ಜಸ್ಟ್ ಟ್ರೈಲರ್ನಿಂದಲೇ ನ್ಯಾಷನಲ್ ಅವಾರ್ಡ್ ತರುವ ಮುನ್ಸೂಚನೆ ನೀಡಿದೆ ದುನಿಯಾ ವಿಜಯ್ ಲ್ಯಾಂಡ್ಲಾರ್ಡ್ ಮೂವಿ. ಯೆಸ್.. ಕ್ರಾಂತಿಯ ಕಿಡಿ ಹೊತ್ತಿಸಿರೋ 80ರ ದಶಕದ ಅಸಮಾನತೆ, ಶೋಷಣೆಯ ಕಥಾನಕವಿದು. ಅಷ್ಟೇ ಅಲ್ಲ ಅದ್ರ ವಿರುದ್ಧ ರೆಬೆಲ್ ಆಗುವ ಜನರು, ಮಚ್ಚು ಹಿಡಿದು ರಕ್ತ ಹರಿಸೋ ಕಥೆಯಿದು. ಇಷ್ಟಕ್ಕೂ ಟ್ರೈಲರ್ ಹೇಗಿದೆ..? ಕಣ್ಣೀರು ಹಾಕಿದ್ಯಾಕೆ ಪ್ರೊಡ್ಯೂಸರ್..? ಅದಕ್ಕೆ ಸಮಾಧಾನ ಪಡಿಸಿದ್ಹೇಗೆ ಹೀರೋ ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ ನೋಡಿ.
- ಕ್ರಾಂತಿಯ ಕಿಡಿ ಹೊತ್ತಿಸಿದ ವಿಜಯ್ ಲ್ಯಾಂಡ್ಲಾರ್ಡ್
- ಆಳಿದವರು & ಅಳಿಯದೆ ಉಳಿದವರ ನಡುವೆ ಸಂಘರ್ಷ
- ಕುವೆಂಪು-ಕಾರಂತರ ಕೃತಿಗಳ ಆತ್ಮ..ಮಾನವೀಯತೆಯೇ ಪರಮಾತ್ಮ
- ವಿಜಯ್ v/s ರಾಜ್ ಶೆಟ್ಟಿ.. ರಚ್ಚು ರಗಡ್.. ರಿತು ಪರ್ವ
ಇದು ಇದೇ ಜನವರಿ 23ಕ್ಕೆ ತೆರೆಗೆ ಬರೋಕೆ ಸಜ್ಜಾಗಿರೋ ಲ್ಯಾಂಡ್ಲಾರ್ಡ್ ಸಿನಿಮಾದ ಟ್ರೈಲರ್ ದೃಶ್ಯಗುಚ್ಚ. 80ರ ದಶಕದಲ್ಲಿದ್ದ ಅಸಮಾನತೆ, ಒಂದೊತ್ತಿನ ಕೂಳಿಗಾಗಿ ಹಳ್ಳಿಗಳಲ್ಲಿ ಜನ ಪರದಾಡುತ್ತಿದ್ದ ಪರಿ, ಅಲ್ಲಿನ ಊರುಗಳ ಸಾಹುಕಾರರಲ್ಲಿದ್ದ ದರ್ಪ, ದವಸ-ಧಾನ್ಯ ಬೆಳೆದು ಅದನ್ನ ಆಳುವವರಿಗೆ ಒಪ್ಪಿಸುವುದು, ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಆಳುವವರು. ಅವರುಗಳ ನಡುವೆ ರೆಬೆಲ್ ಆಗಿ, ತಮ್ಮ ಹಕ್ಕುಗಳಿಗಾಗಿ ಹೋರಾಡುವ ಶ್ರೀಸಾಮಾನ್ಯ ಜನ. ಅದ್ರಲ್ಲೂ ಅಳಿಯದೇ ಉಳಿದವನೊಬ್ಬನ ಚಿತ್ರಣ ಈ ಲ್ಯಾಂಡ್ಲಾರ್ಡ್.
ನಮ್ಮ ನೆಲದ ಮಣ್ಣಿನ ಕಥೆಗಳಿಗೆ ಸಿನಿಮಾ ರೂಪ ಕೊಡೋದ್ರಲ್ಲಿ ಮಾಸ್ಟರ್ ಅನಿಸಿಕೊಂಡಿರೋ ಜಡೇಶ್ ಕೆ ಹಂಪಿ, ಗುರು ಶಿಷ್ಯರು ಸಿನಿಮಾದ ಬಳಿಕ, ಕಾಟೇರ ಚಿತ್ರಕ್ಕೆ ಕಥೆ ಒದಗಿಸಿದ ನಂತ್ರ ಈ ಲ್ಯಾಂಡ್ಲಾರ್ಡ್ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತಮಿಳಿನ ಧನುಷ್ ನಟನೆಯ ಕರ್ಣನ್, ಅಸುರನ್ ಸಿನಿಮಾಗಳನ್ನ ನೋಡಿ, ನಮ್ಮಲ್ಲಿ ಯಾಕೆ ಇಂತಹ ಸಂಘರ್ಷದ ಕಥೆಗಳು ಹುಟ್ಟಲ್ಲ. ತೆರೆಗೆ ಬರಲ್ಲ ಅಂತ ಗೊಣಗಿಕೊಳ್ಳೋರಿಗೆ ಈ ಸಿನಿಮಾ ತಕ್ಕ ಉತ್ತರ ನೀಡಲಿದೆ. ಅಂಥದ್ದೊಂದು ಕ್ರಾಂತಿಯ ಕಿಡಿ ಹೊತ್ತಿಸಲಿದೆ ಈ ಚಿತ್ರ.
ದುನಿಯಾ ವಿಜಯ್ ಹಾಗೂ ರಚಿತಾ ರಾಮ್ 50 ಪ್ಲಸ್ ವಯಸ್ಸಿನ ದಂಪತಿಯಾಗಿ ಲೀಡ್ನಲ್ಲಿ ಕಾಣಿಸಿಕೊಂಡಿದ್ದು, ರಾಚಯ್ಯ ಹಾಗೂ ನಿಂಗವ್ವನಾಗಿ ಮಿಂಚು ಹರಿಸಿದ್ದಾರೆ. ಇನ್ನೂ ದುನಿಯಾ ವಿಜಯ್ ಪುತ್ರಿ ರಿತನ್ಯಾ ಈ ಚಿತ್ರದಿಂದ ಬಣ್ಣದಲೋಕಕ್ಕೆ ಕಾಲಿಟ್ಟಿದ್ದು, ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾಣಸಿಗ್ತಾರೆ. ಒಂದ್ಕಡೆ ಶೋಷಿತರ ಕುಟುಂಬ ಹೆಣ್ಣು ಮಗಳಾಗಿ, ಸರ್ಕಾರದ ಆದೇಶದಂತೆ ಅವರ ವಿರುದ್ಧವೇ ಕ್ರಮ ಕೈಗೊಳ್ಳು ಮುಂದಾಗುವಂತಹ ಸಂದಿಗ್ಧ ಪಾತ್ರದಿಂದ ರಿತನ್ಯ ಸಿನಿ ಪರ್ವ ಆರಂಭಿಸಿದ್ದಾರೆ.
ಕಾಳುಗಳನ್ನ ಬೆಳೆದವರಿಗೆ ಕಾಳುಗಳನ್ನ ನೀಡದೆ ಕಾಸುಗಳನ್ನ ನೀಡೋಕಾಗುತ್ತಾ ಅಂತ ದರ್ಪ ತೋರುವ ಸಾಹುಕಾರರ ವಿರುದ್ಧ ಜನರಿಗೆ ಕಾನೂನು, ಕಟ್ಟಲೆಗಳನ್ನ ಅರ್ಥೈಸುವವನ ಪಾತ್ರದಲ್ಲಿ ಶಿಶಿರ್ ಬೈಕಾಡಿ ಗಮನ ಸೆಳೆಯುತ್ತಾರೆ. ಅಲ್ಲದೆ, ಗಾಳಿಪಟ ಭಾವನಾ, ರಾಕೇಶ್ ಅಡಿಗ, ಅಚ್ಯುತ್, ಉಮಾಶ್ರೀ, ಮಿತ್ರ, ಜಹಾಂಗೀರ್.. ಹೀಗೆ ಸಾಕಷ್ಟು ಮಂದಿ ಕಲಾವಿದರ ದಂಡಿದೆ. ಮಿಗಿಲಾಗಿ ಖಡಕ್ ಖಳನಾಯಕನಾಗಿ, ಹಳ್ಳಿಗಳ ಪಾಲಿಗೆ ಸರ್ಕಾರವೇ ಆಗಿ ರಾಜ್ ಬಿ ಶೆಟ್ಟಿ ಹುಬ್ಬೇರಿಸುತ್ತಾರೆ. ಇಲ್ಲಿ ರಾಜ್ ಶೆಟ್ಟಿ ರೂಲರ್ ಆಗಿ ತನ್ನ ಅಧಿಪತ್ಯ ಉಳಿಸಿಕೊಳ್ಳಲು ಹಳ್ಳಿಗಳಲ್ಲಿನ ಅಮಾಯಕರನ್ನ ಹೇಗೆಲ್ಲಾ ಬಳಸಿಕೊಳ್ತಾರೆ..? ಶೋಷಿಸ್ತಾರೆ ಅನ್ನೋದನ್ನ ಕಾಣಬಹುದು.
- ಬರವಣಿಗೆ ಲ್ಯಾಂಡ್ಲಾರ್ಡ್ ಗತ್ತು.. ಮಾಸ್ತಿ ಈ ಚಿತ್ರದ ಆಸ್ತಿ
- 20 ವರ್ಷಗಳ ಬೆಂಕಿ.. ರಕ್ತದ ಕೋಡಿ.. ಹೋರಾಟದ ಆಟ..!
ಸಿನಿಮಾದ ಹುಟ್ಟಿಗೆ ಬರವಣಿಗೆಯೇ ಕಾರಣ. ಸದ್ಯ ಲ್ಯಾಂಡ್ಲಾರ್ಡ್ ಮೂವಿಯ ಟ್ರೈಲರ್ ಬರವಣಿಗೆಯಿಂದಲೇ ಭೇಷ್ ಅನಿಸಿಕೊಂಡಿದೆ. ಬಹುಶಃ ಈ ಟ್ರೈಲರ್ನಂತೆ ಇಡೀ ಸಿನಿಮಾ ಇದ್ದುಬಿಟ್ರೆ, ಸ್ಟೇಟ್ ಅವಾರ್ಡ್ ಅಷ್ಟೇ ಅಲ್ಲ, ನ್ಯಾಷನಲ್ ಅವಾರ್ಡ್ ಪಡೆಯೋದು ಕಷ್ಟವೇನಲ್ಲ. ಡೈರೆಕ್ಟರ್ ಜಡೇಶ್ ಕೆ ಹಂಪಿ ಅಂಥದ್ದೊಂದು ಕಥೆಯನ್ನ ಹೆಣೆದಿದ್ದಾರೆ. ಸಕ್ಸಸ್ಫುಲ್ ಸಿನಿಮಾಗಳ ಡೈಲಾಗ್ ರೈಟರ್ ಮಾಸ್ತಿ ಮತ್ತೊಮ್ಮೆ ಚಿತ್ರರಂಗದ ಆಸ್ತಿ ಅನ್ನೋದನ್ನ ಇದ್ರಿಂದ ಹೇಳಲು ಹೊರಟಂತಿದೆ. ಒಂದೊಂದು ಡೈಲಾಗ್ ಕೂಡ ಹೃದಯ ಮುಟ್ಟುತ್ತೆ, ಬ್ರೈನ್ಗೆ ತಟ್ಟುತ್ತೆ.
ಟ್ರೈಲರ್ನ ಆರಂಭದಲ್ಲೇ ಕುವೆಂಪು ಅವ್ರ ಮಲೆಗಳಲ್ಲಿ ಮದುಮಗಳು, ಕಾರಂತರ ಚೋಮನ ದುಡಿ ಅನ್ನೋ ಅಮರ ಕಾವ್ಯಗಳಲ್ಲಿನ ಕಥೆಯಲ್ಲಿ ಈ ಸಿನಿಮಾದ ಕಥೆ ತನ್ನ ಆತ್ಮವನ್ನು ಕಂಡುಕೊಂಡಿದೆ ಎನ್ನಲಾಗಿದೆ. ಇದು ನಿಜವೂ ಕೂಡ. ಸಾಮಾನ್ಯದಲ್ಲಿ ಅಸಾಮಾನ್ಯವನ್ನು, ಪ್ರತಿ ಹೃದಯಲ್ಲಿ ಮಾನವೀಯತೆಯನ್ನ ಕಲಿಸಿದ ಕುವೆಂಪು-ಕಾರಂತರ ಕೃತಿಗಳಂತೆ ಲ್ಯಾಂಡ್ಲಾರ್ಡ್ ಕೂಡ ಬಹುದೊಡ್ಡ ಕಲಾಕೃತಿಯಾಗಿ ಹೊರಹೊಮ್ಮಲಿದೆ.
ಸಿನಿಮಾಗಾಗಿ ಸಾಲ್ಟ್ ಅಂಡ್ ಪೆಪ್ಪರ್ ಲುಕ್ನಲ್ಲಿ ಬಣ್ಣ ಹಚ್ಚಿದ ರಚಿತಾ ರಾಮ್ ಹಾಗೂ ವಿಜಯ್ ಅವ್ರ ನಿರ್ಧಾರವನ್ನು ಮೆಚ್ಚಲೇಬೇಕು. ಅಲ್ಲದೆ, ವಿಜಯ್ ಕುಮಾರ್ ಈ ಸಿನಿಮಾದಿಂದ ತನ್ನಲ್ಲಿದ್ದ ಆ ಇಂಟೆನ್ಸ್ ಕಲಾವಿದನನ್ನ ಬಡಿದೆಬ್ಬಿಸಿ, ಶಿಳ್ಳೆ-ಚಪ್ಪಾಳೆ ಗಿಟ್ಟಿಸೋ ಅಂತಹ ಔಟ್ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿರೋ ಮುನ್ಸೂಚನೆ ನೀಡಿದ್ದಾರೆ.
- ಭಾವುಕರಾದ ಪ್ರೊಡ್ಯೂಸರ್.. ಅಪ್ಪಿ ಸಮಾಧಾನಿಸಿದ ಸ್ಟಾರ್
- ಅಣ್ಣಾವ್ರ ಬಂಗಾರದ ಮನುಷ್ಯ ಪಾತ್ರಕ್ಕೆ ಹೋಲಿಸಿದ ಅನ್ನದಾತ
ಯೆಸ್.. 14 ವರ್ಷಗಳ ನಂತ್ರ ಸಾರಥಿ ಚಿತ್ರದ ಬಳಿಕ ಲ್ಯಾಂಡ್ಲಾರ್ಡ್ ಸಿನಿಮಾಗಾಗಿ ಬಂಡವಾಳ ಹಾಕಿ ಮತ್ತೆ ಚಿತ್ರರಂಗದತ್ತ ಮುಖ ಮಾಡಿರೋ ನಿರ್ಮಾಪಕ ಸತ್ಯ ಪ್ರಕಾಶ್ ಹಾಗೂ ಅವ್ರ ಮಗ ಹೇಮಂತ್ ಗೌಡ ಕೋಟಿ ಕೋಟಿ ಹಣ ಸುರಿದಿದ್ದಾರೆ. ಅವ್ರ ಆ ರಿಚ್ ಪ್ರೊಡಕ್ಷನ್ ವ್ಯಾಲ್ಯೂಸ್ ಪ್ರತಿ ಫ್ರೇಮ್ನಲ್ಲೂ ಎದ್ದು ಕಾಣ್ತಿದೆ. ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾದ ಪಾತ್ರಕ್ಕೆ ವಿಜಯ್ರ ರಾಚಯ್ಯ ಪಾತ್ರವನ್ನು ಹೋಲಿಸಿದ ನಿರ್ಮಾಪಕರು, ರಾಜ್ಯದಾದ್ಯಂತ 300ಕ್ಕೂ ಅಧಿಕ ಥಿಯೇಟರ್ಗಳಲ್ಲಿ ರಿಲೀಸ್ ಮಾಡೋದಾಗಿ ಹೇಳಿದ್ರು.
ಅಲ್ಲದೆ, ದುನಿಯಾ ವಿಜಯ್ ಹಾಗೂ ನಿರ್ದೇಶಕರೊಂದಿಗೆ ನಿರ್ಮಾಪಕ ಸತ್ಯ ಪ್ರಕಾಶ್ ಮುನಿಸಿಕೊಂಡಿದ್ದಾರೆ. ಅವರುಗಳ ನಡುವೆ ಮನಸ್ತಾಪ ಬಂದು ಕಂದಕ ಉಂಟಾಗಿದೆ ಎನ್ನಲಾಗಿತ್ತು. ಅದನ್ನೆಲ್ಲಾ ನೆನೆದು ನಾವು ಚೆನ್ನಾಗೇ ಇದ್ದೀವಿ ಅಂತ ಭಾವುಕವಾಗಿ ಕಣ್ಣೀರು ಹಾಕಿದ ಅನ್ನದಾತ ಸತ್ಯ ಪ್ರಕಾಶ್ರನ್ನ ಅಪ್ಪಿಕೊಂಡು, ಸಮಾಧಾನಿಸಿ, ನಿಮ್ಮೊಂದಿಗೆ ನಾನಿದ್ದೇನೆ ಅಂದ್ರು ದುನಿಯಾ ವಿಜಯ್.
ಒಟ್ಟಾರೆ ಲ್ಯಾಂಡ್ಲಾರ್ಡ್ ಕಂಟೆಂಟ್, ಪಾತ್ರಗಳು, ಮೇಕಿಂಗ್ ಹಾಗು ಕಥೆ ಸಿಕ್ಕಾಪಟ್ಟೆ ಪ್ರಾಮಿಸಿಂಗ್ ಆಗಿದ್ದು, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುವ ಲಕ್ಷಣ ತೋರಿದೆ. ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಇಷ್ಟ ಪಡುವಂತಹ, ರೈತರ ಕುರಿತ ಕ್ರಾಂತಿಕಾರಿ ಚಿತ್ರವಾಗಿ ತಯಾರಾಗಿದೆ. ಸೋ.. ಜನವರಿ 23ಕ್ಕೆ ಮಿಸ್ ಮಾಡ್ಕೋಬೇಡಿ ಲ್ಯಾಂಡ್ಲಾರ್ಡ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





