ಬೆಂಗಳೂರು, ಜೂನ್ 25: ನಿತ್ಯ ಸಾವಿರಾರು ಪ್ರಯಾಣಿಕರಿಗೆ ಆಸರೆಯಾಗಿರುವ ನಮ್ಮ ಮೆಟ್ರೋ (Namma Metro) ಮತ್ತೊಮ್ಮೆ ತಾಂತ್ರಿಕ ವೈಫಲ್ಯಕ್ಕೆ ತುತ್ತಾಗಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಸರಿಯಾಗಿ ಲಾಕ್ ಆಗದ ಕಾರಣ, ರೈಲು ನಿಂತಲ್ಲೇ ನಿಂತಿತ್ತು. ಇದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಯಿತು. ನಿನ್ನೆಯೂ ಪೀಕ್ ಅವರ್ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಇಂದು ಮತ್ತೆ ಅದೇ ರೀತಿಯ ಸಮಸ್ಯೆ ಪುನರಾವರ್ತನೆಯಾಗಿದೆ.
ಆಗಿದ್ದೇನು?
ಬೆಂಗಳೂರಿನ ಜೀವನಾಡಿಯಾಗಿರುವ ನಮ್ಮ ಮೆಟ್ರೋ ರೈಲಿನಲ್ಲಿ ಮತ್ತೊಮ್ಮೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ವೈಟ್ಫೀಲ್ಡ್-ಚಲ್ಲಘಟ್ಟ ನೇರಳೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲಿನ ಒಂದು ಬಾಗಿಲು ಸರಿಯಾಗಿ ಮುಚ್ಚದೇ ಹೋಗಿದೆ. ಬಾಗಿಲು ಲಾಕ್ ಆಗದ ಕಾರಣ, ಸುರಕ್ಷತಾ ಕಾರಣಗಳಿಗಾಗಿ ರೈಲನ್ನು ನಿಲ್ಲಿಸಲಾಯಿತು. ಇದರಿಂದಾಗಿ ಪ್ರಯಾಣಿಕರು ನಿಲ್ದಾಣದಲ್ಲೇ ಕೆಲಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆತಂಕಿತರಾದ ಪ್ರಯಾಣಿಕರು ಅಧಿಕಾರಿಗಳಿಗೆ ದೂರು ನೀಡಿದರು.
ಪ್ರಯಾಣಿಕರ ಪರದಾಟ
ಈ ಘಟನೆಯಿಂದಾಗಿ ಪ್ರಯಾಣಿಕರು ತಮ್ಮ ಕೆಲಸಕ್ಕೆ ತಡವಾಗುವ ಆತಂಕದಲ್ಲಿದ್ದರೆ, ಇನ್ನು ಕೆಲವರು ಶಾಲೆಗೆ ಮಕ್ಕಳನ್ನು ಕರೆದೊಯ್ಯುವಲ್ಲಿ ವಿಫಲರಾದರು. ಬಾಗಿಲು ಲಾಕ್ ಆಗದೇ ರೈಲು ನಿಂತಲ್ಲೇ ನಿಂತಿದ್ದರಿಂದ, ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರ ರೈಲುಗಳ ಸಂಚಾರವೂ ಸ್ಥಗಿತಗೊಂಡಿತು. ಸರಾಸರಿ 15-20 ನಿಮಿಷಗಳ ಕಾಲ ಮೆಟ್ರೋ ಸೇವೆಗೆ ತಡೆಯುಂಟಾಯಿತು. ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳನ್ನು ಹುಡುಕುವಂತಾಯಿತು.
ಬಿಎಂಆರ್ಸಿಎಲ್ ಸ್ಪಂದನೆ
ಘಟನೆ ನಡೆದ ತಕ್ಷಣ ಬಿಎಂಆರ್ಸಿಎಲ್ ಸಿಬ್ಬಂದಿ ಹಾಗೂ ಮೆಟ್ರೋ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬಾಗಿಲು ಲಾಕ್ ಆಗದಿರುವ ಸಮಸ್ಯೆಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದರು. ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಲು ಸುಮಾರು 17 ನಿಮಿಷಗಳ ಸಮಯ ತೆಗೆದುಕೊಂಡಿತು. ಸಿಬ್ಬಂದಿ ಕಾರ್ಯಾಚರಣೆಯ ಬಳಿಕ ಡೋರ್ ಲಾಕ್ ಸಮಸ್ಯೆಯನ್ನು ಯಶಸ್ವಿಯಾಗಿ ಸರಿಪಡಿಸಲಾಯಿತು. ಇದರಿಂದಾಗಿ 5 ಮೆಟ್ರೋ ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು. ಸದ್ಯ ವೈಟ್ಫೀಲ್ಡ್-ಚಲ್ಲಘಟ್ಟ ನೇರಳೆ ಮಾರ್ಗದಲ್ಲಿ ಸಂಚಾರ ಪುನಾರಂಭಗೊಂಡಿದೆ.
ಬಿಎಂಆರ್ಸಿಎಲ್ ಕ್ಷಮೆಯಾಚನೆ
ಬಿಎಂಆರ್ಸಿಎಲ್ ತಾತ್ಕಾಲಿಕ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದ್ದು, “ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಂಚರಿಸುತ್ತಿದ್ದ ರೈಲಿನ ಒಂದು ಬಾಗಿಲು ಸರಿಯಾಗಿ ಮುಚ್ಚದ ಕಾರಣ ಸಮಸ್ಯೆ ಉಂಟಾಗಿದೆ. ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ತಾಂತ್ರಿಕ ದೋಷವನ್ನು ತ್ವರಿತವಾಗಿ ಸರಿಪಡಿಸಿವೆ. ನೇರಳೆ ಮಾರ್ಗದ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿದೆ. ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ” ಎಂದು ತಿಳಿಸಿದೆ.
ಪ್ರಯಾಣಿಕರ ಅಸಮಾಧಾನ
ಪುನರಾವರ್ತಿತ ಸಮಸ್ಯೆಗಳಿಂದ ಬೆಂಗಳೂರಿನ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪ್ರತಿದಿನ ಮೆಟ್ರೋದಲ್ಲಿ ಸಮಸ್ಯೆ ಆಗುತ್ತೆ. ಬೆಳಗ್ಗೆ ಆಫೀಸಿಗೆ ಹೊರಟವರಿಗೆ ತೊಂದರೆಯಾಗುತ್ತಿದೆ. ದಿನಕ್ಕೆ ₹50-60 ಟಿಕೆಟ್ ಕೊಟ್ಟು ಪ್ರಯಾಣಿಸುವ ನಮಗೆ ಅಧಿಕಾರಿಗಳು ಗುಣಮಟ್ಟದ ಸೇವೆ ನೀಡಬೇಕು” ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳ ಹಿನ್ನೆಲೆ
ಬೆಂಗಳೂರಿನಲ್ಲಿ ಹೊಸ ಮೆಟ್ರೋ ಮಾರ್ಗಗಳ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ. ಈ ನಡುವೆ ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ಕುಂಠಿತವಾಗುತ್ತಿರುವುದು ಆತಂಕಕಾರಿ. ಬಿಎಂಆರ್ಸಿಎಲ್ ತಾಂತ್ರಿಕ ತಂಡಗಳು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದೆ.





