ರಗಡ್ ಆಕ್ಷನ್, ಪಕ್ಕಾ ಮಾಸ್ ಅಟಿಟ್ಯೂಡ್ನಿಂದಲೇ ಬೊಂಬಾಟ್ ಹವಾ ಸೃಷ್ಟಿಸ್ತಿದ್ದ ಟಾಲಿವುಡ್ ‘ರೌಡಿ ಬಾಯ್’ ವಿಜಯ್ ದೇವರಕೊಂಡ ಈಗ ದಿಢೀರ್ ಅಂತ ಸಾಕ್ಷಾತ್ ಆ ಶ್ರೀಕೃಷ್ಣ ಪರಮಾತ್ಮನಿಗೆ ಶರಣಾಗಿದ್ದಾರೆ. ಹೌದು, ಕೈಯಲ್ಲಿ ರಕ್ತಸಿಕ್ತ ಕತ್ತಿ ಹಿಡಿತಿದ್ದ ರೌಡಿ ಬಾಯ್, ಈಗ ಕೈಯಲ್ಲಿ ಕೊಳಲು ಹಿಡಿದು ದೈವಿಕ ಅವತಾರ ತಾಳೋಕೆ ರೆಡಿಯಾಗಿದ್ದಾರೆ. ಅಂದಹಾಗೆ ರಾಮ್ ಚರಣ್ಗೆ ಸಿಗಬೇಕಿದ್ದ ಚಾನ್ಸ್ ವಿಜಯ್ ದೇವರಕೊಂಡ ಗೆ ಸಿಕ್ಕಿದ್ದು ಹೇಗೆ..? ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..
- ರೌಡಿ ಬಾಯ್ಗೆ ದೈವಿಕ ಟಚ್..ಕೈಯಲ್ಲಿ ಕೊಳಲು ಹಿಡಿದ ವಿಜಯ್..!
- 150ಕೋಟಿ ಗಳಿಸಿದ ಗುಜರಾತಿ ಫಿಲ್ಮ್.. ‘ಲಾಲೋ ಕೃಷ್ಣ’ನಾಗಿ ದೇವರಕೊಂಡ
- ರಾಮ್ ಚರಣ್ ಬದಲು ವಿಜಯ್.. ‘ಲಾಲೋ’ಗೆ ದೇವರಕೊಂಡ ಎಂಟ್ರಿ
- ಗುಜರಾತ್ನಲ್ಲಿ ಹವಾ ಸೃಷ್ಟಿಸಿದ್ದ ‘ಲಾಲೋ’.. ಈಗ ತೆಲುಗಿನಲ್ಲಿ..!
ಚಿತ್ರರಂಗ ಅಂದಮೇಲೆ ರೋಮಾಂಚನಕಾರಿ ಟ್ವಿಸ್ಟ್ಗಳಿಗೆ ಕೊರತೆಯೇ ಇಲ್ಲ. ಆರಂಭದಲ್ಲಿ ಈ ಸೂಪರ್ ಹಿಟ್ ಕಥೆಯಲ್ಲಿ ಸಾಕ್ಷಾತ್ ಶ್ರೀಕೃಷ್ಣನಾಗಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಬಣ್ಣ ಹಚ್ಚಲಿದ್ದಾರೆ ಅಂತಾನೇ ಮಾತುಕತೆ ಜೋರಾಗಿತ್ತು. ಆದರೆ, ವರದಿಗಳ ಪ್ರಕಾರ, ಲಾಸ್ಟ್ ಮಿನಿಟ್ ನಲ್ಲಿ ಆ ಜ್ಯಾಕ್ಪಾಟ್ ಹೊಡೆದಿರೋದು ಬೇರೆ ಯಾರೂ ಅಲ್ಲ, ರೌಡಿ ಬಾಯ್ ವಿಜಯ್ ದೇವರಕೊಂಡಗೆ. ಈ ಬಿಗ್ ಪ್ರಾಜೆಕ್ಟ್ನ ಹಕ್ಕನ್ನು ಟಾಲಿವುಡ್ನ ಬ್ರ್ಯಾಂಡ್ ನಿರ್ಮಾಪಕ ದಿಲ್ ರಾಜು ಪಡೆದುಕೊಂಡಿದ್ದು, ದೊಡ್ಡ ಮಟ್ಟದಲ್ಲೇ ತೆರೆಗೆ ತರಲು ಪ್ಲಾನ್ ಮಾಡಿದ್ದಾರೆ. ರಾಮ್ ಚರಣ್ ರೇಸ್ನಿಂದ ಔಟ್ ಆಗಿ, ರೌಡಿ ಬಾಯ್ ಎಂಟ್ರಿ ಕೊಟ್ಟಿರೋದು ಟಾಲಿವುಡ್ನಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಅಷ್ಟಕ್ಕೂ ಈ ‘ಲಾಲೋ’ ಕಥೆಯಲ್ಲಿ ಅಂತದ್ದೇನಿದೆ ಅನ್ನೋ ಕುತೂಹಲ ನಿಮಗಿದ್ದರೆ, ಕೇಳಿ. ಒಬ್ಬ ಸಾಮಾನ್ಯ ಆಟೋ ಚಾಲಕ ಕಷ್ಟದ ಸುಳಿಯಲ್ಲಿ ಸಿಲುಕಿ, ಅನಿವಾರ್ಯವಾಗಿ ಒಂದು ದೊಡ್ಡ ಬಂಗಲೆಗೆ ಕಳ್ಳತನ ಮಾಡಲು ಹೋಗುತ್ತಾನೆ. ಆದರೆ ಅಲ್ಲಿಗೆ ಹೋದವನು ಹೊರಗೆ ಬರಲಾಗದೆ ನಿರ್ಜನ ಮನೆಯಲ್ಲಿ ಸಿಕ್ಕಿಬಿದ್ದು ನರಕಯಾತನೆ ಅನುಭವಿಸುತ್ತಾನೆ. ಅಂತಹ ಆಪತ್ತಿನ ಸಮಯದಲ್ಲಿ ಅವನಿಗೆ ನೆರವಾಗಲು ಒಬ್ಬ ವಿಚಿತ್ರ ಅಪರಿಚಿತ ವ್ಯಕ್ತಿ ಬರ್ತಾನೆ. ಆ ವ್ಯಕ್ತಿಯೇ ಸಾಕ್ಷಾತ್ ಶ್ರೀಕೃಷ್ಣ. ಥ್ರಿಲ್ಲರ್ ಜತೆಗೆ ಭಕ್ತಿ ಮತ್ತು ಎಮೋಷನ್ ಸಮ್ಮಿಶ್ರಣದ ಈ ವಿಭಿನ್ನ ಕಥಾವಸ್ತು ಪ್ರೇಕ್ಷಕರ ಎದೆಯಾಳಕ್ಕೆ ಇಳಿದು ಸೂಪರ್ ಡೂಪರ್ ಹಿಟ್ ಆಗಿದೆ.
ಅಂಕಿತ್ ಸಖಿಯಾ ನಿರ್ದೇಶನ ಮಾಡಿದ್ದ ಮೂಲ ಗುಜರಾತಿ ಸಿನಿಮಾದಲ್ಲಿ ಕರಣ್ ಜೋಶಿ ಮತ್ತು ಶ್ರುಹದ್ ಗೋಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಯಾವುದೇ ಅದ್ದೂರಿ ತಾರಾಗಣವಿಲ್ಲದೆ, ತೀರ ಕಡಿಮೆ ಬಜೆಟ್ನಲ್ಲಿ ಮೂಡಿಬಂದ ಈ ಚಿತ್ರ ಬಿಡುಗಡೆಯಾದಾಗ ಯಾರೂ ಕಣ್ಣೆತ್ತಿಯೂ ನೋಡಿರಲಿಲ್ಲ. ಆದರೆ, ಜನರ ಬಾಯಿಂದ ಬಾಯಿಗೆ ಹಬ್ಬಿದ ‘ವರ್ಡ್ ಆಫ್ ಮೌತ್’ ಪ್ರಚಾರದಿಂದಾಗಿ, ನಾಲ್ಕನೇ ವಾರಕ್ಕೆ ಥಿಯೇಟರ್ಗಳು ಹೌಸ್ಫುಲ್ ಆಗಿ, ಗಲ್ಲಾಪೆಟ್ಟಿಗೆಯಲ್ಲಿ ಬರೊಬ್ಬರಿ 100 ಕೋಟಿಗೂ ಅಧಿಕ ಗಳಿಕೆ ಕಂಡು ಐತಿಹಾಸಿಕ ದಾಖಲೆ ಬರೆಯಿತು. ಈಗ ಇದೇ ಮ್ಯಾಜಿಕ್ ಅನ್ನು ತೆಲುಗು ಬೆಳ್ಳಿತೆರೆಯಲ್ಲೂ ಮರುಸೃಷ್ಟಿಸಲು ಚಿತ್ರತಂಡ ಸಜ್ಜಾಗಿದೆ.
ಇಷ್ಟು ದಿನ ಸಾಲು ಸಾಲು ಮಾಸ್ ಆಕ್ಷನ್ ಸಿನಿಮಾಗಳಲ್ಲೇ ನಿರತರಾಗಿದ್ದ ವಿಜಯ್ ದೇವರಕೊಂಡಗೆ ಈ ಕೃಷ್ಣನ ಪಾತ್ರ ವೃತ್ತಿಜೀವನದಲ್ಲೇ ಒಂದು ಮೈಲಿಗಲ್ಲು ಎನ್ನಬಹುದು. ಈಗಾಗಲೇ ರಶ್ಮಿಕಾ ಮಂದಣ್ಣ ಜತೆಗಿನ ‘ರಣಬಾಲಿ’, ಕೀರ್ತಿ ಸುರೇಶ್ ಜೊತೆಗಿನ ರೌಡಿ ಜನಾರ್ದನ ಮತ್ತು ಶೌರ್ಯುವ್ ನಿರ್ದೇಶನದ ಮಾಸ್ ಆಕ್ಷನ್ ಸಿನಿಮಾಗಳ ಲೈನ್ಅಪ್ ವಿಜಯ್ ಕೈಯಲ್ಲಿದೆ. ಇದರ ನಡುವೆ ಈ ಭಕ್ತಿಪ್ರಧಾನ ‘ಲಾಲೋ’ ರಿಮೇಕ್ ಸೇರ್ಪಡೆಯಾಗಿರುವುದು ಅಭಿಮಾನಿಗಳಿಗೆ ನಿಜಕ್ಕೂ ಹಬ್ಬದೂಟ ಸಿಕ್ಕಂತಾಗಿದೆ.
ಯಾವಾಗಲೂ ಹ್ಯಾಂಡ್ಸಮ್ ಲುಕ್, ರಗಡ್ ಆಟಿಟ್ಯೂಡ್ ಮತ್ತು ಫೈಟಿಂಗ್ ನೋಡಿದ್ದ ಫ್ಯಾನ್ಸ್ಗೆ, ವಿಜಯ್ ದೇವರಕೊಂಡ ಸಾಕ್ಷಾತ್ ಕೃಷ್ಣನಾಗಿ ಕಿರೀಟ ತೊಟ್ಟು, ನವಿಲುಗರಿ ಮುಡಿದು ಪ್ರತ್ಯಕ್ಷವಾಗುತ್ತಿರುವುದು ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಗುಜರಾತ್ನಲ್ಲಿ ಕ್ರಾಂತಿ ಸೃಷ್ಟಿಸಿದ ಲಾಲೋ ತರವೇ, ಟಾಲಿವುಡ್ನಲ್ಲೂ ಈ ವಿಭಿನ್ನ ಪ್ರಯೋಗ ಸಕ್ಸಸ್ ಕಾಣುತ್ತಾ..? ದಿಲ್ ರಾಜು-ವಿಜಯ್ ದೇವರಕೊಂಡ ಕಾಂಬಿನೇಷನ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಾ? ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





