ಬೆಂಗಳೂರು, ಏಪ್ರಿಲ್ 25: ಅನೈತಿಕ ಸಂಬಂಧದ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಈರುಳ್ಳಿ ವ್ಯಾಪಾರಿಯಾಗಿದ್ದ 45 ವರ್ಷದ ರಾಮಚಂದ್ರ ರೆಡ್ಡಿ ಮೃತಪಟ್ಟ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಆರೋಪಿಯಾಗಿರುವ ಹರೀಶ್ (43)ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಮಚಂದ್ರ ರೆಡ್ಡಿ ತಮಿಳುನಾಡಿನಿಂದ ಬೆಂಗಳೂರಿಗೆ ವ್ಯಾಪಾರ ಉದ್ದೇಶಕ್ಕಾಗಿ ಆಗಾಗ್ಗೆ ಬರುತ್ತಿದ್ದರು. ಈ ವೇಳೆ ಅವರಿಗೆ ಮಂಜುಳಾ ಎಂಬ ಮಹಿಳೆಯ ಪರಿಚಯವಾಗಿದ್ದು, ಆ ಪರಿಚಯ ಕ್ರಮೇಣ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಬೆಂಗಳೂರಿಗೆ ಬಂದಾಗಲೆಲ್ಲಾ ರಾಮಚಂದ್ರ ರೆಡ್ಡಿ ಮಂಜುಳಾ ಅವರ ಮನೆಗೆ ಭೇಟಿ ನೀಡುತ್ತಿದ್ದು, ಕೆಲವೊಮ್ಮೆ ಅಲ್ಲೇ ಉಳಿದುಕೊಳ್ಳುತ್ತಿದ್ದ ಎನ್ನಲಾಗಿದೆ.
ಇದರ ನಡುವೆ ಮಂಜುಳಾ ಅವರ ಜೀವನಕ್ಕೆ ಹರೀಶ್ ಎಂಬ ವ್ಯಕ್ತಿ ಪ್ರವೇಶಿಸಿದ್ದಾನೆ. ಇವರಿಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿದ್ದು, ಮಂಜುಳಾ ಮತ್ತು ರಾಮಚಂದ್ರ ರೆಡ್ಡಿ ನಡುವಿನ ಸಂಬಂಧದ ವಿಚಾರ ಹರೀಶ್ಗೆ ತಿಳಿದುಬಂದಿತ್ತು. ಇದರಿಂದ ಹರೀಶ್ ತೀವ್ರ ಆಕ್ರೋಶಗೊಂಡಿದ್ದು, ಈ ಸಂಬಂಧಕ್ಕೆ ಅಂತ್ಯಹಾಕಬೇಕೆಂಬ ನಿರ್ಧಾರಕ್ಕೆ ಬಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ದಿನವಾದ ಏಪ್ರಿಲ್ 25ರಂದು ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ರಾಮಚಂದ್ರ ರೆಡ್ಡಿ ಮದ್ಯಪಾನ ಮಾಡಿಕೊಂಡು ಮಂಜುಳಾ ಅವರ ಮನೆಗೆ ತೆರಳಿದ್ದರು. ನಂತರ ಸಮೀಪದಲ್ಲಿರುವ ಪಟ್ಟಲಮ್ಮ ದೇವಸ್ಥಾನದ ಬಳಿ ಮಲಗಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಹರೀಶ್, ರಾಮಚಂದ್ರ ರೆಡ್ಡಿಯ ಮೇಲೆ ದಾಳಿ ನಡೆಸಿದ್ದಾನೆ.
ಹರೀಶ್ ಕಲ್ಲು ಹಾಗೂ ಇಟ್ಟಿಗೆಯಿಂದ ರಾಮಚಂದ್ರ ರೆಡ್ಡಿಯ ತಲೆಗೆ ಬಲವಾಗಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ದಾಳಿಯಿಂದ ರಾಮಚಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಕಾಡುಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಶೀಘ್ರವೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಬಂಧ ರಾಮಚಂದ್ರ ರೆಡ್ಡಿಯ ಪತ್ನಿ ಶೈಲಾ ಅವರು ದೂರು ದಾಖಲಿಸಿದ್ದು, ತಮ್ಮ ಪತಿಯ ಹತ್ಯೆಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಆರೋಪಿಯಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.





