ಪುಷ್ಪ ಕ್ರಿಯೇಟರ್ ಸುಕುಮಾರ್ ನಮ್ಮ ಕಲ್ಟ್ ಡೈರೆಕ್ಟರ್ ಉಪೇಂದ್ರ ಅವರಿಂದ ಅದೊಂದನ್ನ ಕದ್ದಿದ್ದಾರಂತೆ. ಅದನ್ನ ಬೃಹತ್ ವೇದಿಕೆಯಲ್ಲಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಉಪ್ಪಿಯ ಆ ಮೂರು ಸಿನಿಮಾಗಳಂತಹ ಚಿತ್ರಗಳನ್ನ ನಾನು ಮಾಡಿದ್ದಿದ್ರೆ ಇಷ್ಟೊತ್ತಿಗೆ ರಿಟೈರ್ಡ್ ಕೂಡ ಆಗಿಬಿಡ್ತಿದ್ದೆ ಎಂದಿದ್ದಾರೆ.
ಇದು ಅರ್ಜುನ್ ಸರ್ಜಾ ನಿರ್ದೇಶನದ ತ್ರಿಭಾಷಾ ಚಿತ್ರ ಸೀತಾ ಪಯಣದ ಟೀಸರ್ ಝಲಕ್. ಹೈದ್ರಾಬಾದ್ನಲ್ಲಿ ನಿನ್ನೆ ನಡೆದ ಈ ಟೀಸರ್ ಲಾಂಚ್ ಫಂಕ್ಷನ್, ಸೌತ್ ಸಿನಿದುನಿಯಾದ ಸೂಪರ್ ಸ್ಟಾರ್ಗಳ ಮಹಾ ಸಂಗಮಕ್ಕೆ ಸಾಕ್ಷಿ ಆಗಿದ್ದು ಇಂಟರೆಸ್ಟಿಂಗ್. ತಮಿಳಿನ ಅರ್ಜುನ್ ಸರ್ಜಾ, ತೆಲುಗಿನ ಪುಷ್ಪ ಡೈರೆಕ್ಟರ್ ಸುಕುಮಾರ್ ಹಾಗೂ ಕನ್ನಡದ ಉಪೇಂದ್ರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ರು.
ಪ್ರೇಮ ಬರಹ ಚಿತ್ರದ ಬಳಿಕ ಮತ್ತೊಮ್ಮೆ ಮಗಳಿಗಾಗಿ ಒಂದೊಳ್ಳೆ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಮಾಡಿರೋ ಅರ್ಜುನ್ ಸರ್ಜಾ, ಈ ಚಿತ್ರದ ಮೂಲಕ ಉಪೇಂದ್ರ ಸಹೋದರ ಸುಧೀಂದ್ರ ಅವರ ಮಗ ನಿರಂಜನ್ನ ಬಹುಭಾಷಾ ನಟನನ್ನಾಗಿಸಿದ್ದಾರೆ. ಆ್ಯಕ್ಷನ್ ಕಿಂಗ್ ಮಗಳು ಐಶ್ವರ್ಯಾ ಎಂದಿನಂತೆ ಗ್ಲಾಮರಸ್ ಆಗಿ ಕಾಣ್ತಿದ್ದು, ಇಂಟೆನ್ಸ್ ಲವ್ ಸ್ಟೋರಿ ಜೊತೆ ಕೌಟುಂಬಿಕ ಮೌಲ್ಯಗಳನ್ನ ಸಾರುವ ಸಿನಿಮಾದಂತಿದೆ. ಪ್ರಕಾಶ್ ರೈ, ಸತ್ಯರಾಜ್ ಸೇರಿದಂತೆ ಒಳ್ಳೆಯ ತಾರಾಗಣ ಚಿತ್ರದಲ್ಲಿದೆ.
ಅಂದಹಾಗೆ ಟೀಸರ್ ಲಾಂಚ್ ಫಂಕ್ಷನ್ಗೆ ಮುಖ್ಯ ಅತಿಥಿಯಾಗಿ ಇಂಡಿಯಾದ ಇಬ್ಬರು ಸೆನ್ಸೇಷನಲ್ ಡೈರೆಕ್ಟರ್ಸ್ ಬಂದಿದ್ರು. ಒಬ್ರು ಪುಷ್ಪ ಸಿನಿಮಾ ಖ್ಯಾತಿಯ ಸುಕುಮಾರ್, ಮತ್ತೊಬ್ರು ಕಲ್ಟ್ ಸಿನಿಮಾಗಳ ಬುದ್ದಿವಂತ ಉಪೇಂದ್ರ. ಇಲ್ಲಿ ಉಪ್ಪಿ ತನ್ನ ಮಗನಿಗಾಗಿ ಬಂದಿದ್ರು. ಆದ್ರೆ ಸುಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡ್ತಾ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ನೀಡಿದ್ದಾರೆ. ಅರ್ಜುನ್ ಸರ್ಜಾ ಜೊತೆಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದಾಗಿನ ದಿನಗಳನ್ನ ನೆನೆದ ಸೆನ್ಸೇಷನಲ್ ಡೈರೆಕ್ಟರ್ ಸುಕ್ಕು, ಹಳೆಯ ನೆನಪಿನ ಬುತ್ತಿ ಬಿಚ್ಚಿಟ್ಟರು.
ಓಂ, ಎ, ಉಪೇಂದ್ರ ಸಿನಿಮಾಗಳನ್ನ ತೆಗೆದ ಯಾವುದೇ ಡೈರೆಕ್ಟರ್ ರಿಟೈರ್ಡ್ ಆಗಿಬಿಡಬಹುದು. ನಾನೇನಾದ್ರೂ ಅಂತಹ ಮೂರು ಸಿನಿಮಾಗಳನ್ನ ಮಾಡಿದ್ದಿದ್ರೆ ರಿಟೈರ್ಡ್ ಆಗಿಬಿಡ್ತಿದ್ದೆ. ಅಂತಹ ಕಲ್ಟ್ ಮೂವಿಗಳನ್ನು ನೀವು ಕೊಟ್ಟಿದ್ದೀರಾ. ನೀವು ನಂಬಲ್ಲ, ನಾವೆಲ್ಲಾ ತುಂಬಾ ಸ್ಫೂರ್ತಿಗೊಂಡಿದ್ದೇವೆ. ಇಂದು ನನ್ನ ಸ್ಕ್ರೀನ್ ಪ್ಲೇಗಳು ಹೀಗೆ ಇರಲು ಕಾರಣ ಉಪೇಂದ್ರ ಅವರ ಓಂ. ಆಡಿಯೆನ್ಸ್ನ ಸಿಕ್ಕಾಪಟ್ಟೆ ಸರ್ಪ್ರೈಸ್ ಮಾಡ್ತಾರೆ ಉಪೇಂದ್ರ. ನಿಮ್ಮಿಂದ ನಾನು ಅದನ್ನ ಕದ್ದಿದ್ದೇನೆ ಸರ್. ನೀವು ನಮಗೆ ಗ್ರೇಟ್ ಇನ್ಸ್ಪಿರೇಷನ್ ಸರ್. ಹೀಗೆ ಹೇಳುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿ ಆಗ್ತಿದೆ. ಥ್ಯಾಂಕ್ಯೂ ಸರ್. ಲವ್ ಯೂ ಸರ್ ಅಂತ ಉಪ್ಪಿಯನ್ನ ಕೊಂಡಾಡಿಬಿಟ್ಟರು ಸುಕುಮಾರ್.
ಇಂಟರೆಸ್ಟಿಂಗ್ ಅಂದ್ರೆ ನಿರಂಜನ್- ಐಶ್ವರ್ಯಾ ಸರ್ಜಾ ಜೋಡಿಯ ಸೀತಾ ಪಯಣಕ್ಕೆ ಅರ್ಜುನ್ವ ಸರ್ಜಾ ಹಾಗೂ ಧ್ರುವ ಸರ್ಜಾ ಕೂಡ ಸಾಥ್ ನೀಡಿದ್ದಾರೆ. ಇಬ್ಬರೂ ಸ್ಪೆಷಲ್ ಅಪಿಯರೆನ್ಸ್ ನೀಡುವ ಮೂಲಕ ಸಿನಿಮಾದ ಸ್ಟ್ರೆಂಥ್ ಹೆಚ್ಚಿಸಿದ್ದಾರೆ. ಇದು ಕನ್ನಡ, ತಮಿಳು ಹಾಗೂ ತೆಲುಗಿನ ಬಹುನಿರೀಕ್ಷಿತ ಸಿನಿಮಾಗಳ ಸಾಲಿಗೆ ಸೇರಿದ್ದು, ಟೀಸರ್ ಲಾಂಚ್ ಮೂಲಕ ಭರ್ಜರಿ ಪ್ರಮೋಷನ್ಸ್ ಆರಂಭಿಸಿದೆ ಟೀಂ.
ಒಟ್ಟಾರೆ ಆರ್ಯ, ಆರ್ಯ-2, ರಂಗಸ್ಥಳಂ, ಪುಷ್ಪ, ಪುಷ್ಪ-2 ಅಂತಹ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ಗಳನ್ನ ಪ್ರೇಕ್ಷಕರಿಗೆ ನೀಡಿರುವ ಸುಕುಮಾರ್ ಅವರೇ ನಮ್ಮ ಉಪೇಂದ್ರ ಅವರಿಂದ ಸಿಕ್ಕಾಪಟ್ಟೆ ಪ್ರೇರಣೆಗೊಂಡಿರೋದು ನಿಜಕ್ಕೂ ಗ್ರೇಟ್. ಅದಕ್ಕೇ ಅಲ್ಲವೇ ಉಪ್ಪಿಗಿಂತ ರುಚಿ ಬೇರೆ ಇಲ್ಲ. ಅದನ್ನ ಒಪ್ಪಿಕೊಂಡೋರು ದಡ್ಡರಲ್ಲ ಅಂತ ಸ್ವತಃ ಉಪೇಂದ್ರ ಅವರೇ ಹೇಳೀರೋದು.