ನೈರೋಬಿ/ಜಿನೀವಾ, ಫೆ. 27: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಗೆ ಸಿಕ್ಕ ಗೌರವ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಕೀನ್ಯಾದ ಯುವ ನಾಯಕ ಕೆಲ್ಲಿ ಕಲೆಬ್ ಅವರು ಪ್ರಮಾಣವಚನ ಸ್ವೀಕಾರದ ಸಂದರ್ಭದಲ್ಲಿ ಭಗವದ್ಗೀತೆ ಹಿಡಿದು ಪ್ರತಿಜ್ಞೆ ಮಾಡಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೊಂದೆಡೆ, ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ ಪಾಕಿಸ್ತಾನದ ಸುಳ್ಳು ಆರೋಪಗಳಿಗೆ ಭಾರತ ತಿರುಗೇಟು ನೀಡಿದೆ.
ಕೀನ್ಯಾದಲ್ಲಿ ಭಗವದ್ಗೀತೆಗೆ ಗೌರವ
ಮೊಂಬಾಸಾ ಯುವ ಅಸೆಂಬ್ಲಿಯಲ್ಲಿ ಕೆಲ್ಲಿ ಕಲೆಬ್ ಅವರು ಫೆಬ್ರವರಿ 14ರಂದು ಪ್ರಮಾಣವಚನ ಸ್ವೀಕರಿಸಿದರು. ಸಾಮಾನ್ಯವಾಗಿ ಈ ಸಮಾರಂಭದಲ್ಲಿ ಯಾವ ಪವಿತ್ರ ಗ್ರಂಥದ ಮೇಲೆ ಪ್ರಮಾಣ ಮಾಡಬೇಕೆಂದು ಮೊದಲೇ ಘೋಷಿಸಿರುವುದಿಲ್ಲ. ಆದರೆ ಕೆಲ್ಲಿ ಕಲೆಬ್ ಅವರು ಭಗವದ್ಗೀತೆಯ ಪುಸ್ತಕವನ್ನು ಕೈಯಲ್ಲಿ ಹಿಡಿದು ಪ್ರತಿಜ್ಞೆ ಸ್ವೀಕರಿಸಿದರು. ಮೊಂಬಾಸಾ ಯುವ ಅಸೆಂಬ್ಲಿಯ ಸದಸ್ಯರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಕೀನ್ಯಾ ಕೌಂಟಿ ಅಸೆಂಬ್ಲಿಯ ಭವಿಷ್ಯದ ನಾಯಕರ ವೇದಿಕೆಯಾಗಿರುವ ಈ ಸಂಸ್ಥೆಯಲ್ಲಿ ಕೆಲ್ಲಿ ಕಲೆಬ್ ಅವರು ಚೆಂಗಾಳ್ವೆ ಕ್ಷೇತ್ರದ ಯುವ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕರು ಅದನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.
ಇಸ್ಕಾನ್ ಸಂಪರ್ಕವೇ ಸ್ಫೂರ್ತಿ
ಕೀನ್ಯಾದ ಮೊಂಬಾಸಾದ ಗಂಜೋನಿ ಪ್ರದೇಶದಲ್ಲಿ ಇಸ್ಕಾನ್ ಘಟಕವೊಂದು ಕಾರ್ಯನಿರ್ವಹಿಸುತ್ತಿದೆ. ಕೆಲ್ಲಿ ಕಲೆಬ್ ಅವರು ತಮ್ಮ ಸಹೋದರನ ಮೂಲಕ ಇಸ್ಕಾನ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇಸ್ಕಾನ್ ನೆರವಿನಿಂದ ವಿದ್ಯಾಭ್ಯಾಸ ಪೂರೈಸಿದ ಅವರು 2021ರಲ್ಲಿ ‘ಬೆಟರ್ ಯು ಕ್ಲಬ್’ ಅಭಿಯಾನವನ್ನು ಮೊಂಬಾಸಾ ವ್ಯಾಪ್ತಿಯಲ್ಲಿ ಆರಂಭಿಸಲು ಕೈಜೋಡಿಸಿದ್ದರು. ಭ್ರಾತೃತ್ವ, ಸಹೋದರತ್ವ, ಎಲ್ಲಾ ಧರ್ಮಗಳಿಗೆ ಗೌರವ ಮತ್ತು ಅಗತ್ಯವಿರುವವರಿಗೆ ನೆರವು ನೀಡುವ ಕಾರ್ಯಕ್ರಮಗಳನ್ನು ಈ ಅಭಿಯಾನದಡಿ ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಅವರು ಸರ್ಕಾರದ ಭಾಗವಾಗಿ ಕೀನ್ಯಾ ಕೌಂಟಿ ಅಸೆಂಬ್ಲಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ ನಡೆಯುತ್ತಿರುವ 61ನೇ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯ ಸಭೆಯಲ್ಲಿ (UNHRC) ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂಬ ಪಾಕಿಸ್ತಾನದ ಆರೋಪಗಳಿಗೆ ಭಾರತದ ಪ್ರತಿನಿಧಿ ಅನುಪಮಾ ಸಿಂಗ್ ಅವರು ತಕ್ಕ ಉತ್ತರ ನೀಡಿದ್ದಾರೆ.
ಪಾಕ್ ಸುಳ್ಳುಗಳನ್ನು ಬಯಲಿಗೆಳೆದ ಭಾರತ
“ಆರ್ಥಿಕ ಕುಸಿತ ಹೊಂದಿರುವ ಪಾಕಿಸ್ತಾನವು, ಅಭಿವೃದ್ಧಿ ಹೊಂದುತ್ತಿರುವ ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡುತ್ತಿದೆ. ಕಾಶ್ಮೀರಕ್ಕೆ ನಾವು ನೀಡಿರುವ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು” ಎಂದು ಅನುಪಮಾ ಸಿಂಗ್ ಹೇಳಿದ್ದಾರೆ. ಪಾಕಿಸ್ತಾನದ ಆರೋಪಗಳಿಗೆ ಬೆಂಬಲ ನೀಡಿದ ಇಸ್ಲಾಮಿಕ್ ಸಹಕಾರ ಸಂಘಟನೆಯನ್ನೂ (ಒಐಸಿ) ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.





