ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಅರಬಿಳಚಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಭಯಾನಕ ದುರಂತ ಸಂಭವಿಸಿದೆ. ಒಂದೇ ಕುಟುಂಬದ ನಾಲ್ವರು ಜನರು ಬಟ್ಟೆ ತೊಳೆಯಲು ಭದ್ರಾ ನಾಲೆಗೆ ತೆರಳಿದ್ದ ಸಂದರ್ಭದಲ್ಲಿ ಕಾಲು ಜಾರಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ತಾಯಿ, ಮಗಳು, ಮಗ ಮತ್ತು ಅಳಿಯ ಸೇರಿದ್ದಾರೆ. ಸದ್ಯ ನಾಲ್ವರ ಶವಗಳು ಪತ್ತೆಯಾಗಿಲ್ಲ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ದುರಂತದ ವಿವರಗಳು ಅರಬಿಳಚಿ ಗ್ರಾಮದ ನೀಲಾಬಾಯಿ (50), ಅವರ ಮಗ ರವಿಕುಮಾರ್ (23), ಮಗಳು ಶ್ವೇತಾ (24) ಮತ್ತು ಅಳಿಯ ಪರಶುರಾಮ್ (28) ಈ ದುರ್ದೈವಿಗಳು. ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಎರಡು ಬೈಕ್ಗಳಲ್ಲಿ ಬಟ್ಟೆ ತೊಳೆಯಲು ಭದ್ರಾ ನಾಲೆಯತ್ತ ತೆರಳಿದ್ದರು. ತಾಯಿ ನೀಲಾಬಾಯಿ ಮತ್ತು ಮಗಳು ಶ್ವೇತಾ ಬಟ್ಟೆ ಒಗೆಯಲು ನಾಲೆಯ ದಡಕ್ಕೆ ಇಳಿದಾಗ ಕಾಲು ಜಾರಿ ನೀರಿನಲ್ಲಿ ಬಿದ್ದರು. ಇವರನ್ನು ರಕ್ಷಿಸಲು ಮಗ ರವಿಕುಮಾರ್ ಮತ್ತು ಅಳಿಯ ಪರಶುರಾಮ್ ನಾಲೆಗೆ ಧುಮುಕಿದರು. ಆದರೆ ನಾಲ್ವರೂ ನೀರಿನ ಒಳಗೆ ಮುಳುಗಿ ಹೋದರು. ಆ ಸಮಯದಲ್ಲಿ ಸ್ಥಳದಲ್ಲಿ ಯಾರೂ ಇರಲಿಲ್ಲ ಎನ್ನಲಾಗುತ್ತಿದೆ.
ಹಬ್ಬಕ್ಕಾಗಿ ತವರಿಗೆ ಬಂದಿದ್ದ ಮಗಳು ನೀಲಾಬಾಯಿ ಅವರ ಮಗಳು ಶ್ವೇತಾ ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಪರಶುರಾಮ್ ಅವರನ್ನು ಮದುವೆಯಾಗಿದ್ದರು. ಜನವರಿ 12 ರಿಂದ 16ರವರೆಗೆ ನಡೆದ ಮಾರಿಕಾಂಬ ಜಾತ್ರಾಮಹೋತ್ಸವಕ್ಕಾಗಿ ಶ್ವೇತಾ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ತವರಿಗೆ ಆಗಮಿಸಿದ್ದರು. ಮನೆಯಲ್ಲಿ ಹೆಚ್ಚು ಜನ ನೆಂಟರು ಆಗಮಿಸಿದ್ದರಿಂದ ಬಟ್ಟೆಗಳನ್ನು ತೊಳೆಯಲು ನಾಲೆಗೆ ತೆರಳಿದ್ದರು ಎನ್ನಲಾಗುತ್ತಿದೆ.
ಶೋಧ ಕಾರ್ಯ ಆರಂಭ ನಾಲೆಯ ದಡದಲ್ಲಿ ಬಟ್ಟೆಗಳು ಮತ್ತು ಎರಡು ಬೈಕ್ಗಳು ಬಿದ್ದಿರುವುದನ್ನು ಕಂಡ ಸ್ಥಳೀಯರು ಅನುಮಾನಗೊಂಡು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಬೈಕ್ ಸಂಖ್ಯೆಯ ಆಧಾರದಲ್ಲಿ ಕುಟುಂಬದ ವಿವರ ದೊರಕಿದ ನಂತರ ನಾಪತ್ತೆ ಪ್ರಕರಣ ದಾಖಲಿಸಲಾಯಿತು. ಅಗ್ನಿಶಾಮಕ ದಳದ ಸಹಾಯದೊಂದಿಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ನಾಲೆಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಶವಗಳ ಪತ್ತೆಗೆ ಸವಾಲಾಗಿದೆ.
ಈ ದುರಂತದಿಂದ ಗ್ರಾಮದಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ. ನಾಲ್ವರೂ ಶೀಘ್ರವಾಗಿ ಪತ್ತೆಯಾಗಬೇಕು ಎಂದು ಸ್ಥಳೀಯರು ಪ್ರಾರ್ಥಿಸುತ್ತಿದ್ದಾರೆ. ಭದ್ರಾ ನಾಲೆಯ ದಡದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆಯೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





