ಅಭಿಷೇಕ್ ಅಂಬರೀಶ್ ಹೀರೋ ಆಗೋಕೆ ಮೊದಲೇ ರೆಬೆಲ್ ಸ್ಟಾರ್ ಅಂಬರೀಶ್ ಕಣ್ಮುಚ್ಚಿದರು. ಆದ್ರೆ ಮಗ ಹೀರೋ ಆಗ್ಬೇಕು ಅನ್ನೋ ಆಶಯವನ್ನು ಸುಮಲತಾ ಅಂಬರೀಶ್ ನೆರವೇರಿಸಿದ್ರು. ಅಮರ್ ಹಾಗೂ ಬ್ಯಾಡ್ ಮ್ಯಾನರ್ಸ್ ಚಿತ್ರಗಳ ಮೂಲಕ ಅಭಿಷೇಕ್ ಅಂಬರೀಶ್ ಕೂಡ ಭವಿಷ್ಯದ ಭರವಸೆಯ ನಾಯಕನಟ ಅನ್ನೋದು ಪ್ರೂವ್ ಆಯ್ತು. ಆದ್ರೆ ಸಿನಿಮಾ ಕರಿಯರ್ ಜೊತೆ ಜೊತೆಗೆ ವೈಯಕ್ತಿಕ ಜೀವನ ಕೂಡ ಮುಖ್ಯ ಅಂತ ಗೆಳತಿ ಅವಿವಾ ಬಿದ್ದಪ್ಪ ಕೈ ಹಿಡಿದ ಅಭಿಷೇಕ್ ಗೆ ಗಂಡು ಮಗುವಾಗಿತ್ತು.
ಅಭಿಷೇಕ್- ಅವಿವಾ ಜೋಡಿಯ ಐದು ತಿಂಗಳ ಮಗುವಿಗೆ ಇಂದು ಅದ್ದೂರಿ ನಾಮಕರಣ ಮಹೋತ್ಸವ ನೆರವೇರಿಸಿದ್ದಾರೆ ಸುಮಲತಾ ಅಂಬರೀಶ್. ಬೆಂಗಳೂರಿನ ಪಂಚತಾರಾ ಹೋಟೆಲ್ ಗಳಲ್ಲಿ ಒಂದಾದ ತಾಜ್ ವೆಸ್ಟೆಂಡ್ ನಲ್ಲಿ ನಡೆದ ನಾಮಕರಣ ಮಹೋತ್ಸವದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನಿಗೆ ರಾಣಾ ಅಮರ್ ಅಂಬರೀಶ್ ಅಂತ ಅಧಿಕೃತವಾಗಿ ಹೆಸರು ಇಡಲಾಗಿದೆ.
ಇಷ್ಟಕ್ಕೂ ಅಷ್ಟು ದೊಡ್ಡ ಹೆಸರು ಬೇಕಾ ಅನ್ನೋರು ಇರ್ತಾರೆ. ಅದ್ರೆ ಅಮರ್ ಅನ್ನೋದು ರಾಣಾಗೆ ತಾತನ ಮೂಲ ಹೆಸರು. ಅಲ್ಲದೆ ತನ್ನ ತಂದೆ ಅಭಿಷೇಕ್ ಚೊಚ್ಚಲ ಸಿನಿಮಾದ ಹೆಸರು ಕೂಡ ಹೌದು. ಹಾಗಾಗಿಯೇ ರಾಣಾ ಜೊತೆ ಅಮರ್ ಅಂಬರೀಶ್ ಕೂಡ ಸೇರಿಸಲಾಗಿದೆ. ಇಷ್ಟಕ್ಕೂ ರಾಣಾ ಅಂದ್ರೆ ರಾಜ, ಕಿಂಗ್ ಎಂದರ್ಥ. ನಮ್ಮ ಭಾರತದಲ್ಲಿ ರಾಣಾ ಎಂಬ ಹೆಸರನ್ನ ಮೂಲತಃ ನಮ್ಮ ಹಿಂದೂ ರಜಪೂತ ದೊರೆಗಳು ಬಳಸಿದ ಬಿರುದು ಕೂಡ ಹೌದು. ಹಾಗಾಗಿ ರೆಬೆಲ್ ಸ್ಟಾರ್ ಕಿಂಗ್ ಡಮ್ ಗೆ ರಾಣಾನೇ ಈಗ ಯುವರಾಜ. ಸೋ ಈ ಹೆಸರು ಕೇಳಿ ಇಡೀ ಅಂಬರೀಶ್ ಅಭಿಮಾನಿ ಬಳಗ ದಿಲ್ ಖುಷ್ ಆಗಿದೆ. ಮಂಡ್ಯ ಜನತೆ ಜೊತೆಗೆ ಇಡೀ ಕರುನಾಡೇ ಆ ಮಗುವಿಗೆ ಶುಭವಾಗಲಿ ಅಂತಿದೆ.
ಇನ್ನು ರಾಣಾ ಅಮರ್ ಅಂಬರೀಶ್ ನಾಮಕರಣ ಮಹೋತ್ಸವದಲ್ಲಿ ಸುಮಲತಾ ಫ್ಯಾಮಿಲಿ ಹಾಗೂ ಪ್ರಸಾದ್ ಬಿದ್ದಪ್ಪ ಫ್ಯಾಮಿಲಿ ಕಂಪ್ಲೀಟ್ ಆಗಿ ಭಾಗವಹಿಸಿ, ಸಂಭ್ರಮಿಸಿದೆ. ಬಾದ್ ಷಾ ಕಿಚ್ಚ ಸುದೀಪ್ ದಂಪತಿ, ಯಶ್ ದಂಪತಿ, ರಾಕ್ ಲೈನ್ ವೆಂಕಟೇಶ್, ಗುರುಕಿರಣ್ ದಂಪತಿ ಸೇರಿದಂತೆ ಚಿತ್ರರಂಗದ ಸಾಕಷ್ಟು ಮಂದಿ ಗಣ್ಯರು ಈ ಶುಭಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ. ಇನ್ನು ನಟ ದರ್ಶನ್ ಈ ಫಂಕ್ಷನ್ ಗೆ ಬಾರದೇ ಇರೋದು ಹತ್ತು, ಹಲವು ಗುಮಾನಿಗಳಿಗೆ ಪುಷ್ಠಿ ನೀಡಿದಂತಾಗಿದೆ. ಇತ್ತೀಚೆಗೆ ಸುಮಲತಾ ಹಾಗೂ ಅಂಬರೀಶ್ ನಡುವೆ ನಡೆದ ಬೆಳವಣಿಗೆಗಳಿಂದ ಅವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ.
ಮನಸ್ತಾಪಗಳು, ಅಸಮಾಧಾನಗಳಿವೆ ಅನ್ನೋದು ಎದ್ದು ಕಾಣ್ತಿತ್ತು. ಇದೀಗ ದರ್ಶನ್ ಗೈರು, ಮಗ ಮತ್ತು ಮದರ್ ಇಂಡಿಯಾ ನಡುವೆ ಬಿರುಕು ಮೂಡಿದೆ ಅನ್ನೋದನ್ನ ಸಾರುತ್ತಿದೆ. ಅದೇನೇ ಇರಲಿ, ದರ್ಶನ್- ಸುಮಲತಾ ಬೇಗ ಒಂದಾಗಲಿ. ಸಣ್ಣಪುಟ್ಟ ಮನಸ್ತಾಪಳಿದ್ದರೂ ಮಾತುಕತೆ ಮೂಲಕ ಬಗೆ ಹರಿಯಲಿ.
ಇನ್ನು ರಾಣಾ ಅಮರ್ ಅಂಬರೀಶ್ ಸಖತ್ ಕ್ಯೂಟ್ ಆಗಿದ್ದು, ಅವರಿಗೆ ಯಶ್ ವಿಶೇಷ ತೊಟ್ಟಿಲು ಕೂಡ ಮಾಡಿಸಿದ್ದರು. ರೆಬೆಲ್ ಸ್ಟಾರ್ ಪರಂಪರೆಯ ಮೂರನೇ ತಲೆಮಾರು ರಾಣಾ ಆಗಿರೋದ್ರಿಂದ ಆ ಮಗುವಿನ ಲಾಲನೆ ಪಾಲನೆಗೆ ಸುಮಲತಾ ಅಂಬರೀಶ್ ಜಾಸ್ತಿ ಒತ್ತು ಕೊಡ್ತಿದ್ದಾರಂತೆ.