ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ವಿಜಯಪುರದಲ್ಲಿ ಸಚಿವ ಶಿವಾನಂದ ಪಾಟೀಲ್, ಶಾಸಕರಾದ ವಿಜಯಾನಂದ ಕಾಶಪ್ಪನವರ ಮತ್ತು ಯಶವಂತರಾಯಗೌಡ ಪಾಟೀಲ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೊಹ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಯತ್ನಾಳ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಈ ರಾಜಕಾರಣಿಗಳು ಭಾಗಿಯಾಗಿದ್ದರು. ಈ ಬಗ್ಗೆ ಕೆಂಡಾಮಂಡಲವಾದ ಯತ್ನಾಳ್, ತಮ್ಮ ಹೇಳಿಕೆಗಳ ಮೂಲಕ ತಿರುಗೇಟು ನೀಡಿದ್ದಾರೆ.
ಶಿವಾನಂದ ಪಾಟೀಲ್ಗೆ ಯತ್ನಾಳ್ ತಿರುಗೇಟು
ಪ್ರತಿಭಟನೆಯ ವೇಳೆ ಸಚಿವ ಶಿವಾನಂದ ಪಾಟೀಲ್ ಅವರು, ಯತ್ನಾಳ್ ವಿರುದ್ಧ ವಿಜಯಪುರದಲ್ಲಿ ಸ್ಪರ್ಧಿಸುವ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಶಿವಾನಂದ ಪಾಟೀಲ್ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ. “ಅವನು ಶಿವಾನಂದ ಪಾಟೀಲ್ ಅಲ್ಲ, ಶಿವಾನಂದ ಹಚಡ. ಅವನು ತನ್ನ ತಂದೆಗೆ ಹುಟ್ಟಿದವನಾದರೆ, ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಲಿ. ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸಲಿ. ಆಗ ವಿಜಯಪುರಕ್ಕೆ ಬಂದು ಸ್ಪರ್ಧಿಸಲಿ. ಮುಂದಿನ ಶುಕ್ರವಾರದೊಳಗೆ ರಾಜಿನಾಮೆ ಕೊಡಲಿ, ನಾನೇ ವಿಜಯಾನಂದನ ಮುಖ ನೋಡಿಕೊಳ್ಳುತ್ತೇನೆ,” ಎಂದು ಯತ್ನಾಳ್ ಸವಾಲು ಹಾಕಿದ್ದಾರೆ.
ಯತ್ನಾಳ್ ತಮ್ಮ ಆಕ್ರೋಶವನ್ನು ಮುಂದುವರೆಸುತ್ತಾ, “ಶಿವಾನಂದ ತನ್ನ ತಂದೆಗೆ ಹುಟ್ಟಿದವನೇ ಅಲ್ಲ ಎನಿಸುತ್ತದೆ. ಅವನು ಇಲ್ಲಿ ಬಂದು ಸ್ಪರ್ಧಿಸೋದು ಬಿಡಿ, ನಾನೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆ. ಶಿವಾನಂದ ಮತ್ತು ವಿಜಯಾನಂದ ಇಬ್ಬರೂ ತಮ್ಮ ಕ್ಷೇತ್ರಗಳಿಂದ ರಾಜಿನಾಮೆ ಕೊಡಲಿ. ನಾನು ಪಕ್ಷೇತರವಾಗಿ ಅವರ ಕ್ಷೇತ್ರಗಳಲ್ಲಿ ನಿಂತು ಗೆದ್ದು ತೋರಿಸುತ್ತೇನೆ,” ಎಂದು ಘೋಷಿಸಿದ್ದಾರೆ.
ಪ್ರತಿಭಟನಾಕಾರರ ವಿರುದ್ಧ ಆಕ್ರೋಶ
ಯತ್ನಾಳ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದವರನ್ನು “ಹರಾಮ್ ಕೋರರು” ಎಂದು ಕರೆದ ಯತ್ನಾಳ್, ಒಬ್ಬರಾದರೂ ಭಾರತ ಮಾತೆಗೆ ಜೈ ಎಂದು ಕೂಗಿದ್ದರಾ? ಪಾಕಿಸ್ತಾನಕ್ಕೆ ಧಿಕ್ಕಾರ ಎಂದು ಕೂಗಿದ್ದರಾ? ಎಂದು ಪ್ರಶ್ನಿಸಿದ್ದಾರೆ. ಅವರು ಮುಂದುವರೆದು, ಕಾಂಗ್ರೆಸ್ ಸಚಿವರು ಮತ್ತು ಶಾಸಕರನ್ನು ಮುಸ್ಲಿಂ ಮುಖಂಡರು ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುವವರಿಗೆ ಚಪ್ಪಲಿಯಿಂದ ಹೊಡೆಯಿರಿ. ಅವರ ಪರವಾಗಿ ನಾನಿರುತ್ತೇನೆ, ಅವರ ವಕಾಲತ್ತನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.