ಗಾಯಕ ಸೋನು ನಿಗಮ್ಗೆ ತಾನು ತಪ್ಪು ಮಾಡಿದ್ದೀನಿ ಅನ್ನೋದ್ರ ಪಶ್ಚಾತ್ತಾಪ ಕಿಂಚಿತ್ತೂ ಇಲ್ಲ. ತಪ್ಪೇ ಮಾಡದವನ ರೀತಿ ದರ್ಪ ತೋರುವ ಮೂಲಕ, ಕ್ಷಮೆ ಕೇಳದೆ ಸ್ಪಷ್ಟನೆ ನೀಡಿದ್ದಾನೆ. ಕನ್ನಡಿಗರ ಕುರಿತ ವಿವಾದಾತ್ಮಕ ಹೇಳಿಕೆಗೆ ಸೋನು ಕೊಟ್ಟ ಸ್ಪಷ್ಟನೆ ಏನು..? ಅದಕ್ಕೆ ನಮ್ಮ ಸ್ಯಾಂಡಲ್ವುಡ್ ದೊಡ್ಡಣ್ಣ ಕೊಟ್ಟ ತಿರುಗೇಟು ಏನು ಅನ್ನೋದ್ರ ಕಹಾನಿ ಇಲ್ಲಿದೆ.
ಮುಂಗಾರುಮಳೆ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದಂತೆ ಅದ್ಯಾಕೋ ಸೋನು ನಿಗಮ್, ಮಾಡಿದ ತಪ್ಪಿಗೆ ಒಂದು ಕ್ಷಮೆ ಕೇಳಿ ಮುಂದೆ ಹೋಗಿದ್ರೆ ಸಾಕಾಗ್ತಿತ್ತು. ಆದ್ರೀಗ ಪರ ಪರ ಅಂತ ಕೆರ್ಕೊಂಡು ದೊಡ್ಡ ಗಾಯ ಮಾಡ್ಕೊಳ್ತಿದ್ದಾರೆ. ಹೌದು.. ಇಡೀ ಕರುನಾಡಿನ ಮಂದಿ ಆತನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಲ್ಲದೆ, ಚಿತ್ರರಂಗದಲ್ಲಿ ಅವಕಾಶಗಳು ಕೊಡಬಾರದು ಅನ್ನೋ ಅಲೆ ಎದ್ದಿದೆ.
ನಿನ್ನೆಯಷ್ಟೇ ಕನ್ನಡಪರ ಹೋರಾಟಗಾರರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವುದರ ಜೊತೆಗೆ ಫಿಲ್ಮ್ ಚೇಂಬರ್ಗೂ ದೂರು ನೀಡಿದ್ದಾರೆ. ಇನ್ಮೇಲೆ ಚಿತ್ರರಂಗ ಸೋನು ನಿಗಮ್ನ ಬಾಯ್ಕಾಟ್ ಮಾಡಬೇಕು. ಸದ್ಯ ಹಾಡಿರೋ ಹಾಡುಗಳಿರೋ ಸಿನಿಮಾಗಳು ರಿಲೀಸ್ ಆಗಬಾರದು. ಮುಂದಿನ ದಿನಗಳಲ್ಲಿ ಸಂಗೀತ ನಿರ್ದೇಶಕರುಗಳು ಕೂಡ ಸೋನುನ ಕರೆಸಿ ಹಾಡಿಸೋ ಕಾರ್ಯಗಳು ನಡೀಬಾರದು ಅಂತ ತಾಕೀತು ಮಾಡಿದ್ದಾರೆ.
ಬಹುಶಃ ಇದೆಲ್ಲಾ ಸೋನು ನಿಗಮ್ ಗಮನಕ್ಕೆ ಹೋಗಿದೆ. ಸದ್ಯದಲ್ಲೇ ಪೊಲೀಸ್ ಠಾಣೆಗೆ ವಿಚಾರಣೆಗೂ ಬರಲೇಬೇಕಾದ ಅನಿವಾರ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಕ್ಷಮೆ ಕೇಳುವ ಮೂಲಕ ದೊಡ್ಡತನ ತೋರಬೇಕಿತ್ತು. ಆದ್ರೆ ಜಿಮ್ನಲ್ಲಿ ವರ್ಕೌಟ್ ಮಾಡ್ತಾನೇ ವಿಡಿಯೋ ಮಾಡಿರೋ ಸೋನು ನಿಗಮ್, ಆ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ಕೊಟ್ಟು, ಮತ್ತಷ್ಟು ವಿವಾದಗಳನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.
ಕನ್ನಡ ಕನ್ನಡ ಅಂತ ಪ್ರೀತಿಯಿಂದ ಕೇಳೋದು ಬೇರೆ. ಅದನ್ನೇ ಕನ್ನಡ ಕನ್ನಡ ಅಂತ ಬೆದರಿಕೆ ಹಾಕೋದು ಬೇರೆ. ಕಿರುಚಿದವರಲ್ಲಿ ನನಗೆ ಉಗ್ರತನ ಕಾಣ್ತಿತ್ತು.. ಎಲ್ಲೇ ಹೋದ್ರೂ ಅಂಥವ್ರು ನಾಲ್ಕು ಮಂದಿ ಸಿಗ್ತಾರೆ. ಅಂತಹ ಕೀಟಗಳನ್ನ ನಾವೇ ತೆಗೆದುಹಾಕಬೇಕು. ಪಹಲ್ಗಾಮ್ನಲ್ಲಿ ಉಗ್ರರು ಭಾಷೆಯನ್ನು ಕೇಳಲಿಲ್ಲ, ಮತ ಕೇಳಿ ಕೊಂದರು. ಹಾಗಾಗಿ ನಾನು ಪಹಲ್ಗಾಮ್ ಘಟನೆ ಉದಾಹರಣೆ ಕೊಟ್ಟಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಇದರ ಅರ್ಥ ಆತನ ಕೋಪ ಏನು ಅನ್ನೋದು ಇಲ್ಲಿ ಸ್ಪಷ್ಟವಾಗಿದೆ.
ಕನ್ನಡ ಹಾಡನ್ನ ಕೇಳಿದ ಕನ್ನಡಿಗನನ್ನ ಉಗ್ರ ಅಂದಿದ್ದಾನೆ. ಕನ್ನಡ ಹಾಡು ಹಾಡಿ ಎಂದವನನ್ನ ಕೀಟ ಎಂದಿದ್ದಾನೆ. ಇಷ್ಟೆಲ್ಲಾ ಅನಿಸಿಕೊಂಡು, ಸಹಿಸಿಕೊಂಡು ಇರೋಕೆ ನಾವೇನು ಉಪ್ಪು, ಹುಳಿ, ಖಾರ ತಿಂದು ಬೆಳೆದವರಲ್ಲವೇ..? ನಮಗೆ ಸ್ವಾಭಿಮಾನ ಇಲ್ಲವೇ..? ಈ ದುರಹಂಕಾರಿಗೆ ತಕ್ಕ ಪಾಠ ಕಲಿಸದೇ ಇದ್ರೆ ಇಂತಹ ಹತ್ತಾರು ಕ್ರಿಮಿ ಕೀಟಗಳು ಹುಟ್ಟಿಕೊಳ್ತಾರೆ. ಸೋ.. ಕನ್ನಡ ಚಿತ್ರರಂಗ ಈತನನ್ನ ಕೈ ಬಿಡಬೇಕು. ಈತ ಹಾಡಿರೋ ಹಾಡುಗಳನ್ನ ರಿಲೀಸ್ ಸಿನಿಮಾಗಳಿಂದ ಡಿಲೀಟ್ ಮಾಡಬೇಕು. ಇನ್ಮೇಲೆ ಕರ್ನಾಟಕದ ಯಾವುದೇ ಭಾಗದಲ್ಲಿ ಈತ ಲೈವ್ ಕಾನ್ಸರ್ಟ್ಸ್ ಮಾಡಲು ಅನುಮತಿ ನೀಡಬಾರದು.
ಈ ಬಗ್ಗೆ ದೊಡ್ಡಣ್ಣ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದು, ಅವನದ್ದು ದರಹಂಕಾರದ ಪರಮಾವಧಿ ಅಂತ ಕಿಡಿ ಕಾರಿದ್ದಾರೆ.
ಒಟ್ಟಾರೆ ಇದು ಆರಂಭ ಅಷ್ಟೇ.. ಸೋನು ನಿಗಮ್ ಅಂತಹ ಕನ್ನಡ ದ್ರೋಹಿಗಳನ್ನ ಬೆಳೆಸಿದ್ರೆ ಅದಕ್ಕಿಂತ ದೊಡ್ಡ ಅವಮಾನ ಮತ್ತೊಂದಿರಲಾರದು. ಕನ್ನಡಿಗರು ಈ ವಿಚಾರದಲ್ಲಿ ಬೇಗ ಎಚ್ಚೆತ್ತುಕೊಳ್ಳಬೇಕು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್