ಉಡುಪಿ: ಕರ್ನಾಟಕದಲ್ಲಿ ರಾಜಕೀಯ ಮಾತಾಡಬಾರದು ಎಂಬ ನಿಯಮ ಯಾವಾಗಿನಿಂದ ಜಾರಿಯಾಯಿತು ಎಂದು ಚಿಂತಕ ಹಾಗೂ ಯುವ ಬ್ರಿಗೇಡ್ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕುಂದಾಪುರ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಕುಂದಾಪುರದಲ್ಲಿ ಜೂನ್ 20, 21 ಮತ್ತು 22ರಂದು ‘ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಎಂಬ ವಿಷಯದ ಕುರಿತು ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಕುಂದಾಪುರ ಪೊಲೀಸರು, ರಾಜಕೀಯ ವಿಷಯಗಳ ಬಗ್ಗೆ ಮಾತನಾಡಬಾರದು ಹಾಗೂ ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂಬ ಷರತ್ತು ವಿಧಿಸಿ ಆಯೋಜಕರು ಮತ್ತು ಸೂಲಿಬೆಲೆಯವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಈ ನೋಟಿಸ್ಗೆ ಪ್ರತಿಕ್ರಿಯಿಸಿರುವ ಸೂಲಿಬೆಲೆ, ಇದು ತಮ್ಮನ್ನು ಅಘೋಷಿತವಾಗಿ ಗಡಿಪಾರು ಮಾಡುವ ಪ್ರಯತ್ನವೆಂದು ಆರೋಪಿಸಿದ್ದಾರೆ.
“ನನಗೆ ನೋಟಿಸ್ ಕೊಡುವುದು ಹೊಸತೇನಲ್ಲ, ಹಲವು ಕಡೆ ಇಂತಹ ನೋಟಿಸ್ಗಳನ್ನು ನೀಡಲಾಗಿದೆ. ಆದರೆ ಈ ಬಾರಿ ರಾಜಕೀಯ ಮಾತಾಡಬಾರದು, ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದು ಹೇಳಿದ್ದಾರೆ. ಇದರರ್ಥ ನೆಹರು, ಇಂದಿರಾ, ರಾಜೀವ್ ಗಾಂಧಿಯವರ ಕುರಿತು ಮಾತನಾಡಬಾರದೆಂದೇ? ಅಥವಾ ಘಜ್ನಿ, ಘೋರಿ, ಔರಂಗಜೇಬರಂತಹ ಕ್ರೂರರ ತೇಜೋವಧೆ ಮಾಡಬಾರದೆಂದೇ? ಕರ್ನಾಟಕದಲ್ಲಿ ರಾಜಕೀಯ ಮಾತನಾಡಬಾರದೆಂಬ ಕಾನೂನು ಯಾವಾಗಿನಿಂದ ಜಾರಿಯಾಯಿತು? ಕುಂದಾಪುರ ಪೊಲೀಸರೇ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರೆ ಒಳ್ಳೆಯದು. ನಾನು ಕುಂದಾಪುರಕ್ಕೆ ಬರಬಾರದೆಂದು ತಡೆಯಲು ಯತ್ನಿಸುವವರು ದಯವಿಟ್ಟು ಕಾರ್ಯಕ್ರಮಕ್ಕೆ ಬಂದು ನೋಡಿ,” ಎಂದು ಚಕ್ರವರ್ತಿ ಸೂಲಿಬೆಲೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ಆಯೋಜಕ ನಿರಂಜನ್ ಶೆಟ್ಟಿ ಮಾತನಾಡಿ, “ಎನ್ಎಸ್ಯುಐ (ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ) ಸದಸ್ಯರು ಚಕ್ರವರ್ತಿ ಸೂಲಿಬೆಲೆಯವರು ಕುಂದಾಪುರಕ್ಕೆ ಬರಬಾರದೆಂದು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಅವರಿಗೆ ಭಾಷಣ ಮಾಡಲು ಅವಕಾಶ ನೀಡಬಾರದೆಂದು ಒತ್ತಾಯಿಸಿದ್ದಾರೆ. ‘ಅಖಂಡ ಭಾರತ’ದ ಬಗ್ಗೆ ಉಪನ್ಯಾಸ ನೀಡುವಾಗ ಕಾಶ್ಮೀರದ ವಿಷಯವು ತಪ್ಪದೇ ಬರುತ್ತದೆ. ಕಾಶ್ಮೀರದ ಸಮಸ್ಯೆ ಕಾಂಗ್ರೆಸ್ ಆಡಳಿತದ ಕಾಲದಲ್ಲಿ ತೀವ್ರವಾಗಿತ್ತು. ಈ ಸತ್ಯವನ್ನು ಜನರಿಗೆ ತಿಳಿಯಬಾರದೆಂಬ ಉದ್ದೇಶದಿಂದ ಕಾಂಗ್ರೆಸ್ ಈ ಕಾರ್ಯಕ್ರಮವನ್ನು ತಡೆಯಲು ಪ್ರಯತ್ನಿಸುತ್ತಿದೆ. ಆದರೆ, ಎಷ್ಟೇ ತಡೆಯಲು ಯತ್ನಿಸಿದರೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತೇವೆ,” ಎಂದು ಎಚ್ಚರಿಕೆ ನೀಡಿದ್ದಾರೆ.