ಪ್ಯಾನ್ ಇಂಡಿಯಾ ಸ್ಟಾರ್ ಆಗ್ತಿರೋ ನೀನಾಸಂ ಸತೀಶ್ಗೆ ಆ ಮಾದೇವ ಕೈ ಹಿಡಿದಿದ್ದಾನೆ. ಬರೋಬ್ಬರಿ ಮೂರು ವರ್ಷಗಳ ಕಾಲ ನಯಾ ಪೈಸೆ ರೆಮ್ಯುನರೇಷನ್ ಪಡೆಯದೆ ಹಗಲಿರುಳು ದುಡಿದು ದಿ ರೈಸ್ ಆಫ್ ಅಶೋಕ ಸಿನಿಮಾನ ಕಟ್ಟಿದ್ದಾರೆ. ಕೆಜಿಎಫ್, ಕಾಂತಾರ ರೀತಿ ಸಿನಿಮಾ ಮಾಡ್ತೀನಿ ಅನ್ನೋ ಭರವಸೆ ನೀಡಿದ ಅಭಿನಯ ಚತುರ ಭಾವುಕರಾದ ಎಮೋಷನಲ್ & ಡಿವೈನ್ ಸ್ಟೋರಿ ನಿಮ್ಮ ಮುಂದೆ.
ಅಭಿನಯ ಚತುರ ಸತೀಶ್ ನೀನಾಸಂ ಅವರ ಭತ್ತಳಿಕೆಯಿಂದ ಬರ್ತಿರುವ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ. ಟೈಟಲ್ ಹಾಗೂ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿರುವ ಈ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ. ಮಾದೇವನ ಕುರಿತ ಹಾಡನ್ನು ಬೆಂಗಳೂರಿನ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಸ್ವತಃ ಸತೀಶ್ ಏಳೋ ಏಳೋ ಮಹಾದೇವ ಗೀತೆ ಕ್ಯಾಚಿಮ್ಯಾಚಿ ಪದ ಪೊಣಿಸಿ ಸಾಹಿತ್ಯ ಬರೆದಿದ್ದಾರೆ.

ಶುರುವಾಯ್ತು ‘ದಿ ರೈಸ್ ಆಫ್ ಅಶೋಕ’ ಗಾನಬಜಾನ..!
ಅಭಿನಯ ಚತುರ ಸತೀಶ್ ಜೊತೆ ಕಾಂತಾರ ಚೆಲುವೆ ಸ್ಟೆಪ್
ಹಾಡು ಬಿಡುಗಡೆ ಬಳಿಕ ಭಾವುಕರಾಗಿಯೇ ಮಾತನಾಡಿದ ಸತೀಶ್ ನೀನಾಸಂ, ಅಯೋಗ್ಯ ಲೆಕ್ಕ ಅಲ್ಲಾ ನನಗೆ ಮನೇಲಿ ಮಲಗಿದ್ದರು ಜನ ಆ ಸಿನಿಮಾ ನೋಡ್ತಾರೆ. ಅಯೋಗ್ಯ ಬ್ರಾಂಡ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಮಾಡೋ ಹುಚ್ಚ ಅಂತಾರೆ? ಒಂದು ಕೆಜಿಎಫ್, ಒಂದು ಕಾಂತಾರ ಮಾಡಬೇಕು ಅನ್ನೋ ಆಸೆ ನನಗಿದೆ. ಒಂದು ರೂಪಾಯಿ ನಾನು ಸೈನಿಂಗ್ ದುಡ್ಡು ತಗೊಂಡಿಲ್ಲ ಎಂದು ಭಾವುಕರಾಗಿ ಮಾತನಾಡಿದ್ರು.

ಇನ್ನು ಈ ಚಿತ್ರದಲ್ಲಿ ಸಪ್ತಮಿ ಗೌಡ ಅಂಬಿಕಾ ಎಂಬ ಹೂ ಮಾರುವ ಹುಡುಗಿ ಪಾತ್ರದಲ್ಲಿ ಅಭಿನಯಿಸಿದ್ದು ಬಿಡುಗಡೆ ಆಗಿರೋ ಏಳೋ ಮಾದೇವ ಹಾಡಿನಲ್ಲಿ ಸಪ್ತಮಿ ಸಕತ್ ಸ್ಟೆಪ್ಸ್ ಹಾಕಿದ್ದಾರೆ. ಮಧ್ಯಾರಾತ್ರಿ 2ಗಂಟೆಗೆ ಈ ಹಾಡು ಶೂಟ್ ಮಾಡಿದ್ದು ಎಂಬ ಮಾಹಿತಿಯನ್ನ ಸಪ್ತಮಿ ಹಂಚಿಕೊಂಡಿದ್ದಾರೆ.

ಡಿವೈನ್ ಫೀಲ್ ಕೊಡೋ ‘ಏಳೋ ಮಾದೇವ’ ಸಾಂಗ್..!
ಮೂರು ವರ್ಷ..ನೋ ರೆಮ್ಯುನರೇಷನ್..ಸತೀಶ್ ಭಾವುಕ
ದಿ ರೈಸ್ ಆಫ್ ಆಫ್ ಅಶೋಕನಿಗೆ ದಯಾನಂದ್ ಟಿ.ಕೆ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಲವಿತ್ ಕ್ಯಾಮರಾ ಹಿಡಿದಿದ್ದು, ಮನು ಶೇಡ್ಗಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ರವಿವರ್ಮಾ ಹಾಗೂ ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ನಿರ್ವಹಿಸಿದ್ದರೆ, ಸಂತೋಷ್ ಶೇಖರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ದಿ ರೈಸ್ ಆಫ್ ಅಶೋಕ 70ರ ದಶಕದಲ್ಲಿ ನಡೆಯುವ ಸಿನಿಮಾ. ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆಯೇ ದಿ ರೈಸ್ ಆಫ್ ಅಶೋಕ. ಚಿತ್ರದಲ್ಲಿ ಸತೀಶ್ಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ, ಜಗಪ್ಪ ತಾರಾಬಳಗದಲ್ಲಿದ್ದಾರೆ. ಇದು ಸತೀಶ್ ಅವರ ವೃತ್ತಿಜೀವನದಲ್ಲೇ ಬಿಗ್ ಬಜೆಟ್ ಚಿತ್ರವಾಗಿದ್ದು, ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆ ಕೂಡ ಇದೆ.

ಸಿನಿಮಾ ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡಾ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶಿವನ ಕುರಿತಾದ ಈ ಹಾಡಿಗೆ ಕೈಲಾಶ್ ಕೇರ್ ಸಾಧ್ವಿನಿ ಕೊಪ್ಪ ಹಾಗೂ ಸಿದ್ದು ಧ್ವನಿಯಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಮಾದೇವ ಗೀತೆಯ ತೂಕ ಹೆಚ್ಚಿಸಿದೆ. ಬೀಸುವ ಕಲ್ಲು, ಗಾಳಿಯಲ್ಲಿಯೂ ಶಿವನ್ನು ವರ್ಣಿಸಿರುವ ಸತೀಶ್ ನೀನಾಸಂ, ಶಿವನ ಭಕ್ತಿ ಭಾವದಲ್ಲಿ ತೇಲುವಂತೆ ಮಾಡಿದ್ದಾರೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





