ಬೆಳಗಾವಿ: ಪತಿಯ ಮೇಲೆ ಸಂಶಯ ಇಟ್ಟುಕೊಂಡ ಪತ್ನಿಯೊಬ್ಬರು ಅವರ ಮೇಲೆ ಕುದಿಸಿದ ಅಡುಗೆ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ರಾಮನಗರದಲ್ಲಿ ನಡೆದಿದೆ. ಪತ್ನಿ ವೈಶಾಲಿ ಪಾಟೀಲ್ (48) ಕಾದ ಅಡುಗೆ ಎಣ್ಣೆ ಸುರಿದ ಪರಿಣಾಮ ಪತಿ ಸುಭಾಷ ಪಾಟೀಲ್ (55) ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಘಟನೆಯ ಹಿನ್ನೆಲೆ
ಸುಭಾಷ್ ಪಾಟೀಲ್ ಸಿಲಿಂಡರ್ ವಿತರಣೆಯ ಕೆಲಸ ಮಾಡುತ್ತಿದ್ದರು. ದಿನನಿತ್ಯದ ಕೆಲಸ ಮುಗಿಸಿ ಮನೆಗೆ ವಾಪಸಾದ ಸುಭಾಷ್, ರಾತ್ರಿಯ ಊಟಕ್ಕೆ ಕುಳಿತಿದ್ದ ವೇಳೆ ಈ ದಾರುಣ ಘಟನೆ ನಡೆದಿದೆ. ವೈಶಾಲಿ, ತನ್ನ ಪತಿಯ ಮೇಲೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಸಂಶಯಗೊಂಡಿದ್ದರು. ಈ ಸಂಶಯದಿಂದಾಗಿ, ಹಲವಾರು ವರ್ಷಗಳಿಂದ ದಂಪತಿಗಳ ನಡುವೆ ಸಂಸಾರದ ಕಲಹ ಮುಂದುವರೆದಿತ್ತು.
ಆದರೆ, ಈ ಬಾರಿ ವೈಶಾಲಿಯ ಕೋಪ ತಾರಕಕ್ಕೇರಿ, ಏಕಾಏಕಿ ಕಾದಿರುವ ಅಡುಗೆ ಎಣ್ಣೆಯನ್ನು ಪತಿಯ ತಲೆಯ ಮೇಲೆ ಸುರಿದಿದ್ದಾರೆ. ಬಿಸಿ ಎಣ್ಣೆಯಿಂದ ತೀವ್ರವಾಗಿ ಸುಟ್ಟುಹೋಗಿರುವ ಸುಭಾಷ್, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಸುಭಾಷ್ ಮತ್ತು ವೈಶಾಲಿಯ ಸಂಸಾರದಲ್ಲಿ ದೀರ್ಘಕಾಲದಿಂದ ಭಿನ್ನಾಭಿಪ್ರಾಯಗಳು ಇದ್ದವು. ವೈಶಾಲಿಯ ಸಂಶಯವು ಈ ಘಟನೆಗೆ ಮುಖ್ಯ ಕಾರಣವೆಂದು ಪೊಲೀಸರು ಭಾವಿಸಿದ್ದಾರೆ. ಸುಭಾಷ್ ತಮ್ಮ ಕೆಲಸದ ನಿಮಿತ್ತ ಹೊರಗಡೆ ಜನರೊಂದಿಗೆ ಸಂಪರ್ಕದಲ್ಲಿದ್ದಿದ್ದರಿಂದ, ವೈಶಾಲಿಯ ಸಂಶಯ ಮತ್ತಷ್ಟು ಹೆಚ್ಚಾಗಿತ್ತು.
ವೈಶಾಲಿಯ ಈ ಕೃತ್ಯವು ಕೇವಲ ಕೋಪದಿಂದ ಉಂಟಾದುದೇ, ಅಥವಾ ಯೋಜಿತವಾಗಿ ನಡೆದ ಕೊಲೆ ಯತ್ನವೇ ಎಂಬುದನ್ನು ಪೊಲೀಸರು ತನಿಖೆಯ ಮೂಲಕ ಕಂಡುಹಿಡಿಯಲಿದ್ದಾರೆ. ಸದ್ಯಕ್ಕೆ, ವೈಶಾಲಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆಕೆಯ ವಿರುದ್ಧ ಕೊಲೆ ಯತ್ನದ ಆರೋಪದಡಿ ಪ್ರಕರಣ ದಾಖಲಾಗಿದೆ.