ದಾವಣಗೆರೆ: ದಾವಣಗೆರೆಯ ಐತಿಹಾಸಿಕ ಆನೆಕೊಂಡ ಶ್ರೀ ಮರಡಿ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಪ್ರಸಿದ್ಧ ಕಾರ್ಣಿಕೋತ್ಸವ ಈ ಬಾರಿಯೂ ಭಕ್ತರ ಗಮನ ಸೆಳೆದಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕ ನುಡಿ ನುಡಿಸಿದ್ದು, ನಾಡಿನ ಭವಿಷ್ಯದ ಕುರಿತು ಶುಭದಾಯಕ ಸಂದೇಶದ ಜೊತೆಗೆ ಎಚ್ಚರಿಕೆಯ ಮಾತುಗಳನ್ನೂ ಹೇಳಿದ್ದಾರೆ.
“ರಾಮ ರಾಮ ಅಂದು ನುಡಿದಿತ್ತಲೆ, ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ, ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ, ಕೆಂಪಗೊಂಡಿ ಹಾವಳಿ ಹೆಚ್ಚಾದೀತಲೇ, ಎಚ್ಚರ, ಎಚ್ಚರ, ಎಚ್ಚರ” ಎಂಬ ಕಾರ್ಣಿಕದ ನುಡಿ ಇದೀಗ ಭಕ್ತರು, ರೈತರು ಹಾಗೂ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
‘ಶೃಂಗಾರದ ವನಕೆ ಮುತ್ತೈದೆಯರು ಸೇರಗ ಹೊಡೆದರಲೇ’
ಕಾರ್ಣಿಕದ ಮೊದಲ ಸಾಲು ನಾಡಿನ ಸಮೃದ್ಧಿಯ ಸಂಕೇತ ಎಂದು ಭಕ್ತರು ವ್ಯಾಖ್ಯಾನಿಸುತ್ತಿದ್ದಾರೆ. ‘ಶೃಂಗಾರದ ವನ’ ಎಂದರೆ ಹಸಿರು, ನಳನಳಿಸುವ ಪ್ರಕೃತಿ ಹಾಗೂ ಸಮೃದ್ಧ ಪರಿಸರ ಎಂಬ ಅರ್ಥವನ್ನು ನೀಡಲಾಗುತ್ತಿದೆ. ಮುತ್ತೈದೆಯರು ಸೆರಗು ಬೀಸಿ ಸಂಭ್ರಮಿಸುವ ಚಿತ್ರಣವು ಮಂಗಳಕರ ಪರಿಸ್ಥಿತಿಯ ಸಂಕೇತ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಉತ್ತಮ ಮಳೆ, ಉತ್ತಮ ಬೆಳೆ ಹಾಗೂ ನಾಡಿನಲ್ಲಿ ಸಮೃದ್ಧಿ ನೆಲೆಸಬಹುದು ಎಂಬ ಶುಭ ಸೂಚನೆ ಇದಾಗಿದೆ ಎಂದು ಭಕ್ತರು ಅಭಿಪ್ರಾಯಪಡುತ್ತಿದ್ದಾರೆ. ಇದರ ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಆಯಾಮದಲ್ಲಿಯೂ ಈ ಸಾಲನ್ನು ಕೆಲವರು ವಿಶ್ಲೇಷಿಸುತ್ತಿದ್ದಾರೆ.
‘ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ’
ಕಾರ್ಣಿಕದ ಮತ್ತೊಂದು ಪ್ರಮುಖ ಸಾಲು ಆನೆಯ ಕುರಿತಾಗಿದೆ. ಭಾರತೀಯ ಪರಂಪರೆಯಲ್ಲಿ ಆನೆ ಶಕ್ತಿ, ರಾಜವೈಭವ, ಅಧಿಕಾರ ಮತ್ತು ಪ್ರಭುತ್ವದ ಸಂಕೇತವಾಗಿ ಪರಿಗಣಿಸಲಾಗುತ್ತದೆ.
ಹೀಗಾಗಿ ‘ನರಲೋಕದ ಜನಕೆ ಆನೆ ಆಶೀರ್ವಾದ ಮಾಡಿತ್ತಲೆ’ ಎಂಬ ಸಾಲು ಜನಸಾಮಾನ್ಯರಿಗೆ ಆಡಳಿತ ವ್ಯವಸ್ಥೆಯಿಂದ ಅನುಕೂಲ, ಆರ್ಥಿಕ ನೆರವು ಹಾಗೂ ಸಾಮಾಜಿಕ ಬೆಂಬಲ ದೊರೆಯುವ ಸಂಕೇತ ಎಂದು ಕೆಲವರು ಅರ್ಥೈಸುತ್ತಿದ್ದಾರೆ.
‘ಕೆಂಪಗೊಂಡಿ ಹಾವಳಿ ಹೆಚ್ಚಾದೀತಲೇ ಎಚ್ಚರ’
ಕಾರ್ಣಿಕದ ಕೊನೆಯ ಭಾಗ ಮಾತ್ರ ರೈತರಲ್ಲಿ ಆತಂಕ ಮೂಡಿಸಿದೆ. ‘ಕೆಂಪಗೊಂಡಿ ಹಾವಳಿ ಹೆಚ್ಚಾದೀತಲೇ’ ಎಂಬ ಮಾತನ್ನು ಕೃಷಿ ಕ್ಷೇತ್ರದಲ್ಲಿ ಕೀಟಬಾಧೆ ಹೆಚ್ಚಾಗುವ ಸಾಧ್ಯತೆಯ ಎಚ್ಚರಿಕೆ ಎಂದು ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ.
ಪ್ರಮುಖ ಕೃಷಿ ಬೆಳೆಗಳಿಗೆ ಕೀಟಬಾಧೆ ಉಂಟಾಗಿ ರೈತರಿಗೆ ಬೆಳೆ ನಷ್ಟವಾಗುವ ಸಾಧ್ಯತೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಸಂದೇಶ ಇದಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಮೂರು ಬಾರಿ ‘ಎಚ್ಚರ’-ಗಮನ ಸೆಳೆದ ಸಂದೇಶ
ಕಾರ್ಣಿಕದ ಕೊನೆಯಲ್ಲಿ ‘ಎಚ್ಚರ’ ಎಂಬ ಪದವನ್ನು ಮೂರು ಬಾರಿ ಉಚ್ಚರಿಸಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಸಮೃದ್ಧಿಯ ಸೂಚನೆಗಳ ನಡುವೆಯೂ ಕೆಲವು ಸವಾಲುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶ ಇದಾಗಿದೆ ಎಂದು ಭಕ್ತರು ಅಭಿಪ್ರಾಯಪಡುತ್ತಿದ್ದಾರೆ.
ದಾವಣಗೆರೆಯ ಆನೆಕೊಂಡ ಕ್ಷೇತ್ರದಲ್ಲಿ ನಡೆದ ಈ ಐತಿಹಾಸಿಕ ಕಾರ್ಣಿಕೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಶ್ರಾವಣ ಮಾಸದ ಕೊನೆಯ ಸೋಮವಾರದ ಹಿನ್ನೆಲೆ ಬಾತಿ-ನೀಲಾನಹಳ್ಳಿ ಶ್ರೀ ಆಂಜನೇಯಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳ ದೇವರ ಸಮಾಗಮವೂ ಜಾತ್ರಾ ಮಹೋತ್ಸವದ ವಿಶೇಷವಾಗಿತ್ತು.





