ಹೆತ್ತ ತಾಯಿಯ ಗೌರವಕ್ಕೆ ಧಕ್ಕೆ ತರುವ ಕೃತ್ಯವನ್ನು ಸಹಿಸದ ಮಗನೊಬ್ಬ 10 ವರ್ಷಗಳ ನಂತರ ಸೇಡು ತೀರಿಸಿಕೊಂಡ ಭಯಾನಕ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ (51) ಎಂಬಾತನನ್ನು ಮಚ್ಚಿನಿಂದ 16 ಬಾರಿ ಕೊಚ್ಚಿ, ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿ ಈರಯ್ಯ ಮಠಪತಿ ತನ್ನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮತ್ತು 10 ವರ್ಷಗಳ ಹಿಂದೆ ಊರು ಬಿಟ್ಟು ಓಡಿಹೋಗಿದ್ದ ಬಸಪ್ಪನ ವಿರುದ್ಧ ದ್ವೇಷ ಸಾಧಿಸಿದ್ದಾನೆ.
ಸೋಮವಾರ ಸಂಜೆ ರಸ್ತೆಯಲ್ಲಿ ಬರುತ್ತಿದ್ದ ಬಸಪ್ಪ ಹೊಸಮನಿಯನ್ನು ಆರೋಪಿ ಈರಯ್ಯ ಅಡ್ಡಗಟ್ಟಿ ದಾಳಿ ನಡೆಸಿದನು. ಕೋಪದಲ್ಲಿ ಮಚ್ಚಿನಿಂದ 16 ಬಾರಿ ಇರಿದು, ಕೊಚ್ಚಿ ಸ್ಥಳದಲ್ಲೇ ಹತ್ಯೆ ಮಾಡಿದನು. ರಸ್ತೆಯುದ್ದಕ್ಕೂ ರಕ್ತದ ಕಲೆಗಳು ಹರಡಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದರು.
ಹತ್ಯೆ ನಂತರ ಆರೋಪಿ ಓಡಿಹೋಗದೆ ಸ್ವತಃ ಪೊಲೀಸರಿಗೆ ಫೋನ್ ಮಾಡಿ “ನಾನೇ ಕೊಲೆ ಮಾಡಿದ್ದೇನೆ, ಬಂದು ಕರೆದುಕೊಂಡು ಹೋಗಿ” ಎಂದು ಹೇಳಿದನು. ಪೊಲೀಸರು ಬರುವವರೆಗೂ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವದ ಬೆನ್ನ ಮೇಲೆ ಕಾಲಿಟ್ಟು, ಮಚ್ಚು ಹಿಡಿದು ವಿಕೃತಿಯಿಂದ ನಿಂತಿದ್ದನು. ಸಿನಿಮಾ ಶೈಲಿಯಲ್ಲಿ ವಿಜಯದ ಪೋಸ್ ಕೊಟ್ಟಂತೆ.
ಸುಮಾರು 10 ವರ್ಷಗಳ ಹಿಂದೆ ಬಸಪ್ಪ ಹೊಸಮನಿ ಈರಯ್ಯನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಓಡಿಹೋಗಿದ್ದನು. ನಂತರ ಇಬ್ಬರೂ ವಾಪಸ್ ಬಂದಿದ್ದರು. ಈ ಘಟನೆ ಈರಯ್ಯನ ಮನಸ್ಸಿನಲ್ಲಿ ಆಳವಾದ ಗಾಯ ಮಾಡಿತ್ತು. ಸಮಾಜದಲ್ಲಿ ತಲೆ ತಗ್ಗಿಸುವಂತೆ ಮಾಡಿದ ಬಸಪ್ಪನ ವಿರುದ್ಧ ದ್ವೇಷವನ್ನು 10 ವರ್ಷಗಳ ಕಾಲ ಇಟ್ಟುಕೊಂಡು, ಸಮಯಕ್ಕಾಗಿ ಕಾಯುತ್ತಿದ್ದ. ನಿನ್ನೆ ಸಂಜೆ ಆ ದ್ವೇಷ ಜ್ವಾಲೆಯಾಗಿ ಸ್ಫೋಟಗೊಂಡಿತು.
ಸವದತ್ತಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಈರಯ್ಯ ಮಠಪತಿಯನ್ನು ವಶಕ್ಕೆ ಪಡೆಯಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತನಿಖೆ ಮುಂದುವರೆದಿದ್ದು, ಹಳೆಯ ದ್ವೇಷ ಮತ್ತು ಕುಟುಂಬ ಕಲಹದ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಈ ಘಟನೆಯು ಗ್ರಾಮದಲ್ಲಿ ಆಘಾತ ಮೂಡಿಸಿದ್ದು, ಕುಟುಂಬ ಗೌರವಕ್ಕಾಗಿ ಮನುಷ್ಯ ಎಷ್ಟು ಘೋರ ಕೃತ್ಯಕ್ಕೂ ಇಳಿಯಬಲ್ಲ ಎಂಬುದನ್ನು ತೋರಿಸುತ್ತದೆ.





