ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ ಬಹಳ ದಿನಗಳ ನಂತ್ರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ದಿ ಟಾಸ್ಕ್ ಅನ್ನೋ ಚಿತ್ರವನ್ನು ಪ್ರೇಕ್ಷಕರ ಮುಂದೆ ತರೋಕೆ ಸಜ್ಜಾಗಿದ್ದು, ಇನ್ಸ್ಪೆಕ್ಟರ್ ರಾಜೇಶ್ ಮಗ ಜಯಸೂರ್ಯರನ್ನ ಹೀರೋ ಆಗಿ ಲಾಂಚ್ ಕೂಡ ಮಾಡ್ತಿದ್ದಾರೆ. ದುನಿಯಾ ವಿಜಯ್ ಭೀಮದಲ್ಲಿ ಬಣ್ಣ ಹಚ್ಚಿದ್ದ ಜಯಸೂರ್ಯ ಹೀರೋ ಖದರ್ ಹೇಗಿದೆ..? ಫಸ್ಟ್ಲುಕ್ ನೋಡಿ ಕಿಚ್ಚ ಏನಂದ್ರು ಅನ್ನೋ ಕ್ಯೂರಿಯಾಸಿಟಿಗೆ ಈ ಸ್ಟೋರಿ ನೋಡಿ.
- ‘ಟಾಸ್ಕ್’ಗೆ ಸಿಕ್ತು ಬಾದ್ಷಾ ಹೈ-ವೋಲ್ಟೇಜ್ ಫೋರ್ಸ್ !
- ಇನ್ಸ್ಪೆಕ್ಟರ್ ರಾಜೇಶ್ ಮಗ ಸ್ಯಾಂಡಲ್ವುಡ್ಗೆ ಎಂಟ್ರಿ
- ಕಲಾವಿದನಾಗಿ ಬ್ಯುಸಿ ಆಗಿದ್ದ ರಾಘು ಡೈರೆಕ್ಷನ್ಗೆ ಕಂಬ್ಯಾಕ್
- ಸಸ್ಪೆನ್ಸ್ ಥ್ರಿಲ್ಲರ್.. ಬಹುದೊಡ್ಡ ತಾರಾಗಣ.. ವ್ಹಾವ್ ಮೇಕಿಂಗ್
ಬೆಳ್ಳಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಸಕ್ರಿಯರಾಗಿರುವ ರಾಘು ಶಿವಮೊಗ್ಗ ನಿರ್ದೇಶನದ ನಾಲ್ಕನೇ ಸಿನಿಮಾ ದಿ ಟಾಸ್ಕ್ ರಿಲೀಸ್ಗೆ ಸಜ್ಜಾಗಿದೆ. ಇದೇ ನವೆಂಬರ್ 21ಕ್ಕೆ ತೆರೆಗೆ ಬರೋಕೆ ಸಜ್ಜಾಗಿರೋ ದಿ ಟಾಸ್ಕ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಜಿಟಿ ಮಾಲ್ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ADGP ಎಂ ಚಂದ್ರಶೇಖರ್, ಲಹರಿ ಸಂಸ್ಥೆಯ ಲಹರಿ ವೇಲು, ವಿಷ್ಣು ಸೇನೆಯ ವೀರಕಪುತ್ರ ಶ್ರೀನಿವಾಸ್, ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಭಾಗಿಯಾಗಿ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದರು.
ಈ ಟೀಸರ್ಗೂ ಮುನ್ನ ಬಾದ್ಷಾ ಕಿಚ್ಚ ಸುದೀಪ್ ಅವರು ದಿ ಟಾಸ್ಕ್ ಚಿತ್ರದ ಫಸ್ಟ್ಲುಕ್ ಲಾಂಚ್ ಮಾಡಿ, ಚಿಗುರುಮೀಸೆಯ ಆರಡಿ ಕಟೌಟ್ ಜಯಸೂರ್ಯ ಹಾಗೂ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ರು. ಅಲ್ಲದೆ, ಸಿನಿಮಾದ ಕಂಟೆಂಟ್, ಮೇಕಿಂಗ್, ಡೈರೆಕ್ಷನ್ ಬಗ್ಗೆ ಕೊಂಡಾಡಿದ್ರು.
ಟಾಸ್ಕ್ ಅಂದ್ರೆ ಆಪರೇಷನ್, ಮಿಷನ್. ಯುನಿಫಾರ್ಮ್ ಸರ್ವೀಸ್ನಲ್ಲಿ ಇದನ್ನು ಬಳಸುತ್ತಾರೆ. ಸದ್ಯ ದಿ ಟಾಸ್ಕ್ ಚಿತ್ರದ ನಾಯಕನಟ ಜಯಸೂರ್ಯ ಈ ಸಿನಿಮಾದಿಂದ ಸ್ಯಾಂಡಲ್ವುಡ್ಗೆ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ಅಂದಹಾಗೆ ಜಯಸೂರ್ಯ ಇನ್ಸ್ಪೆಕ್ಟರ್ ರಾಜೇಶ್ ಅವರ ಮಗ ಆಗಿದ್ದು, ಈ ಹಿಂದೆ ದುನಿಯಾ ವಿಜಯ್ ನಿರ್ದೇಶನದ ಭೀಮ ಚಿತ್ರದಲ್ಲಿ ನಗೆಟೀವ್ ಶೇಡ್ನಲ್ಲಿ ಬಣ್ಣ ಹಚ್ಚಿದ್ರು. ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದ ಜಯಸೂರ್ಯ ಇದೀಗ ಹೀರೋ ಆಗಿ ಬಿಗ್ ಟಾಸ್ಕ್ನೇ ತೆಗೆದುಕೊಂಡಿದ್ದಾರೆ.
ಚೌಕಬಾರ, ಪೆಂಟಗನ್ ಹಾಗೂ ಚೂರಿಕಟ್ಟೆ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ರಾಘು ಶಿವಮೊಗ್ಗ, ಡೈರೆಕ್ಷನ್ ಬಿಟ್ಟು ನಟನೆಯತ್ತ ಮುಖ ಮಾಡಿದ್ರು. ಆದ್ರೀಗ ಮತ್ತೆ ಡೈರೆಕ್ಷನ್ಗೆ ಮರಳಿದ್ದು, ನಿರ್ದೇಶನದ ಜೊತೆ ಈ ಚಿತ್ರದಲ್ಲಿ ಬಣ್ಣ ಕೂಡ ಹಚ್ಚಿದ್ದಾರೆ. ಔಟ್ ಅಂಡ್ ಔಟ್ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಜಾನರ್ನ ಈ ಟಾಸ್ಕ್, ಮೇಕಿಂಗ್, ಬಹುದೊಡ್ಡ ತಾರಾಗಣದಿಂದ ದೊಡ್ಡ ಭರವಸೆ ಮೂಡಿಸಿದೆ. ಸಿನಿಮಾ ಟೆಕ್ನಿಕಲಿ ಸಖತ್ ಸ್ಟ್ರಾಂಗ್ ಇದೆ.
ಈ ಹಿಂದೆ ರಾಘು ಶಿವಮೊಗ್ಗ ನಿರ್ದೇಶನದ ಪೆಂಟಗನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಸಾಗರ್ ಹಾಗೂ ಭೀಮ ಚಿತ್ರದಲ್ಲಿ ಖಳನಾಯಕನಾಗಿ ಪರಿಚಯರಾಗಿದ್ದ ಜಯಸೂರ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀಲಕ್ಷ್ಮೀ, ಅರವಿಂದ್ ಕುಪ್ಳಿಕರ್, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್, ಸಂಪತ್ ಮೈತ್ರಿಯಾ, ಬಿ ಎಂ ಗಿರಿರಾಜ್, ಭರತ್ ಜಿಬಿ, ಪಿಡಿ ಸತೀಶ್ ಚಂದ್ರ,ಕಿರಣ್ ನಾಯ್ಕ್, ಅಶ್ವಿನ್ ಹಾಸನ್ ಸೇರಿದಂತೆ ದೊಡ್ಡ ತಾರಾಗಣವಿದೆ.
ಲೋಕಪೂಜ್ಯ ಪಿಕ್ಚರ್ ಹೌಸ್ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ಅವರು ದಿ ಟಾಸ್ಕ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಪ್ರಕಾಶ್ ಕಾರಿಂಜ ಸಂಕಲನ ಚಿತ್ರಕ್ಕಿದೆ. ನೈಜ ಘಟನೆ ಆಧಾರಿತ ಅಂಶಗಳಿಂದ ಸಿನಿಮಾ ಅತೀವ ನಿರೀಕ್ಷೆ ಮೂಡಿಸಿದ್ದು, ನೋಡುಗರಲ್ಲಿ ಕಾತುರತೆ ಹೆಚ್ಚಿಸಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





