಬದಲಾವಣೆ, ಕಾಂಗ್ರೆಸ್ ಆಂತರಿಕ ಗುಂಪುಗುಚ್ಚು ವಿಚಾರವನ್ನೇ ಮುಂದಿಟ್ಟು ಆಕ್ರಮಣಕ್ಕೆ ಸಿದ್ಧ
- ಬಿಜೆಪಿ ಆಡಳಿತ ಕಾಲದ ಹಗರಣಗಳನ್ನು ಕೆದಕಿ ತೋರಿಸಲು ಸರ್ಕಾರವೂ ರೆಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಪಕ್ಷಗಳ ದಾಳಿಗೆ ತಿರುಗೇಟು ನೀಡಲು ಸಂಪೂರ್ಣ ಸಜ್ಜಾಗಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ, ರೈತರ ಸಮಸ್ಯೆ, ನೀರಾವರಿ ಯೋಜನೆಗಳು ಮುಖ್ಯ ಚರ್ಚೆಯ ವಿಷಯಗಳಾಗಲಿವೆ.
ಅಧಿವೇಶನದಲ್ಲಿ 20ಕ್ಕೂ ಹೆಚ್ಚು ವಿಧೇಯಕಗಳು ಮಂಡನೆಯಾಗಲಿವೆ. ಹೊರಗೆ 95ಕ್ಕೂ ಹೆಚ್ಚು ಸಂಘಟನೆಗಳ ಪ್ರತಿಭಟನೆ, ಎಂಐಎಸ್-ಶಿವಸೇನೆಯ ಧಮಕಿ ಒಟ್ಟಾರೆ ಬೆಳಗಾವಿ ರಾಜಕೀಯ ರಣರಂಗಕ್ಕೆ ಸಿದ್ಧವಾಗಿದೆ.





