ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ‘ದಿ ಟಾಸ್ಕ್’ ಚಿತ್ರದ ಮೊದಲ ಹಾಡು ‘ಸಾಗುವ ದಾರಿಯ ತುಂಬಾ’ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ. ನವೆಂಬರ್ 21 ರಂದು ತೆರೆಕಾಣಲಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿಶೇಷ ಅತಿಥಿಯಾಗಿ ಆಗಮಿಸಿ ಹಾಡನ್ನು ಬಿಡುಗಡೆಗೊಳಿಸಿ, ತಂಡಕ್ಕೆ ಶುಭ ಹಾರೈಸಿದರು. ಚೂರಿಕಟ್ಟೆ ಖ್ಯಾತಿಯ ನಿರ್ದೇಶಕ ರಾಘು ಶಿವಮೊಗ್ಗ ಅವರ ಮೊದಲ ಮುಖ್ಯ ನಿರ್ದೇಶನದ ಈ ಚಿತ್ರವು ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದು, ಟೀಸರ್ ಮತ್ತು ಹಾಡುಗಳು ಈಗಾಗಲೇ ಗಮನ ಸೆಳೆದಿವೆ.
ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಮಾತನಾಡಿ, ಈ ಹಾಡು ತುಂಬಾ ಪ್ರಾಮಿಸಿಂಗ್ ಆಗಿದೆ. ಜೂಡಾ ಸ್ಯಾಂಡಿ ಸರ್ ಯೂನಿಕ್ ಮ್ಯೂಸಿಕ್ ಕೊಟ್ಟಿದ್ದಾರೆ. ಎಲ್ಲರಿಗೂ ಇಷ್ಟವಾಗುತ್ತದೆ. ‘ದಿ ಟಾಸ್ಕ್’ ಟೀಸರ್ ನೋಡಿದ್ರೆ ಆಕ್ಷನ್ ಥ್ರಿಲ್ಲರ್ ಎನಿಸುತ್ತದೆ. ಸಿನಿಮಾ ನೋಡಬೇಕು ಎಂಬ ನಿರೀಕ್ಷೆ ಹುಟ್ಟುಹಾಕುತ್ತದೆ. ನಾವು ನಮ್ಮ ಸ್ನೇಹಿತರ ಜೊತೆ ಫಸ್ಟ್ ಡೇ ಫಸ್ಟ್ ಶೋ ಹೋಗಿ ನಿಮಗೆ ಕಾಲ್ ಮಾಡ್ತೀವಿ. ಈ ಚಿತ್ರದಿಂದ ಇಬ್ಬರು ಹೊಸ ಹೀರೋಗಳು ಲಾಂಚ್ ಆಗುತ್ತಿದ್ದಾರೆ. ನವೆಂಬರ್ 21 ರಂದು ಎಲ್ಲಾ ಕನ್ನಡ ಕಲಾಭಿಮಾನಿಗಳು ಚಿತ್ರ ನೋಡಿ ಆಶೀರ್ವಾದ ಮಾಡಿ ಎಂದು ಹಾರೈಸಿದರು.
ನಿರ್ದೇಶಕ ರಾಘು ಶಿವಮೊಗ್ಗ ಮಾತನಾಡಿ, ಟೀಸರ್ ಹಾಗೂ ಹಾಡು ನೋಡಿದ್ದೀರಿ. ನಾನು ಏನೂ ಮಾತನಾಡಬೇಕು ಅನ್ನೋದನ್ನು ಸಿನಿಮಾ ಮುಖಾಂತರ ಹೇಳುತ್ತೇನೆ. ಈ ಚಿತ್ರವಾಗಲು ಮುಖ್ಯ ಕಾರಣ ವಿಜಯ್ ಕುಮಾರ್ ಸರ್, ರಾಮಣ್ಣ ಸರ್, ರಾಜೇಶ್ ಸರ್ ಹಾಗೂ ನರೇಂದ್ರ ಬಾಬು ಸರ್. ಈ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳು. ನವೆಂಬರ್ 21 ಕ್ಕೆ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರಮಂದಿರಕ್ಕೆ ಬಂದು ನೋಡಿ ಎಂದು ಮನವಿ ಮಾಡಿದ್ದಾರೆ. ರಾಘು ನಿರ್ದೇಶನದ ಜೊತೆಗೆ ಒಂದು ಮುಖ್ಯ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ.
‘ದಿ ಟಾಸ್ಕ್’ ಚಿತ್ರದಲ್ಲಿ ‘ಭೀಮ’ ಸಿನಿಮಾ ಖ್ಯಾತಿಯ ಜಯ ಸೂರ್ಯ ಆರ್ ಅಜಾದ್, ‘ಪೆಂಟಗನ್’ ಖ್ಯಾತಿಯ ಸಾಗರ್ ರಾಮ್ ಹಾಗೂ ಬಾಲ ನಟಿ ಬೇಬಿ ಶ್ರೀ ಲಕ್ಷ್ಮಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇಬ್ಬರು ಹೊಸ ಹೀರೋಗಳ ಲಾಂಚ್ ಆಗುತ್ತಿರುವುದು ಚಿತ್ರದ ವಿಶೇಷತೆ. ಉಳಿದಂತೆ ಅಚ್ಯುತ್ ಕುಮಾರ್, ಶ್ರೀಲಕ್ಷ್ಮೀ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್ ಕುಪ್ಳಿಕರ್, ಹರಿಣಿ ಶ್ರೀಕಾಂತ್, ಸಂಪತ್ ಮೈತ್ರಿಯಾ, ಬಾಲಾಜಿ ಮನೋಹರ್, ಬಿ.ಎಂ. ಗಿರಿರಾಜ್ ತಾರಾಬಳಗದಲ್ಲಿದ್ದಾರೆ. ಲೋಕಪೂಜ್ಯ ಪಿಕ್ಚರ್ ಹೌಸ್ ಬ್ಯಾನರ್ನಡಿ ವಿಜಯ್ ಕುಮಾರ್ ಹಾಗೂ ರಾಮಣ್ಣ ಅವರು ನಿರ್ಮಾಣ ಮಾಡಿದ್ದಾರೆ.
ಹಾಡು ‘ಸಾಗುವ ದಾರಿಯ ತುಂಬಾ’ ಸೇಮಿ ರ್ಯಾಪ್ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ರಾಘು ಶಿವಮೊಗ್ಗ ಮತ್ತು ಚೇತನ್ ನಾಯ್ಕ್ ಧ್ವನಿ ನೀಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡು ಯುವಜನತೆಯನ್ನು ಆಕರ್ಷಿಸುವಂತಿದ್ದು, ಟೀಸರ್ನೊಂದಿಗೆ ಸೇರಿ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ.
‘ದಿ ಟಾಸ್ಕ್’ ಟೀಸರ್ ಆಕ್ಷನ್, ಥ್ರಿಲ್ ಮತ್ತು ಡ್ರಾಮಾದ ಮಿಶ್ರಣವನ್ನು ತೋರಿಸುತ್ತದೆ. ಹೊಸ ಪ್ರತಿಭೆಗಳನ್ನು ಪರಿಚಯಿಸುವ ಈ ಚಿತ್ರವು ಸ್ಯಾಂಡಲ್ವುಡ್ನಲ್ಲಿ ಹೊಸ ತರಂಗ ತರಲಿದೆ ಎಂಬ ನಿರೀಕ್ಷೆಯಿದೆ. ಧ್ರುವ ಸರ್ಜಾ ಅವರ ಬೆಂಬಲವು ಚಿತ್ರಕ್ಕೆ ಹೆಚ್ಚುವರಿ ಬಲ ನೀಡಿದೆ. ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು, ಕಲಾವಿದರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.





