ಎರಡು ಮಾಸ್ ಇಂಜಿನ್ಗಳ ಮಹಾ ಸಂಗಮಕ್ಕೆ ಸಾಕ್ಷಿ ಆಗ್ತಿದೆ ಕರಾವಳಿ. ಡ್ರ್ಯಾಗನ್ ಮಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಇಂದಿನಿಂದ NTRNeel ಚಿತ್ರದ ಶೂಟಿಂಗ್ ಕಿಕ್ಸ್ಟಾರ್ಟ್ ಆಗ್ತಿದೆ. ಇಷ್ಟಕ್ಕೂ ಹೇಗಿರಲಿದೆ ಕೆಜಿಎಫ್ ಕ್ರಿಯೇಟರ್ ಹೊಸ ಪ್ರಪಂಚ..? ಬಾಲಿವುಡ್ನಿಂದ ಬಂದಿರೋ ತಾರಕ್ ಜೋಶ್ ಹೇಗಿದೆ ಅಂತೀರಾ..?
ರಾಜಮೌಳಿಯ ತ್ರಿಬಲ್ ಆರ್ ಸಿನಿಮಾದಿಂದ ಗ್ಲೋಬಲ್ ಸ್ಟಾರ್ ಆಗಿ ರಾರಾಜಿಸ್ತಿರೋ ಜೂನಿಯರ್ ಎನ್ಟಿಆರ್, ತಾತನಂತೆ ಅತ್ಯದ್ಭುತ ಕಲಾವಿದ ಅನ್ನೋದು ಗೊತ್ತೇಯಿದೆ. ವಿಶ್ವದಾದ್ಯಂತ ಫ್ಯಾನ್ ಫಾಲೋಯಿಂಗ್ ಇರೋ ತಾರಕ್, ಇತ್ತೀಚೆಗೆ ದೇವರ ಪಾರ್ಟ್-1 ಸಿನಿಮಾ ಮಾಡಿದ್ರು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತಾದ್ರೂ ಕಮರ್ಷಿಯಲಿ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಿತು.

ಕೊರಟಾಲ ಶಿವ ನಿರ್ದೇಶನದ ದೇವರ ಮೊದಲ ಭಾಗದ ಸಿನಿಮಾದ ಬಳಿಕ ಬಾಲಿವುಡ್ ಇವರಿಗೆ ರೆಡ್ ಕಾರ್ಪೆಟ್ ಹಾಸಿತು. ಅದ್ರಂತೆ ವಾರ್ ಚಿತ್ರದ ಸೀಕ್ವೆಲ್ ವಾರ್-2ನಲ್ಲಿ ಬಾಲಿವುಡ್ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಜೊತೆ ನಟಿಸಿದ್ದಾರೆ. ಅದ್ರ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗ್ತಿದ್ದು, ವಾರ್-2 ಶೂಟಿಂಗ್ ಮುಗಿಸಿರೋ ಜೂನಿಯರ್ ಎನ್ಟಿಆರ್, ಮತ್ತೊಂದು ಹೊಚ್ಚ ಹೊಸ ಸಿನಿಮಾದ ಶೂಟಿಂಗ್ ಸೆಟ್ಗೆ ಎಂಟ್ರಿ ಕೊಟ್ಟಿದ್ದಾರೆ.

ಇಂದಿನಿಂದ NTRNeel ಸಿನಿಮಾದ ಶೂಟಿಂಗ್ ಕಿಕ್ಸ್ಟಾರ್ಟ್ ಆಗ್ತಿದೆ. ಈ ಹಿಂದೆಯೇ ಅನೌನ್ಸ್ ಆಗಿದ್ದ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಡಿ ಈ ಚಿತ್ರ ಸೆಟ್ಟೇರಿದ್ದು, ಶೂಟಿಂಗ್ ನಮ್ಮ ಕರುನಾಡಿನ ಕರಾವಳಿಯಲ್ಲಿ ನಡೀತಿರೋದು ಇಂಟರೆಸ್ಟಿಂಗ್. ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಇಬ್ಬರೂ ಮಂಗಳೂರಿನಲ್ಲಿ ಅರಬ್ಬಿ ಸಮುದ್ರದ ಕಡಲಲ್ಲಿ ನಿಂತು ದೀರ್ಘ ಸಮಾಲೋಚನೆ ನಡೆಸ್ತಿರೋ ಫೋಟೋ ರಿವೀಲ್ ಆಗಿದೆ.

ಎರಡು ಮಾಸ್ ಇಂಜಿನ್ಗಳ ಮಹಾ ಸಂಗಮ ಆಗ್ತಿರೋ ವಿಚಾರ ಖುದ್ದು ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಮಾಹಿತಿ ನೀಡಿದೆ. ತ್ರಿಬಲ್ ಆರ್ ಹಾಗೂ ದೇವರ ಬಳಿಕ ನಟ ತಾರಕ್ಗೆ ಅವುಗಳಿಗಿಂತ ಕೊಂಚ ಹೆಚ್ಚಿನ ಮಾಸ್ ಇಮೇಜ್ ಕಟ್ಟಿಕೊಡೋದು ಪ್ರಶಾಂತ್ ನೀಲ್ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಡ್ರ್ಯಾಗನ್ ಅಂತ ಹೇಳಲಾಗ್ತಿರೋ ಈ ಸಿನಿಮಾ ಮಾಸ್ ಜಾತ್ರೆ ಆಗೋದ್ರಲ್ಲಿ ಅನುಮಾನವೇ ಇಲ್ಲ ಎನ್ನುವಂತಾಗಿದೆ.

ಅಂದಹಾಗೆ ಕರಾವಳಿ ಅನ್ನೋದು ನಟ ತಾರಕ್ಗೆ ಬರೀ ಒಂದು ಲೊಕೇಷನ್ ಅಲ್ಲ. ಅದೊಂದು ಎಮೋಷನ್. ಯಾಕಂದ್ರೆ ತನ್ನ ತಾಯಿ ಶಾಲಿನಿ ಅವರ ತವರು ಕುಂದಾಪುರ. ಹಾಗಾಗಿ ಅಮ್ಮನ ತವರಿನಲ್ಲಿ ಡ್ರ್ಯಾಗನ್ ಶೂಟಿಂಗ್ ಮಾಡ್ತಿರೋದು ತಾರಕ್ಗೆ ಒಂಥರಾ ಸ್ಪೆಷಲ್ ಮೊಮೆಂಟ್ ಅನಿಸಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ ಮೂಲಕ ಕರಾವಳಿಯ ಒಂದಷ್ಟು ದೇವಸ್ಥಾನಗಳನ್ನ ಮಡದಿ ಹಾಗೂ ತಾಯಿ ಸಮೇತ ಸುತ್ತಿದ್ರು ಜೂನಿಯರ್ ಎನ್ಟಿಆರ್.

ಇನ್ನು ಕೆಜಿಎಫ್ ಎರಡು ಭಾಗಗಳ ನಂತ್ರ ಸಲಾರ್ ಎರಡು ಭಾಗಗಳನ್ನ ತೆರೆಗೆ ತರೋಕೆ ಸಜ್ಜಾಗಿದ್ದ ಕನ್ನಡದ ಮಾನ್ಸ್ಟರ್ ಡೈರೆಕ್ಟರ್ ನೀಲ್, ಸಲಾರ್-2ಗೆ ಒಂದು ಸಣ್ಣ ಗ್ಯಾಪ್ ತೆಗೆದುಕೊಂಡಿದ್ದಾರೆ. ಅದಕ್ಕೂ ಮುನ್ನ ಡ್ರ್ಯಾಗನ್ ಸಿನಿಮಾದ ಶೂಟಿಂಗ್ ಮುಗಿಸೋಕೆ ಕಥೆಯನ್ನ ಬಹಳ ಕ್ರಿಸ್ಪಿಯಾಗಿ ಸಿದ್ದಗೊಳಿಸಿಕೊಂಡಿದ್ದಾರಂತೆ. ಇದು ಕೆಜಿಎಫ್ ಹಾಗೂ ಸಲಾರ್ಗಿಂತ ವಿನೂತನ ಅನುಭವ ನೀಡಲಿದ್ದು, ಇಲ್ಲಿ ಕತ್ತಲ ಸಮ್ರಾಜ್ಯದಿಂದ ಹೊರಬಂದು ಸಿನಿಮಾನ ಕಟ್ಟಿಕೊಡೋ ನಿರೀಕ್ಷೆಯಿದೆ. ಅದೇನೇ ಇರಲಿ, ತಾರಕ್ ಹೀಗೆ ಕರಾವಳಿಯಲ್ಲಿ ಡ್ರ್ಯಾಗನ್ ಶುರು ಮಾಡಿರೋದು ಅವರಿಗಿಂತ ಜಾಸ್ತಿ ನಮ್ಮ ಕನ್ನಡಿಗರಿಗೆ ಖುಷಿ ಕೊಟ್ಟಿದೆ.





