ಖ್ಯಾತ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ ಜಯಮ್ಮ ಅವರು ಇಂದು (ಜೂನ್ 16) ನಿಧನರಾಗಿದ್ದಾರೆ. ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಅವರ ಪತ್ನಿಯಾಗಿದ್ದ ಜಯಮ್ಮ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ.
ಜಯಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಅನೇಕ ಗಣ್ಯರು, ಸ್ನೇಹಿತರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅವರು ಕೇವಲ ಸ್ಟಾರ್ ಕುಟುಂಬದ ಸದಸ್ಯೆಯಾಗಿರದೆ, ತಮ್ಮ ಕುಟುಂಬದ ಯಶಸ್ಸಿನ ಹಿಂದೆ ನಿಂತ ಶಕ್ತಿಯಾಗಿದ್ದರು. ಪತಿ ಚಿನ್ನೇಗೌಡರು ನಿರ್ಮಾಪಕರಾಗಿ ಹೆಸರು ಗಳಿಸಲು ಮತ್ತು ಪುತ್ರರಾದ ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಚಿತ್ರರಂಗದಲ್ಲಿ ಯಶಸ್ಸು ಸಾಧಿಸಲು ಅವರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ನೈತಿಕ ಬೆಂಬಲ ಮಹತ್ವದ ಪಾತ್ರ ವಹಿಸಿತ್ತು.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ವಿಜಯ್ ರಾಘವೇಂದ್ರ, ‘ಚಿನ್ನಾರಿ ಮುತ್ತ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ನಂತರ ಹಲವು ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡರು. ನಟನಾಗಿ ಮಾತ್ರವಲ್ಲದೆ, ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯೂ ಅವರು ಜನಪ್ರಿಯತೆ ಗಳಿಸಿದ್ದಾರೆ.
ಇನ್ನೊಂದೆಡೆ, ‘ಚಂದ್ರ ಚಕೋರಿ’ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡ ಶ್ರೀಮುರಳಿ, ‘ಉಗ್ರಂ’ ಚಿತ್ರದ ಮೂಲಕ ಹೊಸ ಇಮೇಜ್ ಪಡೆದು ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್ ಹೀರೊ ಆಗಿ ಮಿಂಚಿದರು. ನಂತರ ಹಲವು ಯಶಸ್ವಿ ಸಿನಿಮಾಗಳ ಮೂಲಕ ‘ರೋರಿಂಗ್ ಸ್ಟಾರ್’ ಎಂಬ ಹೆಸರನ್ನು ಸಂಪಾದಿಸಿದರು.
ಈ ಇಬ್ಬರು ನಟರ ಯಶಸ್ಸಿನ ಪಯಣದಲ್ಲಿ ಜಯಮ್ಮ ಅವರ ಪ್ರೋತ್ಸಾಹ ಮತ್ತು ಬೆಂಬಲ ಸದಾ ಜೊತೆಗಿತ್ತು. ಕುಟುಂಬದ ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಸಾಗಿಸಿದ ಅವರು, ತೆರೆಮರೆಯಲ್ಲಿದ್ದರೂ ಕುಟುಂಬದ ಭದ್ರ ಆಧಾರಸ್ತಂಭವಾಗಿದ್ದರು.
ರಾಜ್ಕುಮಾರ್ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಚಿನ್ನೇಗೌಡರ ಕುಟುಂಬಕ್ಕೆ ಜಯಮ್ಮ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಚಿತ್ರರಂಗ ಹಾಗೂ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.




