ಕಾಂತಾರ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಮ್ಮ ಸಿಂಗಾರ ಸಿರಿ ಸಪ್ತಮಿ ಗೌಡಗೆ ರೆಡ್ ಕಾರ್ಪೆಟ್ ಹಾಸಿದೆ ಪಕ್ಕದ ತೆಲುಗು ಚಿತ್ರರಂಗ. ದಿಲ್ರಾಜು ದಿಲ್ ದೋಚಿದ್ದ ಕನ್ನಡತಿ, ಇದೀಗ ಇಡೀ ಆಂಧ್ರ ಚಿತ್ರಪ್ರೇಮಿಗಳ ಹಾರ್ಟ್ಗೆ ಲಗ್ಗೆ ಇಟ್ಟಿದ್ದಾರೆ. ತಮ್ಮುಡು ಟ್ರೈಲರ್ ಸಖತ್ ಕಿಕ್ ಕೊಡ್ತಿದೆ. ನಿತಿನ್-ಸಪ್ತಮಿ ಜೋಡಿ ಮಾಡ್ತಿರೋ ಮೋಡಿಯ ಝಲಕ್.
ಸ್ಯಾಂಡಲ್ವುಡ್ ಮೂಲಕ ಹೀರೋಯಿನ್ಗಳಾಗಿ ಇಂಟ್ರಡ್ಯೂಸ್ ಆಗುವ ಅಪ್ಪಟ ಕನ್ನಡ ಚೆಲುವೆಯರು ಆ ಸಿನಿಮಾ ಹಿಟ್ ಆದ್ರೆ ಮುಗೀತು. ಅಕ್ಕ ಪಕ್ಕದ ಚಿತ್ರರಂಗಗಳ ಫಿಲ್ಮ್ ಮೇಕರ್ಸ್ ಕಣ್ಣು ಇವರ ಮೇಲೆ ಬಿದ್ದು ಬಿಡುತ್ತೆ. ರೆಡ್ ಕಾರ್ಪೆಟ್ ಹಾಸಿ, ಒಳ್ಳೆ ಸಂಭಾವನೆ ನೀಡಿ, ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ನಟಿಸೋಕೆ ಆಫರ್ ಕೊಟ್ಟುಬಿಡ್ತಾರೆ. ಇತ್ತೀಚೆಗೆ ಹಾಗೆ ಹೋದವ್ರಲ್ಲಿ ಸಪ್ತ ಸಾಗರದ ಪುಟ್ಟಿ ರುಕ್ಮಿಣಿ ವಸಂತ್ ಹಾಗೂ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಪರಭಾಷಾ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ.
ಇದೀಗ ಆ ಸಾಲಿಗೆ ನಮ್ಮ ಕಾಂತಾರ ಕ್ವೀನ್, ಸಿಂಗಾರ ಸಿರಿ ಸಪ್ತಮಿ ಗೌಡ ಹೊಸ ಸೇರ್ಪಡೆ. ಎಂಸಿಎ ಹಾಗೂ ವಕೀಲ್ ಸಾಬ್ ಅನ್ನೋ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನ ನೀಡಿರುವ ಶ್ರೀರಾಮ್ ವೇಣು ನಿರ್ದೇಶನದ ತೆಲುಗಿನ ತಮ್ಮುಡು ಚಿತ್ರದಲ್ಲಿ ಸಪ್ತಮಿ ನಾಯಕನಟಿ. ಫೇಮಸ್ ಪ್ರೊಡ್ಯೂಸರ್ ದಿಲ್ ರಾಜು ನಿರ್ಮಾಣದ ಹಾಗೂ ನಿತಿನ್ ಲೀಡ್ನಲ್ಲಿ ಬಣ್ಣ ಹಚ್ಚಿರೋ ತಮ್ಮುಡು ಚಿತ್ರದಲ್ಲಿ ಕನ್ನಡತಿ ಕಮಾಲ್ ಮಾಡ್ತಿದ್ದಾರೆ.
ಇತ್ತೀಚೆಗೆ ಟ್ರೈಲರ್ ಲಾಂಚ್ ಕೂಡ ಆಗಿದ್ದು, ರತ್ನ ಪಾತ್ರವನ್ನು ಮಾಡಿರೋ ಸಪ್ತಮಿ ಗೌಡ, ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕ ಹಾಗೂ ಕೋ ಸ್ಟಾರ್ಸ್ ಬಗ್ಗೆ ಕೊಂಡಾಡಿದ್ದಾರೆ. ಅಷ್ಟೇ ಅಲ್ಲ, ಇದು ನನ್ನ ಮೊಟ್ಟ ಮೊದಲ ತೆಲುಗು ಸಿನಿಮಾ. ನನ್ನನ್ನು ಹರಸಿ ಹಾರೈಸಿ ಅಂತ ತೆಲುಗು ಪ್ರೇಕ್ಷಕರಲ್ಲಿ ಮನವಿ ಕೂಡ ಮಾಡಿದ್ದಾರೆ.
ಅಂದಹಾಗೆ ಇದು ಒನ್ಸ್ ಅಗೈನ್ ದಟ್ಟವಾದ ಕಾಡು, ಅಲ್ಲಿರೋ ಜನ, ಅವ್ರನ್ನ ಕಾಪಾಡೋಕೆ ಬರುವವನ ಕುರಿತ ಸಿನಿಮಾ.ಈ ಹಿಂದೆ ಕಾಂತಾರ ಸಿನಿಮಾದಲ್ಲೂ ಸಿಂಗಾರ ಸಿರಿ ಲೀಲಾ ಪಾತ್ರದಲ್ಲಿ ಸಪ್ತಮಿ ಇಂಥದ್ದೇ ಡಿ-ಗ್ಲಾಮರ್ ರೋಲ್ ಮಾಡಿದ್ರು. ಇದೀಗ ಮತ್ತೊಮ್ಮೆ ಆ ಕಾಡಿನಲ್ಲಿ ವಾಸಿಸುತ್ತಾ, ಅಂಥದ್ದೇ ಕಾಸ್ಟ್ಯೂಮ್ನಲ್ಲಿ ಕಾಣಸಿಗಲಿದ್ದಾರೆ. ರತ್ನ ಪಾತ್ರದಲ್ಲಿ ಸಪ್ತಮಿ ನಾಯಕನಟ ನಿತಿನ್ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಿತಿನ್ ಇಂಡಿಯಾ ಪರ ಆಡುವ ಆರ್ಚರಿ ಅಥ್ಲೀಟ್ ಆಗಿ ಬಣ್ಣ ಹಚ್ಚಿದ್ದು, ಅಕ್ಕನಿಗಾಗಿ ಕಾಡಲ್ಲಿ ಯುದ್ಧಕ್ಕೆ ಇಳಿಯುತ್ತಾನೆ.
ರಾಮಾಯಣದಲ್ಲಿ ಶ್ರೀರಾಮ ಲಂಕಾಸುರನ ವಿರುದ್ಧ ಯುದ್ಧಕ್ಕೆ ನಿಂತಾಗ ತನ್ನ ಬಿಲ್ಲಿನಿಂದ ಬಾಣಗಳನ್ನು ಬಿಟ್ಟು ಶತ್ರುಗಳ ಎದೆ ಸೀಳಿದಂತೆ, ಇಲ್ಲಿ ನಾಯಕನಟ ನಿತಿನ್ ಕೂಡ ತನ್ನ ಅಕ್ಕನಿಗಾಗಿ ಬಾಣಗಳ ಮೇಲೆ ಬಾಣಗಳನ್ನ ಬಿಡ್ತಾನೆ. ಇದೊಂದು ಅಕ್ಕ-ತಮ್ಮನ ಎಮೋಷನಲ್ ಆ್ಯಂಡ್ ಆ್ಯಕ್ಷನ್ ಅಡ್ವೆಂಚರ್ ಸ್ಟೋರಿ ಆಗಿದ್ದು, ಮೇಕಿಂಗ್ ನೆಕ್ಸ್ಟ್ ಲೆವೆಲ್ಗಿದೆ. ಸಿನಿಮಾ ಇದೇ ಜುಲೈ 4ಕ್ಕೆ ತೆರೆಗಪ್ಪಳಿಸುತ್ತಿದ್ದು, ನೋಡುಗರಿಗೆ ವಿಶ್ಯುವಲ್ ಟ್ರೀಟ್ ಕೊಡೋದ್ರಲ್ಲಿ ಡೌಟೇ ಇಲ್ಲ.
ಇದರೊಟ್ಟಿಗೆ ದಿ ರೈಸ್ ಆಫ್ ಅಶೋಕ ಅನ್ನೋ ಮತ್ತೊಂದು ಕ್ರಾಂತಿಕಾರಿ ರೆಟ್ರೋ ಸಿನಿಮಾದಲ್ಲೂ ನಟಿಸ್ತಿರೋ ಸಪ್ತಮಿ, ಅಭಿನಯ ಚತುರ ನೀನಾಸಂ ಸತೀಶ್ಗೆ ಜೋಡಿಯಾಗಿದ್ದಾರೆ. ಇಲ್ಲಿಯೂ ಸಹ ಹಳ್ಳಿ ಹುಡುಗಿಯಾಗಿ ಬಣ್ಣ ಹಚ್ಚಿದ್ದು, ಇನ್ನೂ ಮೇಕಿಂಗ್ ಹಂತದಲ್ಲೇ ಸಿನಿಮಾ ದೊಡ್ಡ ಮಟ್ಟದಲ್ಲಿ ಭರವಸೆ ಮೂಡಿಸಿದೆ. ಇತ್ತೀಚೆಗೆ ಸಪ್ತಮಿ ಬರ್ತ್ ಡೇ ವಿಶೇಷ ತಮ್ಮುಡು ಚಿತ್ರದ ಟ್ರೈಲರ್ ಹಾಗೂ ದಿ ರೈಸ್ ಆಫ್ ಅಶೋಕ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಒಟ್ಟೊಟ್ಟಿಗೆ ರಿವೀಲ್ ಆಗಿವೆ.