ಬೆಳಗಾವಿ: 19 ವರ್ಷದ ಸುಶ್ಮಿತಾ ಶಿವಗೌಡ ಪಾಟೀಲ ಎಂಬ ಯುವತಿ, ತನ್ನ ಊರಿನ 29 ವರ್ಷದ ವಿಠ್ಠಲ ಬಸ್ತವಾಡೆ ಎಂಬ ಯುವಕನನ್ನು ಪ್ರೀತಿಸಿ, ಅವನೊಂದಿಗೆ ಮನೆಬಿಟ್ಟು ಹೋಗಿದ್ದಾಳೆ. ಆದರೆ, ಈ ಪ್ರೀತಿಯ ಸಂಬಂಧಕ್ಕೆ ಸುಶ್ಮಿತಾ ಅವರ ಹೆತ್ತವರು ಒಪ್ಪಿಗೆ ನೀಡಿಲಿಲ್ಲ. ಕಾರಣ, ವಿಠ್ಠಲ ಬೇರೆ ಜಾತಿಯವನಾಗಿದ್ದಾನೆ. ಈ ವಿಷಯವು ಕುಟುಂಬದ ಮಾನ-ಮರ್ಯಾದೆಗೆ ಧಕ್ಕೆ ತಂದಿದೆ ಎಂದು ಭಾವಿಸಿದ ಸುಶ್ಮಿತಾ ಅವರ ತಂದೆ, ತಮ್ಮ ಮಗಳನ್ನು “ಸತ್ತವಳು” ಎಂದು ಘೋಷಿಸಿ, ಇಡೀ ಊರಿಗೆ ತಿಥಿ ಊಟವನ್ನೇ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗದ ನಾಗರಾಳ ಗ್ರಾಮದಲ್ಲಿ ನಡೆದಿದೆ.
ಸುಶ್ಮಿತಾ ಅವರ ತಂದೆಗೆ ನಾಲ್ವರು ಹೆಣ್ಣುಮಕ್ಕಳಿದ್ದು, ಸುಶ್ಮಿತಾ ಕಿರಿಯವಳು. ತಮ್ಮ ಕೊನೆಯ ಮಗಳು ತಮ್ಮ ಒಪ್ಪಿಗೆಯಿಲ್ಲದೆ, ಬೇರೆ ಜಾತಿಯ ಯುವಕನೊಂದಿಗೆ ಮನೆಬಿಟ್ಟು ಹೋಗಿದ್ದಾಳೆ. ಇಷ್ಟು ವರ್ಷಗಳ ಕಾಲ ಸಾಕಿ ಸಲಹಿದ ಮಗಳು, ಕುಟುಂಬದ ಗೌರವವನ್ನು ಉಳಿಸಿಕೊಳ್ಳದೇ, ತಮ್ಮ ಇಚ್ಛೆಯಂತೆ ನಡೆದುಕೊಂಡಿದ್ದಕ್ಕೆ ಹೆತ್ತವರು ತೀವ್ರ ಬೇಸರಗೊಂಡಿದ್ದಾರೆ. ಈ ಬೇಸರದಿಂದಾಗಿಯೇ, ಸುಶ್ಮಿತಾ ತಂದೆ ತನ್ನ ಮಗಳು ಸತ್ತಿದ್ದಾಳೆ ಎಂದು ಆಕೆ ಬದುಕಿದ್ದರೂ ಶ್ರಾದ್ಧ ಕಾರ್ಯವನ್ನು ನಡೆಸಿದ್ದಾರೆ. ಈ ಕಾರ್ಯಕ್ಕೆ ಗ್ರಾಮದ ಜನರನ್ನೂ ಆಹ್ವಾನಿಸಿ, ತಿಥಿ ಊಟವನ್ನು ಆಯೋಜಿಸಿದ್ದಾರೆ,





