ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಟ್ರ್ಯಾಕರ್, ಜಿಪಿಎಸ್ ಮತ್ತು ಕ್ಯಾಮೆರಾ ಹೊಂದಿದ ರಣಹದ್ದು ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಮಹಾರಾಷ್ಟ್ರದ ನಾಗಪೂರ ಬಳಿಯ ಮೇಲಘಾಟ ಪ್ರದೇಶದಿಂದ ಬಂದ ಈ ರಣಹದ್ದು ಜಿಪಿಎಸ್ ಭಾರದಿಂದ ಬಸವಳಿದು ನೆಲಕ್ಕೆ ಬಿದ್ದಿತ್ತು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಜನವರಿ 15ರಂದು ಸ್ಥಳೀಯರು ರಣಹದ್ದನ್ನು ಕಂಡು 112 ಎಮರ್ಜೆನ್ಸಿ ಸೇವೆಗೆ ಕರೆ ಮಾಡಿದರು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪಕ್ಷಿಯನ್ನು ವಶಕ್ಕೆ ಪಡೆದರು. ರಣಹದ್ದಿನ ಕಾಲಿಗೆ ಗುರುತಿನ ಸಂಖ್ಯೆಯ ಟ್ಯಾಗ್ ಅಳವಡಿಸಲಾಗಿತ್ತು. ಪಕ್ಷಿಯ ದೇಹದಲ್ಲಿ ಜಿಪಿಎಸ್ ಟ್ರ್ಯಾಕರ್, ಕ್ಯಾಮೆರಾ ಮಾದರಿಯ ಸಣ್ಣ ವಸ್ತುಗಳನ್ನು ಅಳವಡಿಸಲಾಗಿತ್ತು. ಝಳಕಿ ಪೊಲೀಸ್ ಠಾಣೆಯಲ್ಲಿ ರಣಹದ್ದನ್ನು ತಾತ್ಕಾಲಿಕವಾಗಿ ಇರಿಸಲಾಯಿತು. ನಂತರ ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತನಿಖೆಯಲ್ಲಿ ರಣಹದ್ದು ಮಹಾರಾಷ್ಟ್ರದ ಅರಣ್ಯ ಇಲಾಖೆಯಿಂದ ಟ್ರ್ಯಾಕ್ ಮಾಡಲ್ಪಡುತ್ತಿತ್ತು ಎಂದು ದೃಢಪಟ್ಟಿದೆ. ರಣಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಜೀವನ ಶೈಲಿ, ಸಂಚಾರ ಮಾರ್ಗ, ಆಹಾರ ಸರಪಳಿ ಮತ್ತು ಪರಿಸರ ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಮಹಾರಾಷ್ಟ್ರ ಅರಣ್ಯ ಇಲಾಖೆ ಜಿಪಿಎಸ್ ಟ್ರ್ಯಾಕರ್ ಅಳವಡಿಸುವ ಯೋಜನೆ ಹಮ್ಮಿಕೊಂಡಿದೆ. ಈ ರಣಹದ್ದು ಕೂಡ ಅದೇ ಯೋಜನೆಯ ಭಾಗವಾಗಿ ಟ್ಯಾಗ್ ಮಾಡಲ್ಪಟ್ಟಿತ್ತು.
ಜಿಪಿಎಸ್ ಮತ್ತು ಟ್ರ್ಯಾಕರ್ಗಳ ಭಾರದಿಂದಾಗಿ ಪಕ್ಷಿ ಬಸವಳಿದು ಬಿದ್ದಿರಬಹುದು ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ರಣಹದ್ದಿನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಸಮಯದಲ್ಲಿ ಹಾರಿ ಬಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮಹಾರಾಷ್ಟ್ರದ ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲು ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ಸಿದ್ಧರಾಗಿದ್ದಾರೆ.
ರಣಹದ್ದುಗಳು ಪರಿಸರದ ಸ್ವಚ್ಛತೆಗೆ ಮಹತ್ವದ ಪಾತ್ರ ವಹಿಸುವ ಪಕ್ಷಿಗಳಾಗಿವೆ. ಇವುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಪರಿಸರಕ್ಕೆ ದೊಡ್ಡ ಆತಂಕವಾಗಿದೆ. ಈ ರಣಹದ್ದು ಪತ್ತೆಯಾಗಿರುವುದು ವೈಜ್ಞಾನಿಕ ಅಧ್ಯಯನಕ್ಕೆ ಮತ್ತು ಸಂರಕ್ಷಣಾ ಕಾರ್ಯಕ್ಕೆ ಸಹಾಯಕವಾಗಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರು ರಣಹದ್ದನ್ನು ಕಂಡು ತಕ್ಷಣ 112ಗೆ ಕರೆ ಮಾಡಿದ್ದು ಶ್ಲಾಘನೀಯವಾಗಿದೆ. ಇದರಿಂದ ಪಕ್ಷಿಯ ಜೀವ ಉಳಿಸಲು ಸಾಧ್ಯವಾಯಿತು. ರಣಹದ್ದುಗಳ ಸಂರಕ್ಷಣೆ ಮತ್ತು ಪರಿಸರ ಸಮತೋಲನಕ್ಕಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅರಣ್ಯ ಇಲಾಖೆ ಒತ್ತಾಯಿಸಿದೆ.





