ಕೆಂಪೇಗೌಡರ ಜಯಂತಿ ಪ್ರಯುಕ್ತ ಮೂರು ದಿನಗಳ ಕಾಲ ಬಂಡಿ ದೇವರ ಉತ್ಸವವನ್ನು ನಗರದಲ್ಲಿ ಕೈಗೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಬಂಡಿದೇವರ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ. ತಲಕಾಡು ಚಿಕ್ಕರಂಗೇಗೌಡರು ಹೇಳಿದರು.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದಾಗ ಮೊದಲಿಗೆ ಬಂಡಿದೇವರ ಉತ್ಸವ ಹಾಗೂ ಉಯ್ಯಾಲೆ ಉತ್ಸವ ಆರಂಭಿಸಿದ್ರು. ಕೆಂಪೇಗೌಡ್ರು ತಮ್ಮ ರಾಜ ಮನೆತನಕ್ಕೆ ಸಂಬಂಧಪಟ್ಟಂತೆ ಹಾಗೂ ಈ ಪ್ರಾಂತ್ಯದ ಮಣ್ಣಿನ ಮಕ್ಕಳಿಗೆ ಸಂಬಂಧಿಸಿದಂತೆ ಬಂಡಿದೇವರ ಉತ್ಸವ ಮತ್ತು ಯಲಹಂಕ ಸಂಸ್ಥಾನದವರಿಗೆ ಸಂಬಂಧಪಟ್ಟಂತೆ ಎಲ್ಲರೂ ಪಾಲ್ಗೊಳ್ಳಲಿ ಎನ್ನುವ ನಿಟ್ಟಿನಲ್ಲಿ ಉಯ್ಯಾಲೆ ಉತ್ಸವವನ್ನು ಪ್ರಾರಂಭಿಸಿದ್ರು. ಒಂದು ಅವರ ಜನಾಂಗಕ್ಕೆ ಮತ್ತೊಂದು ಅವರ ಪ್ರಜೆಗಳಿಗಾಗಿ ಈ ಉತ್ಸವಗಳನ್ನು ಪ್ರಾರಂಭಿಸ್ತಾರೆ ಎಂದು ಡಾ. ಚಿಕ್ಕರಂಗೇಗೌಡರು ಬಂಡಿದೇವರ ಉತ್ಸವದ ಹಿನ್ನೆಲೆಯನ್ನ ತಿಳಿಸಿದರು.
ಕಾಲಾನಂತರದಲ್ಲಿ ಅನೇಕ ರಾಜವಂಶಸ್ಥರು ಬೆಂಗಳೂರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಹೀಗಾಗಿ ಕೆಂಪೇಗೌಡರ ನಂತರ ಆಳಿದ ರಾಜಮನೆತನಗಳು ಅವರೆಲ್ಲರೂ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿದ್ದಂತಹ ಉತ್ಸವಗಳನ್ನು ನಿಲ್ಲಿಸಿದ್ರು. ಸಂಶೋಧನೆಗೆ ಇಳಿದಾಗ ಗೊತ್ತಾಗಿದ್ದು, ಕೆಂಪೇಗೌಡರ ಕಾಲದಲ್ಲಿ ಸಾಂಸ್ಕೃತಿಕವಾಗಿ ಜಾತ್ಯಾತೀತವಾಗಿ ಎರಡು ಅದ್ಭುತ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಹಾಗಾಗಿ ಈ ಕುರಿತು ನಾವು ಚರ್ಚಿಸಿದಾಗ ಮತ್ಯಾಕೆ ಆ ಆಚರಣೆಗಳನ್ನು ತರಬಾರದು ಎಂದು ಆಲೋಚಿಸಿ ನಾವೆಲ್ಲರೂ ಮರುಜೀವ ನೀಡಲು ಮುಂದಾಗಿದ್ದೇವೆ. ಕೆಂಪೇಗೌಡರ ಜಯಂತಿಯನ್ನು ರಾಜ್ಯ ಸರ್ಕಾರವು ಜೂನ್ 27 ರಂದು ಆಚರಿಸತ್ತಾ ಬಂದಿದೆ. ಅದಕ್ಕೆ ಪೂರಕವಾಗಿ ಜೂ. 25, 26ರಂದು ಬಂಡಿ ಉತ್ಸವ ಆಚರಣೆ ಮಾಡ್ತಿದ್ದೇವೆ ಎಂದು ತಿಳಿಸಿದರು.
ಉತ್ಸವದ ವಿವರ:
ಜೂನ್ 25ರಂದು ಬೆಳಿಗ್ಗೆ 9 ಗಂಟೆಗೆ ಸಿಹಿ ಹಂಚುವ/ ಸಿಹಿ ಮಾಡುವ ಹಬ್ಬವು ರಾಜ್ಯ ಒಕ್ಕಲಿಗರ ಸಂಘದ ಆವರಣದಲ್ಲಿ ನಡೆಯಲಿದೆ. ಒಕ್ಕಲಿಗ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳುತ್ತಿದ್ದು, ಇದನ್ನು ರಾಶಿ ಪೂಜೆ ಎಂದು ಕರೆಯಲಾಗುತ್ತದೆ. ಜೂನ್ 26ರಂದು ಸಂಜೆ 7 ಗಂಟೆಗೆ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿರುವ ಕೆಂಪೇಗೌಡರಿಗೆ ಗೌರವ ಸಲ್ಲಿಸುವ ಮೂಲಕ ಬಂಡಿದೇವರ ಉತ್ಸವ ಉದ್ಘಾಟನೆಯಾಗುತ್ತದೆ. ನಂತರ 12 ಎತ್ತಿನ ಗಾಡಿಗಳಲ್ಲಿ ದೀಪದ ಸಮೇತ ಧಾರ್ಮಿಕವಾಗಿ ಕೆಂಪೇಗೌಡರ ಪೂರ್ವಿಕ ದೇವರಾದ ಕೆಂಪಣ್ಣಸ್ವಾಮಿ ಹಾಗೂ ಶ್ರೀವೀರಣ್ಣಸ್ವಾಮಿ ಉತ್ಸವ ಮೂರ್ತಿಗಳೊಂದಿಗೆ ಬಿಬಿಎಂಪಿ ಕಚೇರಿ ಮುಂಭಾಗ ಇರುವ ಕೆಂಪೇಗೌಡರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಹಡ್ಸನ್ ವೃತ್ತ, ಕಬ್ಬನ್ ಪಾರ್ಕಿನ ಒಳ ಆವರಣದ ಕೇಂದ್ರ ಗ್ರಂಥಾಲಯ ಹಾಗೂ ಉಚ್ಚ ನ್ಯಾಯಾಲಯ ಕಟ್ಟಡಗಳ ಮಾರ್ಗವಾಗಿ ಗೋಪಾಲಗೌಡ ವೃತ್ತವನ್ನು ದಾಟಿ ವಿಧಾನಸೌಧದ ಕೆಂಪೇಗೌಡರ ಪ್ರತಿಮೆ ಬಳಿ ತಲುಪುತ್ತದೆ.
ನಂತರದಲ್ಲಿ ಗಣ್ಯರಿಂದ ಪ್ರತಿಮೆಗೆ ಆರತಿ ಪೂಜೆ ಸಲ್ಲಿಸಿ ಸಹಿ ಹಂಚುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳುವುದು. ಈ ಮೆರವಣಿಗೆಯಲ್ಲಿ ಗ್ರಾಮೀಣ ಸೊಗಡು ತೋರುವ ಜೊತೆಗೆ ಕೆಲವು ಜಾನಪದ ತಂಡಗಳೂ ಭಾಗವಹಿಸಲಿವೆ. ವಿಧಾನಸೌಧದ ಮುಂದೆ ನಡೆಯುವ ಪೂಜೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಒಳಗೊಂಡಂತೆ ಸ್ಪೀಕರ್ ಯು.ಟಿ ಖಾದರ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ನಾಡಿನ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಜೂನ್ 27ರಂದು ರಾಜ್ಯ ಸರ್ಕಾರವು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುತ್ತಿದೆ. ಈ ಪ್ರಯುಕ್ತ ಬಂಡಿ ದೇವರ ಉತ್ಸವ ಸಮಿತಿಯು ಕೂಡ ಆಚರಣೆಯಲ್ಲಿ ಭಾಗಿಯಾಗಲಿದೆ. ಸಮಿತಿಯು ಈ ವರ್ಷದಿಂದ ಉತ್ಸವವನ್ನು ವಿದ್ಯುಕ್ತವಾಗಿ ಪ್ರಾರಂಭಿಸುತ್ತಿದ್ದು, ಗತಪರಂಪರೆಯು ಇಂದಿನ ಯುವಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ವಿಜೃಂಭಣೆಯಿಂದ ಆಚರಿಸಲು ಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಬಂಡಿದೇವರ ಉತ್ಸವ ಸಮಿತಿಯ ಕಾರ್ಯದರ್ಶಿ ಎಂ. ಅಮರೇಶ್, ಸಮಿತಿಯ ಉಪಾಧ್ಯಕ್ಷರಾದ ನಾಗರಾಜ್ (ನಿವೃತ್ತ ಎಸ್ಪಿ), ಹಿರಿಯ ಉಪಾಧ್ಯಕ್ಷರಾದ ಗೋವಿಂದೇಗೌಡರು, ಕೆಂಪೇಗೌಡ ಸಂಶೋಧನಾ ಪರಿಷತ್ನ ಪ್ರಧಾನ ಕಾರ್ಯದರ್ಶಿಯಾದ ಜೆ. ನಾಗರಾಜ್, ಉಪಾಧ್ಯಕ್ಷರಾದ ಡಿ. ಮುನಿರಾಜು, ಮುಖೇಶ್, ಖಜಾಂಚಿ ಕೆ. ಮಧು, ರೂಪ ಸುರೇಶ್ ಎ.ಎನ್ ಮತ್ತು ಭಾರತಿ ಜಯರಾಮ ಅವರು ಉಪಸ್ಥಿತರಿದ್ದರು.