ಉತ್ತರ ಕರ್ನಾಟಕದ ಭಾರಿ ದೊಡ್ಡ ಪಿಚ್ಚರ್ ಎನ್ನುವ ಟ್ಯಾಗ್ ಲೈನ್ ಮೂಲಕ ಹೊರಬಂದ ಅಪ್ಪಟ ಉತ್ತರ ಕರ್ನಾಟಕದ ಉಡಾಳ ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದ ಸಂಭ್ರಮವನ್ನು ಚಿತ್ರತಂಡ ಹಂಚಿಕೊಂಡಿದೆ.
ಈ ಹಿಂದೆ ಪದವಿ ಪೂರ್ವ ಚಿತ್ರವನ್ನು ನಿರ್ಮಿಸಿ ಯಶಸ್ಸು ಕಂಡಿದ್ದ ದಾವಣಗೆರೆ ಮೂಲದ ರವಿ ಶಾಮನೂರು ಮತ್ತು ಯೋಗರಾಜ್ ಭಟ್ ಉಡಾಳ ಚಿತ್ರವನ್ನು ನಿರ್ಮಿಸಿ ಮತ್ತೊಮ್ಮೆ ಯಶಸ್ವಿ ಕಂಡಿದ್ದಾರೆ,
ನಾಯಕನಾಗಿ ಪೃಥ್ವಿ ಶಾಮನೂರು ತಮ್ಮ ನಟನೆ ನೃತ್ಯ ಸಾಹಸ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದು ಚಿತ್ರರಂಗದ ಭರವಸೆಯ ನಾಯಕ ನಟನಾಗಿ ಹೊರಹೊಮ್ಮಿ ಜೊತೆಗೆ ಚಿತ್ರದ ಯಶಸ್ಸಿನಿಂದ ಮುಂದಿನ ಚಿತ್ರಗಳ ಕಥೆಗಳ ಆಯ್ಕೆಯಲ್ಲಿ ಬಿಜಿಯಾಗಿದ್ದಾರೆ.
ಇನ್ನು ನಿರ್ದೇಶಕ ಅಮೋಲ್ ಪಾಟೀಲ್ ಅವರಿಗೆ ಮೊದಲನೇ ನಿರ್ದೇಶನದ ಚಿತ್ರವಾಗಿದ್ದು ಮೊದಲ ಚಿತ್ರದಲ್ಲೇ ಯಶಸ್ವಿ ಕಂಡು ತಮ್ಮ ಕೆಲಸಕ್ಕೆ ಚಿತ್ರರಂಗದಲ್ಲಿ ಉತ್ತಮ ಪ್ರಶಂಸೆ ಪಡೆದುಕೊಂಡು ಭರವಸೆಯ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ.
ಇನ್ನು ಬಹುಪಾಲು ಉತ್ತರ ಕರ್ನಾಟಕದ ಕಲಾವಿದರು ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡಿದ್ದು ಇನ್ನೊಂದು ವಿಶೇಷ, ಅಮೋಲ್ ಪಾಟೀಲ್ ಮತ್ತು ವೀರೇಶ್ ಪಿಎಂ ಚಿತ್ರಕಥೆ ಸಂಭಾಷಣೆ ಬರೆದಿದ್ದು ಚಿತ್ರಕ್ಕೆ ನಾಯಕಿಯಾಗಿ ಹೃತಿಕ ಶ್ರೀನಿವಾಸ್ ನಟಿಸಿದ್ದಾರೆ, ಸಹ ಮತ್ತು ಪೋಷಕ ಕಲಾವಿದರಾಗಿ ಬಿರಾದರ್ ಬಲರಾಜ್ವಾಡಿ ಹರೀಶ್ ಹಿರಿಯೂರ್ ಪ್ರವೀಣ್ ಕುಮಾರ್ ಗಸ್ತಿ ದಯಾನಂದ್ ಬೀಳಗಿ ಮಾಳು ನಿಪ್ಪನಾಳ ರೇಣುಗೋಪಿ ಗೋವಿಂದೇಗೌಡ ಶಿಲ್ಪಾ ಶಾಂತಕುಮಾರ್
ಸದಾನಂದ ವಾದಿರಾಜ್ ಸುಮಿತ್ ದಾನಪ್ಪ ಮುಂತಾದ ಕಲಾವಿದರು ನಟಿಸಿದ್ದಾರೆ.
ಚೇತನ್ ಸೊಸ್ಕ ಅವರ ಅದ್ಭುತ ಸಂಗೀತ ಯೋಗರಾಜ್ ಭಟ್ ಅವರ ಸಾಹಿತ್ಯ ಮಧು ತುಂಬಕೆರೆ ಸಂಕಲನ ಶಿವಕುಮಾರ್ ನೂರಂಬಡ ಛಾಯಾಗ್ರಹಣ ಭಜರಂಗಿ ಮೋಹನ್ ರಘು ಅವರ ನೃತ್ಯ ಸಂಯೋಜನೆ ವಿನೋದ್ ಮತ್ತು ಅರ್ಜುನ್ ಅವರ ಸಾಹಸ ಈ ಚಿತ್ರಕ್ಕಿದೆ, ಮಾಳು ನಿಪ್ಪನಾಳ ಬಾಳು ಬೆಳಗುಂದಿ ಜೆಸ್ಕರಣ್ ಸಿಂಗ್ ಚೇತನ್ ಸೊಸ್ಕ ಕರಿಬಸವ ಸೃಷ್ಟಿ ಶಾಮನೂರು ಚಿತ್ರಕ್ಕೆ ಹಾಡಿದ್ದಾರೆ. ಉಡಾಳ ಚಿತ್ರ 25 ದಿನಗಳನ್ನು ಪೂರೈಸಿ ಯಶಸ್ಸಿನ ಹಾದಿಯನ್ನು ಮುಂದುವರೆಸಿದೆ.
ಟ್ರೆಂಡಿಂಗ್ ನಲ್ಲಿ ʼಉಡಾಳʼನ ಹೊಡಿ ಶ್ಯಾವಿಗ್ಯಾಗ ಮಜ್ಗಿ ಹಾಡು..!
ಬೆಂಗಳೂರು, ಅಕ್ಟೋಬರ್ 26: ಕನ್ನಡ ಚಿತ್ರರಂಗದಲ್ಲಿ ಈಗ ಟ್ರೆಂಡಿಂಗ್ ಆಗಿರುವ ಒಂದೇ ಒಂದು ಹಾಡು – “ಹೊಡಿ ಶ್ಯಾವಿಗ್ಯಾಗ ಮಜ್ಗಿ”! ಕರುನಾಡಿನ ಯುವಕ-ಯುವತಿಯರ ಬಾಯಲ್ಲಿ ಗುನುಗುತ್ತಿರುವ ಈ ಸಾಂಗ್, ಯೋಗರಾಜ್ ಭಟ್ ಮತ್ತು ರವಿ ಶಾಮನೂರು ಅವರ “ಉಡಾಳ” ಚಿತ್ರದ ಮೊದಲ ಹಾಡು. ಈಗಾಗಲೇ ಸೋಷಿಯಲ್ ಮೀಡಿಯಾ ರೀಲ್ಸ್ಗಳಲ್ಲಿ ವೈರಲ್ ಆಗಿ, ಜಿಯೋ ಸಾವನ್ ಚಾರ್ಟ್ನಲ್ಲಿ ಭಾರತದಾದ್ಯಂತ 2ನೇ ಸ್ಥಾನ ಪಡೆದುಕೊಂಡಿದೆ.
ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಉಡಾಳ” ಚಿತ್ರವನ್ನು ಅಮೋಲ್ ಪಾಟೀಲ್ ನಿರ್ದೇಶಿಸಿದ್ದಾರೆ. “ಪದವಿ ಪೂರ್ವ” ಚಿತ್ರದ ಮೂಲಕ ಖ್ಯಾತಿ ಪಡೆದ ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿದ್ದು, ಇದು ಅವರ ಎರಡನೇ ಚಿತ್ರ. ದಾವಣಗೆರೆಯ ರವಿ ಶಾಮನೂರು ಮತ್ತು ಯೋಗರಾಜ್ ಭಟ್ ಅವರ ಸಂಯೋಜನೆಯಲ್ಲಿ ರೂಪುಗೊಂಡ ಈ ಚಿತ್ರ, ಗ್ರಾಮೀಣ ಕಥಾಹಿನ್ನೆಲೆಯಲ್ಲಿ ಯುವ ಪ್ರೇಮ ಮತ್ತು ಸ್ನೇಹದ ಕಥೆಯನ್ನು ಒಳಗೊಂಡಿದೆ. ನವೆಂಬರ್ 14 ರಂದು ಈ ಚಿತ್ರ ತೆರೆಕಾಣಲಿದೆ.
ಈ ಹಾಡನ್ನು ಯೋಗರಾಜ್ ಭಟ್ ಅವರೇ ಬರೆದಿದ್ದು, ಚೇತನ್ ಡ್ಯಾವಿ ಸಂಗೀತ ನೀಡಿದ್ದಾರೆ. ಹಾಡಿಗೆ ಧ್ವನಿ ನೀಡಿದ್ದಾರೆ ಮಾಳು ನಿಪ್ನಾಳ್ ಮತ್ತು ಸೃಷ್ಟಿ ಶಾಮನೂರು. “ಸರಿಗಮ” ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾದ ಕ್ಷಣದಿಂದಲೇ ಈ ಹಾಡು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಹೊಡಿ ಶ್ಯಾವಿಗ್ಯಾಗ ಮಜ್ಗಿ… ಮಳೆ ಬಂದಾಗ ನೆನಪಾಗೋದು ನಿನ್ನ ಗುಡ್ಡದ ಮೇಲಿನ ಮಜ್ಗಿ…ಈ ಸಾಲುಗಳು ಕನ್ನಡಿಗರ ಹೃದಯಕ್ಕೆ ನೇರವಾಗಿ ತಾಗಿವೆ. ಗ್ರಾಮೀಣ ಕನ್ನಡದ ಸೊಗಸು, ಮಳೆಯ ಸೌಂದರ್ಯ, ಪ್ರೇಮದ ಮಧುರತೆ. ಎಲ್ಲವನ್ನೂ ಒಳಗೊಂಡ ಈ ಹಾಡು, ಕನ್ನಡ ಸಂಗೀತ ಪ್ರಿಯರನ್ನು ರಂಜಿಸಿದೆ. ಇನ್ಸ್ಟಾಗ್ರಾಮ್, ಟಿಕ್ಟಾಕ್, ಯೂಟ್ಯೂಬ್ ಶಾರ್ಟ್ಸ್ಗಳಲ್ಲಿ ರೀಲ್ಸ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯುವ ಜೋಡಿಗಳು, ಕಾಲೇಜು ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದ ಯುವಕರು ಎಲ್ಲರೂ ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ.
ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಜಿಯೋ ಸಾವನ್ ಚಾನಲ್ನಲ್ಲಿ ಭಾರತದಾದ್ಯಂತ 2ನೇ ಸ್ಥಾನ ಪಡೆದಿದೆ. ಇದು ಕನ್ನಡ ಚಿತ್ರಗೀತೆಗೆ ದೊಡ್ಡ ಸಾಧನೆ. ಹಿಂದಿ, ತಮಿಳು, ತೆಲುಗು ಹಾಡುಗಳ ನಡುವೆ ಕನ್ನಡ ಹಾಡು ಈ ಸ್ಥಾನ ಪಡೆದಿರುವುದು ಯೋಗರಾಜ್ ಭಟ್ ಅವರ ಸಾಹಿತ್ಯ ಮತ್ತು ಚೇತನ್ ಡ್ಯಾವಿ ಸಂಗೀತದ ಗುಣಮಟ್ಟಕ್ಕೆ ಸಾಕ್ಷಿ.
“ಉಡಾಳ” ಚಿತ್ರದ ಎರಡನೇ ಹಾಡು ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಮೊದಲ ಹಾಡು ಮತ್ತು ಟೀಸರ್ ಈಗಾಗಲೇ ಸಾಕಷ್ಟು ಗಮನ ಸೆಳೆದಿರುವುದರಿಂದ, ಎರಡನೇ ಹಾಡು ಕೂಡ ಸೂಪರ್ಹಿಟ್ ಆಗುವ ನಿರೀಕ್ಷೆ ಇದೆ. ಟೀಸರ್ನಲ್ಲಿ ಕಾಣಿಸಿಕೊಂಡ ಪೃಥ್ವಿ ಶಾಮನೂರು ಅವರ ನಾಯಕನಟನೆ, ಗ್ರಾಮೀಣ ಪ್ರೇಮಕಥೆ ಮತ್ತು ಕಾಮಿಡಿ ಸೀನ್ಗಳು ಪ್ರೇಕ್ಷಕರನ್ನು ಆಕರ್ಷಿಸಿವೆ.





