ರಾಜ್ಯದ ಎರಡು ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದ್ದು, ಒಂದೆಡೆ ಹೆರಿಗೆಗೂ ಮುನ್ನವೇ ಮಗು ಮೃತಪಟ್ಟಿದ್ದರೆ, ಮತ್ತೊಂದೆಡೆ ಶಸ್ತ್ರಚಿಕಿತ್ಸೆ ವೇಳೆ ಏಳು ವರ್ಷದ ಬಾಲಕ ಕೋಮಾಗೆ ಜಾರಿದ್ದಾನೆ. ಈ ಘಟನೆಗಳು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿವೆ.
ರಾಯಚೂರಿನಲ್ಲಿ ಹೆರಿಗೆಗೂ ಮುನ್ನವೇ ಮಗು ಸಾವು :
ರಾಯಚೂರು ಜಿಲ್ಲೆಯ ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಸ್ಕಿ ತಾಲೂಕಿನ ಪರಮ್ಮ ಎಂಬುವವರು ಹೆರಿಗೆಗಾಗಿ ದಾಖಲಾಗಿದ್ದರು. ಕುಟುಂಬಸ್ಥರ ಪ್ರಕಾರ, “ಸಹಜ ಹೆರಿಗೆಯಾಗದಿದ್ದರೆ ಸಿಜರಿಯನ್ ಮಾಡಿ” ಎಂದು ಮನವಿ ಮಾಡಿದ್ದರೂ ವೈದ್ಯರು ವಿಳಂಬ ಮಾಡಿದ್ದಾರೆ. ಇಂದು ಮುಂಜಾನೆ ಸಿಜರಿಯನ್ ಮಾಡಿದಾಗ ಮಗು ಮೃತಪಟ್ಟ ಸ್ಥಿತಿಯಲ್ಲಿತ್ತು. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು. ಆದರೆ, ಮಗುವಿನ ಹೃದಯ ಬಡಿತ ಕುಸಿದಿದ್ದರಿಂದ ಶಕ್ತಿ ಮೀರಿ ಪ್ರಯತ್ನಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಕಾವೇರಿ ಸ್ಪಷ್ಟನೆ ನೀಡಿದ್ದಾರೆ.
ಹಾವೇರಿಯಲ್ಲಿ ಆಪರೇಷನ್ ವೇಳೆ ಎಡವಟ್ಟು :
ಇತ್ತ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ 7 ವರ್ಷದ ಚಾಂದ್ಪೀರ್ ಸಾಬ್ ಎಂಬ ಬಾಲಕ, ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರ ಎಡವಟ್ಟಿನಿಂದ ಕೋಮಾಗೆ ಜಾರಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲಿಸಲಾಗಿದ್ದು, ಕುಟುಂಬಸ್ಥರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಂಗಾಲಾಗಿದ್ದಾರೆ. ಸಂಬಂಧಿತ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸದ್ಯ ಎರಡೂ ಜಿಲ್ಲೆಗಳಲ್ಲಿ ಈ ಕುರಿತು ಪೊಲೀಸ್ ದೂರು ಹಾಗೂ ಇಲಾಖಾ ತನಿಖೆಗೆ ಒತ್ತಾಯ ಕೇಳಿಬರುತ್ತಿದೆ.





