ಶ್ರಾವಣವು ಹಬ್ಬಗಳ ಮಾಸ ಎಂದೇ ಕರೆಯಲಾಗುತ್ತದೆ. ಸಾಲು ಸಾಲು ಹಬ್ಬಗಳ ಮಾಸವಾದ ಶ್ರಾವಣದ ಎರಡನೆಯ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬವನ್ನು ಎಲ್ಲರೂ ಅತ್ಯಂತ ಭಕ್ತಿಯಿಂದ ಆಚರಿಸುತ್ತಾರೆ. ವರಮಹಾಲಕ್ಷ್ಮಿಯನ್ನು ವರಗಳನ್ನು ಹೊತ್ತು ತರುವ ತಾಯಿ ಎಂದೇ ಕರೆಯುಯವ ಪ್ರತೀತಿಯಿದೆ.
ಹಬ್ಬಕ್ಕೆ ರಾಜ್ಯದಾದ್ಯಂತ ಸಂಭ್ರಮದಲ್ಲಿ ತಯಾರಿ ಸಾಗುತ್ತಿದೆ. ವರಮಹಾಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ. ಎಲ್ಲಾ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಮಹಿಳೆಯರು ಹಬ್ಬಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ಹಬ್ಬದ ಆಚರಣೆಯ ಖುಷಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರಿಗೆ ಈ ಹಬ್ಬ ಏಕೆ ಶ್ರೇಷ್ಟ? ಹಬ್ಬವನ್ನು ಏಕೆ ಆಚರಿಸಬೇಕು? ಲಕ್ಷ್ಮಿ ಪೂಜೆಯ ಮಹತ್ವವೇನು? ಎನ್ನುವುದನ್ನು ತಿಳಿಯೋಣ.
ಹಿಂದೂ ಧರ್ಮದಲ್ಲಿ ಲಕ್ಷ್ಮಿ ಮಾತೆಯು ಸಂಪತ್ತು, ಧನ, ಸುಸ್ಥಿರತೆಯ ಪ್ರತೀಕ. ಆಕೆಯನ್ನು ಪ್ರಗತಿಯ ಸಂಕೇತ ಎಂದು ಕರೆಯುತ್ತಾರೆ. ಲಕ್ಷ್ಮಿ ನೆಲೆಸಿರುವ ಜಾಗದಲ್ಲಿ ಎಂದೂ ಕೊರತೆ ಇರುವುದಿಲ್ಲ, ಲಾಭ ಧನ ಕನಕಗಳು ಅಧಿಕವಾಗಿ ಆರ್ಥಿಕವಾಗಿ ಸಬಲಾಗಿರುತ್ತಾರೆ. ಈಕೆ ನೆಲೆಸಿರುವ ಪ್ರದೇಶಗಳಲ್ಲಿ ಎಂದೂ ಆರ್ಥಿಕ ಬಿಕ್ಕಟ್ಟು ಆಗುವುದೇ ಇಲ್ಲ. ಹಾಗಾಗಿ ಮನೆಯಲ್ಲಿ ಮಾತ್ರವಲ್ಲದೇ ಅಂಗಡಿ, ಕೆಲಸ ಮಾಡುವ ಪ್ರದೇಶಗಳಲ್ಲಿ ಆಕೆಯನ್ನು ಪೂಜಿಸುತ್ತಾರೆ. ಇದರಿಂದ ಕೆಲಸ ಕಾರ್ಯಗಳು ಲಾಭದಲ್ಲಿ ನಡೆಯುತ್ತದೆ ಎನ್ನುವುದು ನಂಬಿಕೆ.
ಲಕ್ಷ್ಮಿ ಕೇವಲ ಸಂಪತ್ತಿನ ದೇವತೆ ಮಾತ್ರವಲ್ಲ. ಆಕೆ ಶಕ್ತಿ, ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯ ಪ್ರತೀಕ.ವೇದ-ಪುರಾಣಗಳಲ್ಲಿ ಬ್ರಹ್ಮಾಂಡದ ಶಕ್ತಿ ಎಂದು ಪೂಜಿಸಲಾಗುತ್ತದೆ. ತಾಯಿ ಲಕ್ಷ್ಮಿಯಂತೆ ಹೆಣ್ಣು ಸೃಷ್ಟಿಸುವ, ಪೋಷಿಸುವ ಶಕ್ತಿಯನ್ನು ಹೊಂದಿದ್ದಾಳೆ.
ಶುಕ್ರವಾರದ ವಿಶೇಷವೇನು?
ಸಾಮಾನ್ಯವಾಗಿ ವಾರದ ಎಲ್ಲಾ ದಿನಗಳೂ ಒಂದೊಂದು ದೇವರ ಪೂಜೆಯನ್ನು ಮಾಡುತ್ತಾರೆ. ಶುಭ ಶುಕ್ರವಾರವು ದೇವಿಯ ವಾರ ಎಂದೇ ಕರೆಯುತ್ತಾರೆ. ಶ್ರಾವಣದ ಈ ಶುಭ ವಾರವು ದೇವಿಯ ಪೂಜೆಗೆ ಸೂಕ್ತ.
ಲಕ್ಷ್ಮೀ ಎಂದರೆ ಯಾವಾಗಲೂ ಎಲ್ಲವನ್ನೂ ನೋಡುತ್ತಿರುವವಳು ಎಂದರ್ಥ. ಸರ್ವಸಾಕ್ಷಿಯಾದ ಭಗವಂತನೊಂದಿಗೆ ಆಕೆ ಸರ್ವಶಕ್ತಿಯಾಗಿದ್ದಾಳೆ. ಇದಕ್ಕಾಗಿಯೇ ಸಿರಿ, ಸೌಭಾಗ್ಯ ಮತ್ತು ಸಂಪತ್ತು ಅಭಿವೃದ್ಧಿ ಕೋರಿ ಸುಮಂಗಲಿಯರು ಲಕ್ಷ್ಮೀ ವ್ರತವನ್ನು ಆಚರಿಸುತ್ತಾರೆ.
ಹಬ್ಬದ ಆಚರಣೆ ಹೇಗೆ?
ಲಕ್ಷ್ಮೀ ದೇವಿ ಶುದ್ಧತೆಯ ಪ್ರತೀಕ. ಆದ್ದರಿಂದ ಹಬ್ಬದ ದಿನ ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ ರಂಗೋಲಿ, ತೋರಣ, ತಳಿರುಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುದ್ಧವಾದ ಮಡಿ ಬಟ್ಟೆಯನ್ನು ಧರಿಸಲಾಗುತ್ತದೆ.
ಚಿಕ್ಕ ಬಿಂದಿಗೆಯಲ್ಲಿ ನೀರು ತುಂಬಿ ಅಕ್ಕಿ ಹರಡಿದ ತಟ್ಟೆ ಮೇಲೆ ಈ ಕಲಶವಿರಿಸಿ, ಕಲಶಕ್ಕೆ ಮಾವಿನ ಎಲೆ, ವೀಳ್ಯದೆಲೆಗಳನ್ನು ಅಲಂಕರಿಸಿ , ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿ ಇಡಲಾಗುತ್ತದೆ. ಕಲಶಕ್ಕೆ ಮುಖವಾಡ, ಒಡವೆಗಳಿಂದ ಸಿಂಗರಿಸಲಾಗುತ್ತದೆ.
ಪೂಜಾ ಸಾಮಗ್ರಿಗಳು: ಲಕ್ಷ್ಮಿಗೆ ಕಮಲದ ಹೂವು, ಬಿಲ್ವಪತ್ರೆಗಳು ಬಹಳ ಪ್ರಿಯ ಹಣ, ಚಿನ್ನ, ಹಣ್ಣುಅರಿಶಿಣ, ಕುಂಕುಮ, ಹಣ ಒಡವೆ ಎಲ್ಲವನ್ನೂ ತೊಡಿಸಿ ದೇವಿಯನ್ನು ಸಿಂಗಾರಗೊಳಿಸಿ , ದೇವಿಯನ್ನು ಅಲಂಕಾರ ಮಾಡಿ ನೆರೆ ಹೊರೆಯ ಮುತ್ತೈದೆಯರನ್ನೆಲ್ಲಾ ಕರೆದು ಪೂಜೆ ಮಾಡಿ ನಂತರ ಅರಿಷಿಣ ಕುಂಕುಮ ಜೊತಗೆ ಮುತ್ತೈದೆ ಬಾಗೀನ ಹೂವು, ಬಳೆಗಳನ್ನು ನೀಡಿ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ. ತನು , ಮನ , ಶುದ್ಧಿ ಇದ್ದಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂದು ಹಿರಿಯರು ಹೇಳುತ್ತಾರೆ.





