ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಮತ್ತೊಂದು ದುರಂತ ಅಪಘಾತ ಸಂಭವಿಸಿದೆ. ಮೆಯೋಹಾಲ್ ಜಂಕ್ಷನ್ನಲ್ಲಿ ನಿನ್ನೆ ಸಂಜೆ 6:30ರ ಸುಮಾರಿಗೆ ನಡೆದ ಸರಣಿ ವಾಹನ ಅಪಘಾತದಲ್ಲಿ 36 ವರ್ಷದ ಅಂಜಲಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಎರಡು ಕಾರುಗಳು ಮತ್ತು ಒಂದು ಬೈಕ್ ಧ್ವಂಸಗೊಂಡಿದ್ದು, ಬೈಕ್ನಲ್ಲಿದ್ದ ವಿಜಯ್ ಕುಮಾರ್ ಎಂಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.
ಕಾವೇರಿ ಎಂಪೋರಿಯಂ ಕಡೆಯಿಂದ ಮೆಯೋಹಾಲ್ ಜಂಕ್ಷನ್ ಕಡೆಗೆ ವೇಗವಾಗಿ ಬಂದ ಗೂಡ್ಸ್ ವಾಹನವೊಂದು ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿಯಾಗಿದೆ. ಈ ಡಿಕ್ಕಿಯ ಪರಿಣಾಮವಾಗಿ ಆ ಕಾರು ಮುಂದೆ ಇದ್ದ ಇನ್ನೊಂದು ಕಾರಿಗೆ ಡಿಕ್ಕಿಯಾಗಿದೆ. ಅದೇ ವೇಗದಲ್ಲಿ ಗೂಡ್ಸ್ ವಾಹನವು ಬೈಕ್ಗೆ ಡಿಕ್ಕಿಯಾಗಿದ್ದು, ಬೈಕ್ನಲ್ಲಿದ್ದ ಅಂಜಲಿ ಮತ್ತು ವಿಜಯ್ ಕುಮಾರ್ ರಸ್ತೆಗೆ ಬಿದ್ದಿದ್ದಾರೆ. ಗೂಡ್ಸ್ ವಾಹನದ ಚಕ್ರ ಅಂಜಲಿಯ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ವಿಜಯ್ ಕುಮಾರ್ಗೆ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚಿಕಿತ್ಸೆಯಲ್ಲಿ ಮುಂದುವರಿದಿದ್ದಾರೆ.
ಅಪಘಾತಕ್ಕೆ ಕಾರಣವಾದ ಗೂಡ್ಸ್ ವಾಹನದ ಚಾಲಕ ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಅಶೋಕನಗರ ಸಂಚಾರ ಠಾಣೆಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕನನ್ನು ಗುರುತಿಸಿ ಬಂಧಿಸಲು ತನಿಖೆ ಆರಂಭಿಸಿದ್ದಾರೆ. ಘಟನೆಯ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಿ, ತನಿಖೆಯನ್ನು ತೀವ್ರಗೊಳಿಸಲಾಗಿದೆ.