ಆರ್ ಆರ್ ಫಿಲಂಸ್ ಲಾಂಛನದಲ್ಲಿ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ, ಚಂದ್ರಶೇಖರ್ ಬಂಡಿಯಪ್ಪ ಅವರ ನಿರ್ದೇಶನದಲ್ಲಿ ಶಾನ್ ಹಾಗೂ ಸಾನ್ಯ ಅಯ್ಯರ್ ನಾಯಕ – ನಾಯಕಿಯಾಗಿ ನಟಿಸುತ್ತಿರುವ “ವಿಷ್ಣುವಲ್ಲಭ” ಚಿತ್ರದ ಮುಹೂರ್ತ ಸಮಾರಂಭ ಶ್ರೀಕೃಷ್ಣ ಜನ್ಮಾಷ್ಟಮಿ ಶುಭದಿನದಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಸಚಿವರಾದ ಜಮೀರ್ ಅಹಮದ್ ಖಾನ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಕೆ.ಮಂಜು ಕ್ಯಾಮೆರಾ ಚಾಲನೆ ಮಾಡಿದರು. ಹಿರಿಯ ನಿರ್ಮಾಪಕ ರೆಹಮಾನ್ ಮುಂತಾದವರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿಷ್ಣುವರ್ಧನ್ ಅಭಿನಯದ “ಯಜಮಾನ”, ಸುದೀಪ್ ಅಭಿನಯದ “ಹುಚ್ಚ” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ರೆಹಮಾನ್ ಅವರ ಪುತ್ರಿ ರುಹಿನಾ ರೆಹಮಾನ್. ಈ ಹಿಂದೆ ಗಣೇಶ್ ಅಭಿನಯದ “ಮದುವೆಮನೆ” ಚಿತ್ರವನ್ನು ನಿರ್ಮಿಸಿದ್ದ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ ಎರಡನೇ ಚಿತ್ರವಿದು. ಇದೊಂದು ಪ್ರೇಮಕಥಾನಕವಾಗಿದ್ದು, ರುಹಿನಾ ಅವರೆ ಕಥೆ ಬರೆದಿದ್ದಾರೆ.
ಕ್ರಿಯೇಟಿವ್ ಹೆಡ್ ಅಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. “ರಥಾವರ” ಚಿತ್ರದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನವಿರುವ “ವಿಷ್ಣುವಲ್ಲಭ” ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ.
ಶಾನ್ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದು, ಇದು ಅವರಿಗೆ ಮೊದಲ ಚಿತ್ರ. ನಟನೆಗೆ ಬೇಕಾದ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. “ಪುಟ್ಟಗೌರಿ ಮದುವೆ” ಖ್ಯಾತಿಯ ಸಾನ್ಯ ಅಯ್ಯರ್ ಈ ಚಿತ್ರದ ನಾಯಕಿ. “ಕೆ.ಜಿ.ಎಫ್” ಅವಿನಾಶ್, ಸಂಪತ್, ಸಂಗೀತ, ಸ್ವಾತಿ, ಯಶ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮುಂದಿನವಾರದಿಂದ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಆನಂತರ ಶ್ರೀಲಂಕಾ ಮುಂತಾದ ಕಡೆ ಚಿತ್ರೀಕರಣವಾಗಲಿದೆ.





