ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಅದ್ಯಾಕೋ ಬ್ಯಾಡ್ ಟೈಂ ಶುರುವಾದಂತಿದೆ. ಇತ್ತೀಚೆಗೆ ಕಾಂತಾರ-1 ಚಿತ್ರದ ಇಬ್ಬರು ಕಲಾವಿದರು ಬ್ಯಾಕ್ ಟು ಬ್ಯಾಕ್ ತೀರಿಕೊಂಡಿದ್ರು. ಇದೀಗ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರಕ್ಕೂ ಕುತ್ತು ಬರುವಂತಿದೆ. ಬಾಲಿವುಡ್ನಲ್ಲಿ ಮತ್ತೊಂದು ಶಿವಾಜಿ ಸಿನಿಮಾ ಅನೌನ್ಸ್ ಆಗಿದ್ದು, ಅಕ್ಷರಶಃ ಶಾಕ್ನಲ್ಲಿದ್ದಾರೆ ಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿ.
- ಬಾಲಿವುಡ್ನಲ್ಲಿ ಮತ್ತೊಂದು ಶಿವಾಜಿ.. ರಿಷಬ್ ಶೆಟ್ಟಿಗೆ ಶಾಕ್
- ರಿಷಬ್ v/s ರಿತೇಶ್.. ಯಾರಾಗ್ತಾರೆ ಶಿವಾಜಿ ಮಹಾರಾಜ್?
- ಡಿವೈನ್ ಸ್ಟಾರ್ಗೆ ಬ್ಯಾಡ್ ಟೈಂ.. ನಿಜವಾಗ್ತಿದ್ಯಾ ದೈವದ ಮಾತು?
- ಕಾಂತಾರ-1 ರಿಲೀಸ್ನಲ್ಲಿ ಬದಲಾವಣೆ ಇಲ್ಲ.. ಸಿಕ್ತು ಸ್ಪಷ್ಟನೆ..!
ರಿಷಬ್ ಶೆಟ್ಟಿ.. ಕರಾವಳಿಯ ಕುವರ, ಹೆಮ್ಮೆಯ ಕನ್ನಡಿಗ, ಕಾಂತಾರ ಚಿತ್ರದ ಮೂಲಕ ನಮ್ಮ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ವಿಶ್ವಸಂಸ್ಥೆವರೆಗೂ ಕೊಂಡೊಯ್ದ ಅತ್ಯದ್ಭುತ ಬಹುಮುಖ ಪ್ರತಿಭೆ. ಹೌದು.. ಕಷ್ಟಪಟ್ಟು ಹಂತ ಹಂತವಾಗಿ ಬೆಳೆದುಕೊಂಡು ಬಂದಂತಹ ರಿಷಬ್, ಸದ್ಯ ಡಿವೈನ್ ಸ್ಟಾರ್ ಆಗಿ ಇಡೀ ವಿಶ್ವ ಸಿನಿದುನಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಕಾಂತಾರ ಬಳಿಕ ಇವ್ರ ಕಾಂತಾರ ಪ್ರೀಕ್ವೆಲ್ ಹಾಗೂ ಮುಂದಿನ ನಡೆ ಬಗ್ಗೆ ಎಲ್ಲಿಲ್ಲದ ಕುತೂಹಲ ಮೂಡಿದೆ.
ಇದೇ ಸೆಪ್ಟೆಂಬರ್ 30 ಬಂದ್ರೆ ಕಾಂತಾರ ಚಿತ್ರ ತೆರೆಕಂಡು ಬರೋಬ್ಬರಿ ಮೂರು ವರ್ಷಗಳು ಕಳೆಯಲಿದೆ. ಅಂದಿನಿಂದ ಇಂದಿನವರೆಗೆ ಕಾಂತಾರ ಪ್ರೀಕ್ವೆಲ್ನಲ್ಲಿಯೇ ಬ್ಯುಸಿ ಆಗಿದ್ದಾರೆ ರಿಷಬ್. ಆದ್ರೆ ಈ ಮೂರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಪಂಜುರ್ಲಿ ದೈವ ಭವಿಷ್ಯ ನುಡಿದಂತೆ ರಿಷಬ್ಗೆ ಶತ್ರುಗಳ ಕಾಟ ಜಾಸ್ತಿ ಆಗ್ತಿದೆ. ಒಂಥರಾ ಬ್ಯಾಡ್ ಟೈಂ ಶುರುವಾಗಿದೆ. ಅದೇ ಕಾರಣದಿಂದ ತನ್ನ ಕಾಂತಾರ ಚಾಪ್ಟರ್-1ನ ಇಬ್ಬರು ಕಲಾವಿದರು ಚಿತ್ರ ಬಿಡುಗಡೆಗೆ ಮೊದಲೇ ತೀರಿಕೊಂಡರು.
ಈ ಮಧ್ಯೆ ರಿಷಬ್ ನಟನೆಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಅನೌನ್ಸ್ ಆಗಿದ್ದವು. ಅವುಗಳಲ್ಲಿ ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹನುಮಾನ್ ಒಂದಾದ್ರೆ, ಸಂದೀಪ್ ಸಿಂಗ್ ನಿರ್ದೇಶನದ ಛತ್ರಪತಿ ಶಿವಾಜಿ ಮಹಾರಾಜ್ ಮತ್ತೊಂದು. ಆದ್ರೀಗ ಶಿವಾಜಿ ಮಹಾರಾಜರ ಕುರಿತ ಸಿನಿಮಾ ರಿಷಬ್ ಮಾಡ್ತಾರಾ ಇಲ್ವಾ ಅನ್ನೋದೇ ಡೌಟ್ ಎನ್ನುವಂತಾಗಿದೆ. ಅದಕ್ಕೆ ಕಾರಣ ಬಾಲಿವುಡ್ ಅಂಗಳದಲ್ಲಿ ಅನೌನ್ಸ್ ಆಗಿರೋ ಮತ್ತೊಂದು ಶಿವಾಜಿ ಸಿನಿಮಾ.
ಯೆಸ್.. ಬಾಲಿವುಡ್ ನಟ ರಿತೇಶ್ ದೇಶಮುಖ್ ರಾಜ ಶಿವಾಜಿ ಟೈಟಲ್ನಲ್ಲಿ ಹೊಸ ಸಿನಿಮಾ ಅಫಿಶಿಯಲಿ ಅನೌನ್ಸ್ ಮಾಡಿದ್ದಾರೆ. ಜಿಯೋ ಸ್ಟುಡಿಯೋಸ್ ಹಾಗೂ ಮುಂಬೈ ಫಿಲ್ಮ್ ಕಂಪೆನಿ ಜೊತೆಗೂಡಿ ರಿತೇಶ್ ದೇಶಮುಖ್ ಶಿವಾಜಿ ಸಿನಿಮಾನ ಶುರು ಮಾಡ್ತಿದ್ದು, ಟೈಟಲ್ ರೋಲ್ನಲ್ಲಿ ಬಣ್ಣ ಹಚ್ಚೋದ್ರ ಜೊತೆಗೆ ತಾವೇ ಅದಕ್ಕೆ ಆ್ಯಕ್ಷನ್ ಕಟ್ ಕೂಡ ಹೇಳ್ತಿದ್ದಾರೆ.
2026ಕ್ಕೆ ಮಹಾರಾಷ್ಟ್ರ ದಿನವಾದ ಮೇ 1ರಂದು ರಾಜ ಶಿವಾಜಿ ಸಿನಿಮಾನ ರಿಲೀಸ್ ಮಾಡೋದಾಗಿ ಅನೌನ್ಸ್ ಕೂಡ ಮಾಡಿದ್ದಾರೆ ರಿತೇಶ್. ಆದ್ರೆ 2027ರ ಜನವರಿ 21ರಂದು ರಿಷಬ್ ನಟನೆಯ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ತೆರೆಗೆ ಬರೋದಾಗಿ ಅನೌನ್ಸ್ ಮಾಡಿತ್ತು ಶೆಟ್ರ ನಟನೆಯ ಟೀಂ. ಆದ್ರೀಗ ಅದಕ್ಕೂ ಮೊದಲೇ ರಿತೇಶ್ ನಟನೆಯ ಶಿವಾಜಿ ಪ್ರೇಕ್ಷಕರ ಮುಂದೆ ಬರಲಿದೆ. ಇದು ಅಕ್ಷರಶಃ ರಿಷಬ್ ಶೆಟ್ಟಿಗೆ ಶಾಕ್ ನೀಡಿದೆ.
ಸ್ವರಾಜ್ಯಕ್ಕಾಗಿ ಹೋರಾಡಿದ ಅಪ್ರತಿಮ ಐತಿಹಾಸಿಕ ವೀರ ಛತ್ರಪತಿ ಶಿವಾಜಿ ಮಹಾರಾಜ್ ಕುರಿತ ಸಿನಿಮಾಗಾಗಿ ಇಡೀ ಭಾರತ ಎದುರು ನೋಡ್ತಿದೆ. ಆದ್ರೆ ಇವರಿಬ್ಬರ ನಡುವೆ ಈ ಚಿತ್ರಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಇಬ್ಬರೂ ಶಿವಾಜಿ ಸಿನಿಮಾ ಮಾಡ್ತಾರಾ..? ಅಥ್ವಾ ಪರಸ್ಪರ ಮಾತುಕತೆ ಮೂಲಕ ಒಬ್ಬರು ಅದನ್ನ ಕೈ ಬಿಡ್ತಾರಾ ಅನ್ನೋದು ಕಾದು ನೋಡಬೇಕಿದೆ. ಒಂದಷ್ಟು ವಿರೋಧಗಳ ನಡುವೆಯೂ ಶಿವಾಜಿ ಪಾತ್ರಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದ ನಮ್ಮ ಹೆಮ್ಮೆಯ ಕನ್ನಡಿಗನಿಗೆ ಈಗ ಆತಂಕ ಶುರುವಾಗಿದೆ.
ಈ ಮಧ್ಯೆ ಹೊಂಬಾಳೆ ಫಿಲಂಸ್ ಒಂದು ಪ್ರೆಸ್ ಅನೌನ್ಸ್ ಮಾಡಿದ್ದು, ಕಾಂತಾರ ಚಾಪ್ಟರ್-1 ರಿಲೀಸ್ ಡೇಟ್ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ. ಅಕ್ಟೋಬರ್ 2ರಂದು ಗಾಂಧಿಜಯಂತಿಗೆ ಕಾಂತಾರ ಪ್ರೀಕ್ವೆಲ್ ಸಿನಿಮಾ ತೆರೆಗೆ ಬರ್ತಿದೆ ಎಂದು ಸ್ಪಷ್ಟಪಡಿಸಿದೆ.