ಶ್ರೀರಂಗಪಟ್ಟಣದ ಹುಣಸನಹಳ್ಳಿಯ 27 ವರ್ಷದ ಪ್ರಥಮ ದರ್ಜೆ ಕಂಟ್ರಾಕ್ಟರ್ ಪವನ್ ಅವರ ಸಾವು ಅನುಮಾನಾಸ್ಪದವಾಗಿದ್ದು, ಕುಟುಂಬಸ್ಥರು ಮತ್ತು ಆಪ್ತರು ಇದನ್ನು ಕೊಲೆ ಎಂದು ಶಂಕಿಸುತ್ತಿದ್ದಾರೆ.
ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪವನ್ ಅವರ ಮೃತದೇಹವನ್ನು ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆ ಮಾಡಲಾಗಿದೆ. ದೇಹದಲ್ಲಿ ಗಾಯಗಳು ಕಂಡುಬಂದಿರುವುದರಿಂದ ಕೊಲೆಯ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಪವನ್ ಕೋಟ್ಯಾಂತರ ರೂಪಾಯಿ ಮೌಲ್ಯದ ವಿವಿಧ ಕಾಮಗಾರಿಗಳನ್ನು ನಡೆಸುತ್ತಿದ್ದರು. ಇಂತಹ ದೊಡ್ಡ ಮಟ್ಟದ ಕಾಮಗಾರಿ ನಡೆಸುತ್ತಿದ್ದ ವ್ಯಕ್ತಿಯ ದಿಢೀರ್ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಘಟನೆ ವಿವರ: ಏಪ್ರಿಲ್ 2ರಂದು ರಾತ್ರಿ “ಕೆಲಸ ಇದೆ, ಮನೆಗೆ ಬರುವುದಿಲ್ಲ” ಎಂದು ಹೇಳಿ ಪವನ್ ಮನೆಯಿಂದ ಹೊರಟು ಹೋಗಿದ್ದರು. ಎರಡು ದಿನಗಳ ಕಾಲ ಮನೆಗೆ ಬಾರದಿದ್ದ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸಾಮಾಜಿಕ ಜಾಲತಾಣ ಖಾತೆಗಳು ಡಿ-ಆಕ್ಟಿವೇಟ್ ಆಗಿದ್ದವು. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ತಕ್ಷಣವೇ ಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಿನ್ನೆ ಕಾವೇರಿ ನದಿಯಲ್ಲಿ ಪವನ್ ಅವರ ಮೃತದೇಹ ಪತ್ತೆಯಾಗಿದೆ. ದೇಹದಲ್ಲಿ ಗಾಯಗಳು ಇರುವುದನ್ನು ಗಮನಿಸಿ ಕುಟುಂಬಸ್ಥರು ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ.
ಪವನ್ ಅವರು ತಮ್ಮ ವೃತ್ತಿಯಲ್ಲಿ ಸಕ್ರಿಯರಾಗಿದ್ದು, ಹಲವು ದೊಡ್ಡ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಇಂತಹ ಯುವಕನ ದಿಢೀರ್ ಸಾವು ಸ್ಥಳೀಯರಲ್ಲಿ ಆಘಾತವನ್ನುಂಟು ಮಾಡಿದೆ.
ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿದ್ದು, ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಕೊಲೆಯ ಅಂಶಗಳಿದ್ದಲ್ಲಿ ತನಿಖೆಯನ್ನು ವಿಸ್ತರಿಸುವ ಸಾಧ್ಯತೆ ಇದೆ.





