ಶಿವರಾಜ್ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾಗೆ ಸಾವು ಬಯಸಿದ್ದ ಮಡೆನೂರು ಮನು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಜೈಲಿಂದ ಹೊರ ಬರ್ತಿದ್ದಂತೆ ನಾನವನಲ್ಲ ನಾನವನಲ್ಲ ಅಂದಿದ್ದ ಮನು, ಕೊನೆಗೂ ಆ ಆಡಿಯೋ ತನ್ನದೇ ಅಂತ ತಪ್ಪು ಒಪ್ಪಿಕೊಂಡಿದ್ದಾನೆ. ಕ್ಷಮಿಸಿಬಿಡಿ ಅಣ್ಣಾ ಅಂತ ಧ್ರುವ ಸರ್ಜಾ ಬೆನ್ನಿಗೆ ಬಿದ್ದಿದ್ದಾರೆ.
ರೇಪ್ ಕೇಸ್ನಲ್ಲಿ ತನ್ನ ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ರಿಲೀಸ್ಗೂ ಮೊದಲೇ ಜೈಲು ಪಾಲಾಗಿದ್ದ ಕಾಮಿಡಿ ಕಿಲಾಡಿ ಮಡೆನೂರು ಮನು, ಬೇಲ್ ಪಡೆದು ಪರಪ್ಪನ ಅಗ್ರಹಾರದಿಂದ ಹೊರಬಂದಿದ್ದಾರೆ. ಅದ್ರೆ ಹೊರಗಿರೋ ಬದಲಿಗೆ ತಾನು ಒಳಗೇ ಇರಬೇಕಿತ್ತು ಅಂತ ಪಶ್ಚಾತ್ತಾಪದಲ್ಲಿ ಮಿಂದೇಳುತ್ತಿದ್ದಾರೆ ಈ ಮಹಾನ್ ಕಿಲಾಡಿ ಕಲಾವಿದ ಮಡೆನೂರು ಮನು.
ಜೈಲಿಂದ ಹೊರಗೆ ಬಂದ್ರೂ ಸಹ ನೆಮ್ಮದಿ ಇಲ್ಲದಂತಾಗಿದೆ. ಅದಕ್ಕೆ ಕಾರಣ ಆತನೇ ಮಾಡಿಕೊಂಡಿದ್ದ ಮಹಾ ಎಡವಟ್ಟು. ಕುಡಿದ ಮತ್ತಿನಲ್ಲಿ ಶಿವರಾಜ್ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾರಿಗೆ ಸಾವು ಬಯಸಿದ್ದ ಮನು, ಅವ್ರ ನಡುವೆ ಇಂಡಸ್ಟ್ರಿ ಆಳೋಕೆ ಬಂದಿರೋ ಗಂಡುಗಲಿ ನಾನು ಅಂತ ದರ್ಪದ ಮಾತುಗಳನ್ನ ಆಡಿದ್ದ ಆಡಿಯೋ ವೈರಲ್ ಆಗಿತ್ತು. ಅದಕ್ಕೆ ಈ ಮೂವರೂ ಸ್ಟಾರ್ಗಳ ಫ್ಯಾನ್ಸ್, ಫಿಲ್ಮ್ ಚೇಂಬರ್ ನಿಂದ ಆಕ್ರೋಶ ವ್ಯಕ್ತವಾಗಿತ್ತು. ಚಿತ್ರರಂಗದಿಂದ ಆತನನ್ನ ಬ್ಯಾನ್ ಕೂಡ ಮಾಡಲಾಗಿದೆ.
ಇತ್ತೀಚೆಗೆ ಜೈಲಿಂದ ಹೊರಬಂದಾಗ ಅದು ನನ್ನ ವಾಯ್ಸ್ ಅಲ್ಲ, ನಾನವನಲ್ಲ ಅಂತ ಉಪೇಂದ್ರ ಬುದ್ದಿವಂಯ ಚಿತ್ರದ ಡೈಲಾಗ್ ರೀತಿ ನುಣಿಚಿಕೊಂಡಿದ್ದ ಮನು, ಇದೀಗ ಕೊನೆಗೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ವಾಟ್ಸಾಪ್ ಚಾಟ್ ಮೂಲಕ ನಟ ಧ್ರುವ ಸರ್ಜಾ ಅವರಿಗೆ ಆಡಿಯೋ ಮೆಸೇಜ್ ಕಳಿಸಿ, ಕ್ಷಮಿಸುವಂತೆ ದುಂಬಾಲು ಬಿದ್ದಿದ್ದಾರೆ. ಅದಕ್ಕೆ ಧ್ರುವ ಸರ್ಜಾ ಕೂಡ ದೊಡ್ಡ ಮನಸ್ಸಿನಿಂದಲೇ ಉತ್ತರ ಕೊಟ್ಟಿದ್ದು, ಫ್ಯಾಮಿಲಿಯನ್ನ ಚೆನ್ನಾಗಿ ನೋಡಿಕೊಳ್ಳಿ. ನನ್ನದೇನು ಇಲ್ಲ. ನನ್ನ ಬಗ್ಗೆ ಯೋಚನೆಯೇ ಮಾಡಬೇಡಿ. ಶಿವಣ್ಣ ಸರ್ ಹಾಗೂ ದರ್ಶನ್ ಸರ್ ಹಿರಿಯರಿದ್ದಾರೆ. ಅವರ ಬಳಿ ಮಾತಾಡಿ ಎಂದಿದ್ದಾರೆ.
ಇನ್ನು ಇದಕ್ಕೆ ಶಿವಣ್ಣ ಹಾಗೂ ದರ್ಶನ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ..? ಒಂದು ವೇಳೆ ಕ್ಷಮಿಸಿದ್ರೆ ಫಿಲ್ಮ್ ಚೇಂಬರ್ ಅಸಹಕಾರ ಹೆಸರಲ್ಲಿ ಹೇರಿರುವ ಬ್ಯಾನ್ನ ಲಿಫ್ಟ್ ಮಾಡ್ತಾರಾ..? ಮತ್ತೆ ಮನು ಬಣ್ಣ ಹಚ್ಚಿ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬದುಕು ಕಟ್ಟಿಕೊಳ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.