ಶಿವಮೊಗ್ಗದಲ್ಲಿ ಕಳ್ಳತನದ ಸರಣಿ ಘಟನೆಗಳು ಹೆಚ್ಚಾಗುತ್ತಿದ್ದು, ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಸಿಸುವ ಬಡಾವಣೆಯೇ ಕಳ್ಳರ ಟಾರ್ಗೆಟ್ ಆಗಿದೆ. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ವಿಜಯಲಕ್ಷ್ಮಿ ಎಂಬುವರ ಮನೆಗೆ ಮೂವರು ಮಾಸ್ಕ್ಧಾರಿ ಕಳ್ಳರು ನುಗ್ಗಿ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 70 ಸಾವಿರ ರೂಪಾಯಿ ನಗದು ದೋಚಿ ಎಸ್ಕೇಪ್ ಆಗಿದ್ದಾರೆ.
ಘಟನೆ ಜನವರಿ 17ರ ಬೆಳಗ್ಗೆ 1 ರಿಂದ 3 ಗಂಟೆಯ ನಡುವೆ ನಡೆದಿದೆ. ಮನೆಯ ಮುಖ್ಯ ಬಾಗಿಲಿನ ಲಾಕ್ ಮುರಿದು ಒಳಗೆ ನುಗ್ಗಿದ ಕಳ್ಳರು, ಬಿರು ಲಾಕರ್ ಮುರಿದು ಚಿನ್ನಾಭರಣಗಳನ್ನು ದೋಚಿದ್ದಾರೆ. ಮನೆಯ ಯಜಮಾನಿ ವಿಜಯಲಕ್ಷ್ಮಿ ಬಾಂಬೆಯಲ್ಲಿ ಸಂಬಂಧಿಕರ ಮನೆಯಲ್ಲಿದ್ದರು. ಕಳ್ಳರು 2-3 ದಿನಗಳಿಂದ ಮನೆಗೆ ಹೊಂಚು ಹಾಕುತ್ತಿದ್ದರು ಎಂದು ತಿಳಿದುಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮೂವರು ಕಳ್ಳರು ಒಂದೇ ಬೈಕ್ನಲ್ಲಿ ಬಂದಿರುವುದು, ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವುದು, ಕೈಯಲ್ಲಿ ಮಚ್ಚು ಲಾಂಗ್ ಮತ್ತು ಕಲ್ಲು ಹಿಡಿದುಕೊಂಡಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಕಳ್ಳರು ಈ ಬಡಾವಣೆಯಲ್ಲಿನ ಇನ್ನೊಂದು ಮನೆಯ ಬೈಕ್ ಕದ್ದುದಲ್ಲದೆ, ಪೊಲೀಸ್ ಬಡಾವಣೆಯ ಮುಂದಿನ ಎರಡು ಮನೆಗಳ ಕಿಟಕಿ ಮುರಿದು ಕಳ್ಳತನ ಮಾಡಲು ಯತ್ನಿಸಿದ್ದರು. ಆದರೆ ಅಲ್ಲಿ ಯಶಸ್ವಿಯಾಗಲಿಲ್ಲ.
ಪೊಲೀಸ್ ತನಿಖೆ ಆರಂಭ ಘಟನೆಯ ಬಗ್ಗೆ ಪಕ್ಕದ ಮನೆಯವರು ಬಾಂಬೆಯಲ್ಲಿದ್ದ ವಿಜಯಲಕ್ಷ್ಮಿಗೆ ಮಾಹಿತಿ ನೀಡಿದ ನಂತರ, ಅವರು ತಮ್ಮ ಸಹೋದರ ಚಂದ್ರಶೇಖರ್ ಅವರಿಗೆ ಮನೆ ಪರಿಶೀಲಿಸಲು ತಿಳಿಸಿದರು. ತುಂಗಾನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚುವರಿ ಎಸ್ಪಿ ಕಾರಿಯಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಕಳ್ಳರನ್ನು ಬಲೆಗೆ ಬೀಳಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾರ್ವಜನಿಕರಲ್ಲಿ ಆತಂಕ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಸಿಸುವ ಬಡಾವಣೆಗೆ ಕಳ್ಳರು ನುಗ್ಗಿರುವುದು ಸ್ಥಳೀಯರಲ್ಲಿ ದೊಡ್ಡ ಆತಂಕ ಸೃಷ್ಟಿಸಿದೆ. ಚಿನ್ನದ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕಳ್ಳತನದ ಸರಣಿ ಘಟನೆಗಳು ಹೆಚ್ಚಾಗುತ್ತಿರುವುದು ಗಮನಾರ್ಹ.
ಪೊಲೀಸರು ಕಳ್ಳರನ್ನು ಬೇಗ ಬಂಧಿಸಿ ಚಿನ್ನಾಭರಣ ವಶಪಡಿಸಿಕೊಳ್ಳಲು ತ್ವರಿತ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.





