ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಗುರುವಾರ ರಾತ್ರಿ, ಪಾಕಿಸ್ತಾನವು ಭಾರತದ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಮೂಲಕ ಆಕ್ರಮಣಕ್ಕೆ ಯತ್ನಿಸಿತಾದರೂ ವಿಫಲವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಗುರುವಾರ ಮಧ್ಯಾಹ್ನ ಮತ್ತು ತಡರಾತ್ರಿ ಪಾಕಿಸ್ತಾನದ ಲಾಹೋರ್, ಕರಾಚಿ, ಮತ್ತು ಇತರ ಪ್ರಮುಖ ಪ್ರದೇಶಗಳ ಮೇಲೆ ತೀವ್ರ ಕ್ಷಿಪಣಿ ದಾಳಿಗಳನ್ನು ನಡೆಸಿತು. ಈ ದಾಳಿಗಳಿಂದ ಪಾಕಿಸ್ತಾನ ತತ್ತರಿಸಿದ್ದು, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಬಂಕರ್ನಲ್ಲಿ ಅಡಗಿಕೊಂಡಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.
ಪಾಕ್ ಸಂಸದನಿಂದ ಷರೀಫ್ಗೆ ಟೀಕೆ
ಈ ಘಟನೆಯ ಬಗ್ಗೆ ಪಾಕಿಸ್ತಾನದ ಸಂಸತ್ತಿನಲ್ಲಿ ಚರ್ಚೆ ನಡೆದಾಗ, ಒಬ್ಬ ಪಾಕ್ ಸಂಸದರು ತಮ್ಮದೇ ಪ್ರಧಾನಿ ಶೆಹಬಾಜ್ ಷರೀಫ್ರನ್ನು “ಹೇಡಿ” ಎಂದು ತೀವ್ರವಾಗಿ ಟೀಕಿಸಿದ್ದಾರೆ. “ನಮ್ಮ ಪ್ರಧಾನಿ ಭಾರತದ ವಿರುದ್ಧ ಒಂದೇ ಒಂದು ಹೇಳಿಕೆಯನ್ನೂ ನೀಡಿಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಲೂ ಹೆದರುವ ಷರೀಫ್, ನಮ್ಮ ಯೋಧರಿಗೆ ಹೇಗೆ ಧೈರ್ಯ ತುಂಬುತ್ತಾರೆ?” ಎಂದು ಸಂಸದರು ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ, ಅವರು ಟಿಪ್ಪು ಸುಲ್ತಾನ್ರ ಒಂದು ಉಕ್ತಿಯನ್ನು ಉಲ್ಲೇಖಿಸಿ, ಷರೀಫ್ರ ದೌರ್ಬಲ್ಯವನ್ನು ಎತ್ತಿ ತೋರಿದ್ದಾರೆ.
ಆಪರೇಷನ್ ಸಿಂದೂರ್ನ ಭಾಗವಾಗಿ, ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ನೆಲೆಗಳು ಮತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿದೆ. ಈ ದಾಳಿಗಳಿಂದ ಪಾಕಿಸ್ತಾನದ ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯಕ್ಕೆ ಭಾರೀ ಹೊಡೆತ ಬಿದ್ದಿದೆ. ಭಾರತದ ಈ ಆಕ್ರಮಣಕಾರಿ ಕಾರ್ಯತಂತ್ರವು ಪಾಕ್ ಸರ್ಕಾರದ ಮೇಲೆ ಒತ್ತಡವನ್ನು ಹೆಚ್ಚಿಸಿದ್ದು, ಷರೀಫ್ರ ನಾಯಕತ್ವದ ಮೇಲೆ ಅವರ ಸ್ವಂತ ದೇಶದ ಜನರಿಂದಲೇ ಟೀಕೆ ವ್ಯಕ್ತವಾಗುತ್ತಿದೆ.
ಉದ್ವಿಗ್ನತೆಯ ಹಿನ್ನೆಲೆ
ಏಪ್ರಿಲ್ 22, 2025ರಂದು ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಅಮಾಯಕರು ಕೊಲ್ಲಲ್ಪಟ್ಟಿದ್ದರು. ಈ ಘಟನೆಗೆ ಪ್ರತಿಕಾರವಾಗಿ ಭಾರತವು ಪಾಕ್ನ 9 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ, ಸುಮಾರು 100 ಉಗ್ರರನ್ನು ಖತಮ್ ಗೊಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು ಭಾರತದ ಗಡಿಗಳಲ್ಲಿ ಗುಂಡಿನ ದಾಳಿಗಳನ್ನು ಆರಂಭಿಸಿತು, ಇದರಿಂದ ಹಲವಾರು ನಾಗರಿಕರು ಕೊಲ್ಲಲ್ಪಟ್ಟರು. ಈ ಘಟನೆಗಳು ಉಭಯ ದೇಶಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿವೆ.