ಬೆಂಗಳೂರು: ಬಿಸಿಲಿನಿಂದ ಬೆಂದಿದ್ದ ಬೆಂಗಳೂರಿಗೆ ಮಳೆರಾಯ ಇಂದು ಸಂಜೆ ತಂಪೆರೆದಿದ್ದಾನೆ. ಮೆಜೆಸ್ಟಿಕ್, ಶಿವಾಜಿನಗರ, ಮಲ್ಲೇಶ್ವರಂ, ಬನಶಂಕರಿ, ಜೆ.ಪಿ.ನಗರ ಸೇರಿದಂತೆ ಹಲವೆಡೆ ತುಂತುರು ಮಳೆ ಸುರಿದಿದೆ. ನಗರದಲ್ಲಿ ಮೋಡ ಕವಿದಿದ್ದು, ತಂಪಾದ ವಾತಾವರಣವಿದೆ. ಹವಾಮಾನ ಇಲಾಖೆಯ ಪ್ರಕಾರ, ಇದು ಪೂರ್ವ ಮುಂಗಾರಿನ ಆರಂಭವಾಗಿದ್ದು, ಇನ್ನೂ ಎರಡು ದಿನಗಳ ಕಾಲ ಮಳೆಯ ಸಾಧ್ಯತೆ ಇದೆ ಎನ್ನಲಾಗಿದೆ.
ನಗರದಲ್ಲಿ ತುಂತುರು ಮಳೆಯಾದ ಪರಿಣಾಮ, ಕೆಲವು ಪ್ರದೇಶಗಳಲ್ಲಿ ಜಾಮ್ ಉಂಟಾಗಿದ್ದು, ಬೈಕ್ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ವಾಹನ ಚಾಲಕರು ಮುಂಜಾಗ್ರತಾ ಕ್ರಮ ತೆಗೆದುಕೊಂಡು, ಸುರಕ್ಷಿತವಾಗಿ ಸಂಚರಿಸುವುದು ಅವಶ್ಯಕವಾಗಿದೆ.