ಜಾರ್ಖಂಡ್( ಜೂನ್ 30): ಬಡತನ, ಹಸಿವು ಎಂಬುವುದು ಮನುಷ್ಯನಿಗೆ ಒಂದು ಶಾಪ ಎಂದೇ ಹೇಳಬಹುದು. ಯಾವುದೇ ಒಬ್ಬ ವ್ಯಕ್ತಿ ತಾವು ಬಡತನ, ಹಸಿವಿನಿಂದ ಬಳಲಿದರು ತನ್ನ ಮಕ್ಕಳು ಹಸಿವಿನಿಂದ ಇರಬಾರದು ಅಂದುಕೊಳ್ಳುವುದು ಸಾಮಾನ್ಯ. ಬಡತನದಲ್ಲಿ ಇರುವ ವ್ಯಕ್ತಿಗೆ ಒಂದೊಂದು ತುತ್ತು ಕೂಡಾ ಅಮೂಲ್ಯವಾಗಿರುತ್ತದೆ.
ಒಂದು ಕಚೇರಿಯಲ್ಲಿ ಚಿಕ್ಕ ಹುದ್ದೆಯಲ್ಲಿ ಕೆಲಸ ಮಾಡುವವನಿಗೆ ಅವನ ಕೆಲಸ ಚಿಕ್ಕದಾದರೂ ಆತ ಅವನ ಮನೆಯ ಯಜಮಾನನಾಗಿರುತ್ತಾನೆ .ಮನೆಯ ಜವಬ್ದಾರಿ ಆತನಿಗೆ ಹೆಚ್ಚಿರುತ್ತದೆ. ಆದರೆ ಕೆಲವೊಂದು ಕಚೇರಿ ಅಂತವರನ್ನು ನೋಡುವ ದೃಷ್ಠಿಯೇ ಬೇರೆ.
ಜಾರ್ಖಂಡ್ನ ಬೊಕಾರೊದಲ್ಲಿ ನಡೆದಿರುವ ಘಟನೆಯೊಂದು ಆಡಳಿತ ವ್ಯವಸ್ಥೆಯ ಕಠೋರತೆ ಹಾಗೂ ಮಾನವೀಯತೆಯ ಕೊರತೆಯ ಬಗ್ಗೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಕಚೇರಿಯೊಂದರಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರು ಅಧಿಕಾರಿಗಳ ಸಭೆಯ ಬಳಿಕ ಉಳಿದಿದ್ದ ಬಿಸ್ಕೇಟ್ಗಳನ್ನು ತಮ್ಮ ಮಕ್ಕಳಿಗಾಗಿ ಮನೆಗೆ ತೆಗೆದುಕೊಂಡು ಹೋಗಿದ್ದ ಕಾರಣಕ್ಕೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಕಚೇರಿಯಲ್ಲಿ ಸ್ವಚ್ಛತೆ, ದಾಖಲೆ ಸಾಗಣೆ ಹಾಗೂ ಇತರೆ ಸಹಾಯಕ ಕೆಲಸಗಳನ್ನು ನಿರ್ವಹಿಸುತ್ತಿದ್ದ ಜವಾನನು ಸಭೆಯ ನಂತರ ಉಳಿದಿದ್ದ ಬಿಸ್ಕೇಟ್ಗಳನ್ನು ವ್ಯರ್ಥವಾಗದಂತೆ ಮನೆಗೆ ತೆಗೆದುಕೊಂಡು ಹೋಗಿದ್ದಾನೆ. ಆದರೆ ಈ ಕೃತ್ಯವನ್ನು ಅಧಿಕಾರಿಗಳು ನಿಯಮ ಉಲ್ಲಂಘನೆ ಹಾಗೂ ಗಂಭೀರ ಶಿಸ್ತು ಉಲಂಘನೆ ಎಂದು ಪರಿಗಣಿಸಿ ವಜಾ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕರು ಇದು ಕೇವಲ ಶಿಸ್ತು ಕ್ರಮದ ವಿಚಾರವಲ್ಲ, ಬಡವರ ಬದುಕಿನ ವಾಸ್ತವವನ್ನು ಪ್ರತಿಬಿಂಬಿಸುವ ಘಟನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿನಗೂಲಿ ಅಥವಾ ಕಡಿಮೆ ಸಂಬಳದಲ್ಲಿ ಕುಟುಂಬ ನಿರ್ವಹಿಸುವ ಸಿಬ್ಬಂದಿಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಬದಲು ಕಠಿಣ ಕ್ರಮ ಕೈಗೊಂಡಿರುವುದು ಮಾನವೀಯತೆಯ ಕೊರತೆಯನ್ನು ತೋರಿಸುತ್ತದೆ ಎಂದು ಹಲವರು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್ಗಳಿಗೆ ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. “ಕೆಲವರಿಗೆ ಉಳಿದ ಆಹಾರ ಕಸವಾಗಬಹುದು, ಆದರೆ ಮತ್ತೊಬ್ಬರ ಕುಟುಂಬಕ್ಕೆ ಅದು ಒಂದು ಹೊತ್ತಿನ ಊಟವಾಗಿರಬಹುದು” ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು, ಸಣ್ಣ ತಪ್ಪುಗಳಿಗೆ ಕಠಿಣ ಕ್ರಮ ಕೈಗೊಳ್ಳುವ ವ್ಯವಸ್ಥೆ ದೊಡ್ಡ ಮಟ್ಟದ ಭ್ರಷ್ಟಾಚಾರದ ವಿರುದ್ಧ ಅದೇ ಕಠಿಣತೆ ತೋರಿಸುತ್ತದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಈ ಘಟನೆಯ ಸತ್ಯಾಸತ್ಯತೆ ಹಾಗೂ ಇಲಾಖೆಯ ಅಧಿಕೃತ ನಿಲುವಿನ ಕುರಿತು ಸ್ಪಷ್ಟ ಮಾಹಿತಿ ಹೊರಬರಬೇಕಿದ್ದರೂ, ಬಡತನ, ಹಸಿವು ಮತ್ತು ಉದ್ಯೋಗ ಭದ್ರತೆ ಕುರಿತ ಚರ್ಚೆಯನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಕಚೇರಿಯ ನಿಯಮಗಳನ್ನು ಪಾಲಿಸುವುದು ಎಷ್ಟು ಮುಖ್ಯವೋ, ಮಾನವೀಯತೆ ಮತ್ತು ಸಹಾನುಭೂತಿಯೊಂದಿಗೆ ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವುದೂ ಅಷ್ಟೇ ಮುಖ್ಯ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಈ ಘಟನೆ ಸಮಾಜಕ್ಕೆ ಒಂದು ಮಹತ್ವದ ಪ್ರಶ್ನೆಯನ್ನು ಮುಂದಿಡುತ್ತದೆ. ನಿಯಮಗಳ ಅನುಷ್ಠಾನದ ಜೊತೆಗೆ ಮಾನವೀಯ ಮೌಲ್ಯಗಳಿಗೂ ಆದ್ಯತೆ ನೀಡಬೇಕೇ ಎಂಬ ಚರ್ಚೆ ಇದೀಗ ಮತ್ತಷ್ಟು ಗಂಭೀರವಾಗಿದೆ.





